ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಪ್ರಾತಃಸ್ಮರಣೀಯ ಹೆಚ್.ಟಿ.ಕುಲಕರ್ಣಿ ಗುರುಗಳ ಗುರುಸ್ಮರಣೆ ಕಾರ್ಯಕ್ರಮವನ್ನು ಸೆ.೬ ಭಾನುವಾರ ಬೆಳಿಗ್ಗೆ ೧೦ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾರಂಗಮಠದ ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಲಿದ್ದಾರೆ. ಊರಿನ ಹಿರಿಯಮಠದ ಶಿವಾನಂದ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ ಮನಗೂಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್.ಟಿ.ಸುಣಗಾರ, ಅಶೋಕ ಶಾಬಾದಿ, ರಮೇಶ ಭೂಸನೂರ, ಅರುಣ ಶಹಾಪೂರ, ಕುಲಕರ್ಣಿ ಗುರುಗಳ ಸಹೋದರ ಬಿ.ಟಿ.ಕುಲಕರ್ಣಿ, ಸುಪುತ್ರ ಪವನ ಕುಲಕರ್ಣಿ ಸೇರಿದಂತೆ ಹಲವರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ವೇಳೆ ಕಾರ್ಯಕ್ರಮದ ಆಯೋಜಕ ಹಾಗೂ ವಿಜಯಪುರ ಜಿಲ್ಲಾ ಕೈಗಾರಿಕಾ ಇಲಾಖೆ ಉಪನಿರ್ದೇಶಕ ಸುಭಾಸ ಪಾಟೀಲ ಮಾತನಾಡಿ, ಗುರುಸ್ಮರಣೆ ಕಾರ್ಯಕ್ರಮದಂದು ಅವರ ಶಿಷ್ಯರು ಹಾಗೂ ಅನುಯಾಯಿಗಳಿಂದ ದೇಹದಾನ ಮತ್ತು ಅಂಗಾAಗ ದಾನದ ನೋಂದಣಿ ಕಾರ್ಯವನ್ನು ವಿಜಯಪುರ ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದವರು ನಿರ್ವಹಿಸಲಿದ್ದಾರೆ. ಇದರ ಜೊತೆಗೆ ರಕ್ತದಾನ ಶಿಬಿರ ಹಾಗೂ ಬಿಪಿ, ಶುಗರ್ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯ ಬಳಗ ಸ್ವಯಂಪ್ರೇರಿತರಾಗಿ ಈ ಎಲ್ಲ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಣಧೀರ ಪಡೆ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಿಗಿರಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದ ಎಚ್.ಟಿ.ಕುಲಕರ್ಣಿ ಗುರುಗಳ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅವರಿಂದ ಶಿಕ್ಷಣ ಪಡೆದ ಎಲ್ಲ ಶಿಷ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಷ್ಠಾನ ಸ್ಥಾಪನೆ ಹಾಗೂ ಸ್ಮಾರಕ ಭವನ ನಿರ್ಮಾ ಚಿಂತನೆ: ಪ್ರತಿವರ್ಷ ಎಚ್.ಟಿ.ಕುಲಕರ್ಣಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಎಲ್ಲ ಗುರು-ಹಿರಿಯರ ಸಮ್ಮುಖದಲ್ಲಿ ಅವರ ಸಲಹೆ ಹಾಗೂ ಸೂಚನೆಗಳನ್ನು ಪಡೆದು ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
ಆಯೋಜಕ: ಸುಭಾಸ ಪಾಟೀಲ
ಈ ವೇಳೆ ಗೌರೀಶ ಹಯ್ಯಾಳಕರ, ಮಹಾಂತೇಶ ಕಲಶೆಟ್ಟಿ, ಮುತ್ತು ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಅಲ್ಲಾಪೂರ, ಮೌಲಾಲಿ ಯಾಳಗಿ, ಶಾಂತೂ ರಾಣಾಗೋಳ, ರಾಘವೇಂದ್ರ ಜೋಷಿ, ಎಂ.ಬಿ.ಮಂದೇವಾಲಿ, ಶೈಲಜಾ ಸ್ಥಾವರಮಠ, ರಾಜಶೇಖರ ಜೇವರಗಿ, ರಾಜಶೇಖರ ಬುಳ್ಳಾ ಸೇರಿದಂತೆ ಅವರ ಶಿಷ್ಯ ಬಳಗದವರು ಇದ್ದರು.

