ಜಮಖಂಡಿ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯಲ್ಲಿ ಅಗ್ನಿಶಾಮಕ ದಳದ ಅಣುಕು ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: “ಅಗ್ನಿ ಅವಘಡಗಳು ಹೇಳಿ ಬರುವುದಿಲ್ಲ; ಆದರೆ ಮುನ್ನೆಚ್ಚರಿಕೆ ಮತ್ತು ಸಮಯಪ್ರಜ್ಞೆ ಇದ್ದರೆ ಅಪಾಯವನ್ನು ತಪ್ಪಿಸಬಹುದು” ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಜಮಖಂಡಿಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿ ನಂದಿಸುವ ವಿಧಾನಗಳ ಅಣುಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಮಖಂಡಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಂ.ಎಸ್. ಹೂಗಾರ, “ಅಗ್ನಿ ಅವಘಡ ಸಂಭವಿಸಿದಾಗ ಗಾಬರಿಯಾಗದೇ ಧೈರ್ಯದಿಂದ ಸೂಕ್ತ ಕ್ರಮ ಕೈಗೊಂಡರೆ ಜೀವಹಾನಿ ಹಾಗೂ ಆಸ್ತಿಪಾಸ್ತಿಯ ನಷ್ಟವನ್ನು ಬಹುಮಟ್ಟಿಗೆ ತಡೆಯಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಗ್ನಿ ಸುರಕ್ಷತೆಯ ಮೂಲಭೂತ ಜ್ಞಾನ ಹೊಂದಿರುವುದು ಇಂದಿನ ಅಗತ್ಯವಾಗಿದೆ” ಎಂದು ಹೇಳಿದರು.
ಮನೆಗಳಲ್ಲಿ ಅಡುಗೆ ಅನಿಲ (LPG) ಸೋರಿಕೆಯಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾಗುವ ಬೆಂಕಿಯನ್ನು ನಿಯಂತ್ರಿಸುವ ವಿಧಾನಗಳು ಹಾಗೂ ಅಗ್ನಿ ನಂದಿಸುವ ಉಪಕರಣಗಳ ಬಳಕೆಯ ಕುರಿತು ಸಿಬ್ಬಂದಿ ಪ್ರಾಯೋಗಿಕ ಅಣುಕು ಪ್ರದರ್ಶನದ ಮೂಲಕ ವಿವರಿಸಿದರು. ಪ್ರದರ್ಶನವನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿ ಅಗ್ನಿ ಸುರಕ್ಷತೆ ಕುರಿತ ಅನೇಕ ಮಾಹಿತಿಗಳನ್ನು ತಿಳಿದುಕೊಂಡರು.
ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವೀರಭದ್ರಪ್ಪ ಮೆಂಡಗುದ್ಲಿ ಮಾತನಾಡಿ, “ಶಿಕ್ಷಣದ ಜೊತೆಗೆ ಜೀವನ ಕೌಶಲ್ಯ ಮತ್ತು ಸುರಕ್ಷತಾ ಅರಿವು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ ಎಂದರು.
ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಪ್ರಾಚಾರ್ಯ ಡಾ. ರಾಜಾಗೌಡ ಕಾಗವಾಡೆ, “ಅಪಘಾತವನ್ನು ಎದುರಿಸುವುದಕ್ಕಿಂತ ಅದನ್ನು ತಡೆಗಟ್ಟುವ ಜಾಗೃತಿ ಬೆಳೆಸುವುದು ಶ್ರೇಷ್ಠ ಎಂದರು.
ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ವೃಂದ, ಅಗ್ನಿಶಾಮಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

