ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ | ಮಕ್ಕಳ ಕ್ರೀಡಾಕೂಟದಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಪ್ರಶ್ನೆ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ನಗರದ ಪೋಲೊ ಮೈದಾನದಲ್ಲಿ ಶಾಲಾ ಮಕ್ಕಳ ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೀಸಿದ ಭಾರಿ ಗಾಳಿಗೆ ಅತಿಥಿಗಳು ಹಾಗೂ ನಿರ್ಣಾಯಕರಿಗಾಗಿ ಅಳವಡಿಸಲಾಗಿದ್ದ ತಾತ್ಕಾಲಿಕ ಪೆಂಡಾಲ್ವೊಂದು ಕಿತ್ತು ನೆಲಕ್ಕುರುಳಿದ ಘಟನೆ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯ ಸಂಭವಿಸದೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ನಗರದ ಪೋಲೊ ಮೈದಾನದಲ್ಲಿ ಹುನ್ನೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದರು. ವಿದ್ಯಾರ್ಥಿಗಳು ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಅತಿಥಿಗಳು, ಶಿಕ್ಷಕರು ಹಾಗೂ ಕ್ರೀಡಾಕೂಟದ ನಿರ್ಣಾಯಕರಿಗಾಗಿ ತಾತ್ಕಾಲಿಕ ಪೆಂಡಾಲ್ ಅಳವಡಿಸಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.
ಕ್ರೀಡಾಕೂಟ ನಿರಾತಂಕವಾಗಿ ನಡೆಯುತ್ತಿದ್ದ ವೇಳೆ ಮಧ್ಯಾಹ್ನದ ಹೊತ್ತಿಗೆ ಏಕಾಏಕಿ ಗಾಳಿಯ ರಭಸ ಹೆಚ್ಚಾಗಿದೆ. ಕ್ಷಣಾರ್ಧದಲ್ಲೇ ಗಾಳಿಯ ಹೊಡೆತಕ್ಕೆ ಪೆಂಡಾಲ್ನ ತಾತ್ಕಾಲಿಕ ರಚನೆ ಅಲುಗಾಡಿ, ಬಳಿಕ ಕಿತ್ತು ಬಂದು ಸಂಪೂರ್ಣವಾಗಿ ನೆಲಕ್ಕುರುಳಿದೆ. ಪೆಂಡಾಲ್ ಕುಸಿಯುತ್ತಿದ್ದಂತೆ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಅತಿಥಿಗಳು ಹಾಗೂ ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾದರು.
ಪೆಂಡಾಲ್ ಕುಸಿದ ವೇಳೆ ಅದರ ಕೆಳಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲದಿರುವುದು ದೊಡ್ಡ ಅದೃಷ್ಟವಾಗಿದ್ದು, ಇಲ್ಲದಿದ್ದರೆ ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು. ಘಟನೆಯ ಬಳಿಕ ಕೆಲಕಾಲ ಮೈದಾನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬಾಕ್ಸ್
ಸಣ್ಣ ನಿರ್ಲಕ್ಷ್ಯ ದೊಡ್ಡ ಅಪಾಯದ ಎಚ್ಚರಿಕೆ
ಶಾಲಾ ಮಕ್ಕಳ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ಅತಿಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ತಾತ್ಕಾಲಿಕ ಪೆಂಡಾಲ್, ವೇದಿಕೆ, ಬ್ಯಾರಿಕೇಡ್ ಸೇರಿದಂತೆ ಯಾವುದೇ ವ್ಯವಸ್ಥೆ ಅಳವಡಿಸುವಾಗ ಸುರಕ್ಷತಾ ಕ್ರಮಗಳಿಗೆ ಮೊದಲ ಆದ್ಯತೆ ನೀಡಬೇಕಾಗಿದೆ.
ವಿಶೇಷವಾಗಿ ಗಾಳಿ-ಮಳೆಯ ಮುನ್ಸೂಚನೆ ಇರುವ ಸಂದರ್ಭಗಳಲ್ಲಿ ಪೆಂಡಾಲ್ಗಳ ಕಂಬಗಳು ಹಾಗೂ ರಚನೆಗಳನ್ನು ಸಮರ್ಪಕವಾಗಿ ಭದ್ರಪಡಿಸಲಾಗಿದೆಯೇ ಎಂಬುದನ್ನು ಕಾರ್ಯಕ್ರಮ ಆರಂಭಕ್ಕೂ ಮುನ್ನ ಪರಿಶೀಲಿಸಬೇಕಾಗಿದೆ. ಇಲ್ಲವಾದರೆ ಸಣ್ಣದೊಂದು ನಿರ್ಲಕ್ಷ್ಯವೇ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂಬುದನ್ನು ಜಮಖಂಡಿಯ ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.

