ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದ ವೈದ್ಯರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯರ ತಂಡ ಬಡ ಮಹಿಳೆಯ ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆಯ ಮೂಲಕ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ರೇಣವ್ವ ನಾಲತವಾಡ(47 ವರ್ಷ) ತೀವ್ರ ಪ್ರಮಾಣದ ಗ್ರೇಡ್–4 ಸಬ್ ಅರಾಕ್ನಾಯ್ಡ್ ಹೆಮರೇಜ್ (SAH) ಹಾಗೂ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿ (MCA) ಬೈಫರ್ಕೇಶನ್ ಅನ್ಯುರಿಸಮ್ನಿಂದ ಬಳಲುತ್ತಿದ್ದರು. ಅನ್ಯುರಿಸಮ್ ಛಿದ್ರಗೊಂಡ ಪರಿಣಾಮ ಮೆದುಳಿನ ಸುತ್ತಲೂ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಗಂಭೀರವಾಗಿತ್ತು. CT, ಆಂಜಿಯೋಗ್ರಫಿ ಪರೀಕ್ಷೆಯಲ್ಲಿ ಬಲ MCA ಬೈಫರ್ಕೇಶನ್ ಭಾಗದಲ್ಲಿ ದ್ವಿಪ್ರಭೇದದ (Bilobed) ಅನ್ಯುರಿಸಮ್ ಪತ್ತೆಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ವೈದ್ಯರು ರೋಗಿಯನ್ನು ತುರ್ತಾಗಿ ಮೈಕ್ರೋಸರ್ಜಿಕಲ್ ಚಿಕಿತ್ಸೆಗೆ ಒಳಪಡಿಸಿದರು.
ಅಲ್ಲದೇ, ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ಅನ್ಯುರಿಸಮ್ನ ಕುತ್ತಿಗೆಯನ್ನು ಯಶಸ್ವಿಯಾಗಿ ಕ್ಲಿಪ್ ಮಾಡುವುದರ ಜೊತೆಗೆ, ಮೆದುಳಿಗೆ ರಕ್ತ ಪೂರೈಸುವ ಪ್ರಮುಖ MCA ಶಾಖೆಗಳು ಹಾಗೂ ಸೂಕ್ಷ್ಮ ಪರ್ಫೋರೇಟರ್ ರಕ್ತನಾಳಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿದರು. ಗಂಭೀರ ಸ್ಥಿತಿಯಲ್ಲಿದ್ದರೂ ರೋಗಿಯ ಚೇತರಿಕೆ ಅತ್ಯಂತ ಉತ್ತಮವಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಯಾವುದೇ ಹೊಸ ನರ ದೌರ್ಬಲ್ಯ ಕಂಡುಬಂದಿಲ್ಲ. ವಿಶೇಷವೆಂದರೆ, ಶಸ್ತ್ರಚಿಕಿತ್ಸೆಯ ಕೇವಲ ಏಳನೇ ದಿನವೇ ರೇಣವ್ವ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಅವರು ಆರೋಗ್ಯವಾಗಿ ಮನೆಗೆ ಮರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಡೀ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ ಯೋಜನೆಯಡಿ ನಡೆಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯೊಬ್ಬರಿಗೆ ಇಂಥ ಕ್ಲಿಷ್ಟಕರ ಮತ್ತು ಅತ್ಯಾಧುನಿಕ ನರಶಸ್ತ್ರಚಿಕಿತ್ಸೆ ವಿಜಯಪುರದಲ್ಲಿಯೇ ದೊರಕಿರುವುದು ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ನೆರವಿನ ಹಸ್ತವಾಗಿ, ಜೀವ ಉಳಿಸುವ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಬಿ.ಎಲ್.ಡಿ.ಇ ಸಂಸ್ಥೆ ಒದಗಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಸಮಯೋಚಿತ ರೋಗನಿರ್ಣಯ, ತಕ್ಷಣದ ಶಸ್ತ್ರಚಿಕಿತ್ಸೆ, ಪರಿಣತ ವೈದ್ಯಕೀಯ ತಂಡ ಹಾಗೂ ಸಮಗ್ರ ತೀವ್ರ ನಿಗಾ ಚಿಕಿತ್ಸೆಯ ಸಮನ್ವಯದಿಂದ ರೋಗಿಯ ಜೀವ ಉಳಿಸಲು ಸಾಧ್ಯವಾಗಿದೆ. ಇದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಪರಿಣತಿ ಮತ್ತು ತುರ್ತು ಚಿಕಿತ್ಸೆ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಈ ಅಪರೂಪದ ಹಾಗೂ ಕ್ಲಿಷ್ಟಕರ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿ, ರೇಣವ್ವ ಅವರ ಪ್ರಾಣ ಉಳಿಸಿ, ಕೇವಲ ಒಂದು ವಾರದಲ್ಲೇ ಆರೋಗ್ಯವಾಗಿ ಮನೆಗೆ ಮರಳುವಂತೆ ಮಾಡಿದ ಡಾ. ಮಲ್ಲಪ್ಪ ಹುಗ್ಗಿ ಹಾಗೂ ಬಿಎಲ್ಡಿಇ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಕೈಗಾರಿಕೆ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

