ಸಿಂದಗಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮನವಿ
ಸಿಂದಗಿ: ಗ್ರಾಮೀಣ ಬಾಗದ ಸೂಕ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ವಿಜಯಪುರದ ಇದೇ ೩೦ ಮತ್ತು ೩೧ ರಂದು ವಿಜಯಪುರದ ಕಂದಕಲ್ ಹಣಮಂತ್ರಾಯ ರಂಗ ಮಂದಿರದಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಈ ತಾಲೂಕಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಹಿತ್ಯ ಪರಿಷತ್ತು ಬರೀ ಹಾಸೀಂಪೀರ ವಾಲಿಕಾರ ಹಾಗೂ ಕೆಲ ತಾಲೂಕು ಅದ್ಯಕ್ಷರ ಸ್ವತ್ತಲ್ಲ. ಅದು ಎಲ್ಲ ಕನ್ನಡಿಗರ ಸೊತ್ತು ಅದು ಎಲ್ಲರ ಮನೆಗಂಳದಲ್ಲಿ ಎಲ್ಲ ಮನದಲ್ಲಿ ಪ್ರಜ್ವಲಿಸಬೇಕು ಅಂತೆಯೇ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಹಿಂದಿನ ಅಧ್ಯಕ್ಷರ ಕೆಲಸದ ಒತ್ತಡದ ಮಧ್ಯದಲ್ಲಿ ಕಳೆದ ೨ ವರ್ಷಗಳಿಂದ ಸಿಂದಗಿಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಕೊರತೆ ಉಂಟಾಗಿತ್ತು. ಅವುಗಳನ್ನು ಚುರಕುಗೊಳಿಸಲು ನೂತನ ಅದ್ಯಕ್ಷ ಶಿವಾನಂದ ಬಡಾನೂರ ಅವರನ್ನು ನೇಮಕ ಮಾಡಲಾಗಿದೆ. ಜ.೧೦ರ ಒಳಗಾಗಿ ಸಿಂದಗಿ ತಾಲೂಕು ಸಮ್ಮೇಳನ ಹಮ್ಮಿಕೊಳ್ಳುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದ ಅವರು, ಸಿಂದಗಿ-ಇಂಡಿ ಭಾಗದಲ್ಲಿ ಮಹಿಳಾ ಜನಪದ ಸಾಹಿತಿಗಳು, ಸಾಂಸ್ಕೃತಿಕ ಕಲಾವಿದರು, ಕವಿಯತ್ರಿಯರು ಹೆಚ್ಚಿನ ಪ್ರಮಾಣದಲ್ಲಿದ್ದು ಸಾಹಿತ್ಯ ಕೃಷಿ ಹೊರಬರಲು ಅವರಿಗೆ ವೇದಿಕೆ ಕೊರತೆಯಿದೆ. ಮುಂದಿನ ದಿನಮಾನಗಳಲ್ಲಿ ವೇದಿಕೆ ಕಲ್ಪಿಸಿಕೊಡುವ ಕೆಲಸ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತದೆ. ಈ ಜಿಲ್ಲಾ ಸಮ್ಮೇಳನದಲ್ಲಿ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಸಕ್ತರು ಹೆಸರುಗಳನ್ನು ಸೂಚಿಸಿದರೆ ಅವರಲ್ಲಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಡಲಾಗುವುದು. ಇದು ಮಹಿಳೆಯರ ಕಾರ್ಯಕ್ರಮವಾಗಿದ್ದು ಶಾಸಕರು, ಸಚಿವರನ್ನು ಹೊರತು ಪಡಿಸಿದರೆ ಎಲ್ಲರೂ ಮಹಿಳೆಯರೇ ವೇದಿಕೆ ಮೇಲಿರುತ್ತಾರೆ. ಈ ಸಮ್ಮೇಳನದಲ್ಲಿ ಉಳಿದುಕೊಂಡ ಮಹಿಳಾ ಸಾಹಿತಿಗಳಿಗೆ ಮತ್ತೊಂದು ವೇದಿಕೆ ಕಲ್ಪಿಸೋಣ. ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲೆಯ ಮಹಿಳಾ ಸಾಹಿತಿಗಳ ಹೆಸರುಗಳನ್ನು ಗುರುತಿಸಿ ಆಯ್ಕೆ ಮಾಡಲಾಗುವುದು. ಅದಕ್ಕೆ ಜಿಲ್ಲೆಯ ಎಲ್ಲ ಮಹಿಳಾ ಮಣಿಗಳ ಸಹಕಾರ ಮುಖ್ಯ. ಈ ಸಮ್ಮೇಳನವು ಅರ್ಥಪೂರ್ಣ ಹಾಗೂ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಶಿಕ್ಷಕಿ ಶೋಬಾ ಚಿಗರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗೋಲ್ಲಾಳಪ್ಪಗೌಡ ಪಾಟೀಲ ಗೊಲಗೇರಿ, ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ, ಸಂಗನಗೌಡ ಪಾಟೀಲ ಅಗಸಬಾಳ, ಸುನಂದಾ ಯಂಪೂರೆ, ಎಸ್.ಬಿ. ಚೌಧರಿ, ವರ್ಷಾ ಪಾಟೀಲ, ಜಯಶ್ರೀ ಹದನೂರ, ಶಶಿಕಲಾ ಅಂಗಡಿ, ಬಸಮ್ಮ ನಾಗರಳ್ಳಿ, ನೀಲಾಂಬಿಕೆ ಶಿವಶಿಂಪಿ, ನೀಲಮ್ಮ ಬಡಿಗೇರ, ಸವಿತಾ ಕಲಬುರ್ಗಿ, ರೂಪಾ ಗಿರಣ ಸೇರಿದಂತೆ ಅನೇಕರಿದ್ದರು.

