ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹುತಾತ್ಮ ವೃತ್ತದ ಬಳಿ ವೇದಾಂತ ಸೌಹಾರ್ದ ಸಹಕಾರಿ ಸಂಘ ಶುಭಾರಂಭ ಮಾಡಿತು.
ಸೌಹಾರ್ದ ಸಂಘದ ಸೇವೆಗೆ ಚಾಲನೆ ನೀಡಿದ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಅವರನ್ನು ಸ್ವಾವಲಂಬಿಯಾಗಿಸುವಲ್ಲಿ ಸೌಹಾರ್ದ ಹಾಗೂ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದರು. ವೇದಾಂತ ಕೇಸರಿ ಎಂದು ಶ್ರೀ ಮಲ್ಲಿಕಾರ್ಜುನ ಶ್ರೀಗಳನ್ನು ಕರೆಯಲಾಗುತ್ತಿತ್ತು. ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಗುರು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹೆಸರು ಕೇಳಿದಾಕ್ಷಣ ಅತ್ಯಂತ ಸಂತೋಷಪಡುತ್ತಿದ್ದರು, ಅಷ್ಟೊಂದು ಗುರುಭಕ್ತಿ ಅವರಲ್ಲಿತ್ತು, ಈಗ ಅವರ ಗುರುಗಳ ಹೆಸರಿನಲ್ಲಿಯೇ ಸೌಹಾರ್ದ ಸಂಘ ಆರಂಭಗೊಂಡಿರುವುದು ಅತ್ಯಂತ ಸಂತೋಷ ತಂದಿದೆ, ಈ ಸೌಹಾರ್ದ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಡಿ.ವೈ.ಎಸ್.ಪಿ. ಹಾಗೂ ಲೇಖಕ ಬಸವರಾಜ ಯಲಿಗಾರ ಮಾತನಾಡಿ, ಸಹಕಾರ ಹಾಗೂ ಸೌಹಾರ್ದ ಸಂಘಗಳಿಗೆ ವಿಶ್ವಾಸವೇ ಜೀವಾಳ, ಆಡಳಿತ ಮಂಡಳಿ ಈ ವಿಶ್ವಾಸ ಗಳಿಸಿಕೊಂಡರೆ ಸಹಕಾರ ಸಂಘ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ, ಪ್ರಸ್ತುತ ವೇದಾಂತ ಕೇಸರಿ ಸೌಹಾರ್ದ ಸಂಘದ ವಿಶ್ವಸ್ಥ ಮಂಡಳಿ ನಿರ್ದೇಶಕರು ಪ್ರಾಮಾಣಿಕತೆ ಹಾಗೂ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿದ್ದಾರೆ,ಹೀಗಾಗಿ ಈ ಸೌಹಾರ್ದ ಸಂಘ ಶತಮಾನೋತ್ಸವ ಆಚರಿಸುವುದು ನಿಶ್ಚಿತ ಎಂದರು.
ಮುಖ್ಯ ಅತಿಥಿಯಾಗಿದ್ದ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ವಿಜಯಪುರ ನಗರದಲ್ಲಿ ೮೦೦ ಕ್ಕೂ ಹೆಚ್ಚು ಸೌಹಾರ್ದಗಳು ನೊಂದಣಿಯಾಗಿವೆ, ಆದರೆ ಹೆಚ್ಚು ಕಡಿಮೆ ೩೦೦ ಸಹಕಾರ ಸಂಘಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ, ಸಾಲ ವಸೂಲಾತಿ ದೊಡ್ಡ ತೊಡಕಾಗಿ ಅನೇಕ ಸೌಹಾರ್ದಗಳು ಸೇವೆಯಿಂದ ಹಿಂದಕ್ಕೆ ಸರಿಯುತ್ತಿವೆ, ಹೀಗಾಗಿ ಸಾಲ ಪಡೆದವರು ಸಹ ನಿಯಮಿತವಾಗಿ ಸಾಲ ಮರುಪಾವತಿ ಮಾಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಮಮದಾಪೂರ ವಿರಕ್ತಮಠದ ಮುರುಘೇಂದ್ರ ಮಹಾಸ್ವಾಮಿಜಿ, ಸಾನಿಧ್ಯ ವಹಿಸಿದ್ದ ಬಬಲಾದಿಯ ಸದಾಶಿವ ಚಂದ್ರಗಿರಿ ಮಠದ ಅಪ್ಪಯ್ಯ ಅಜ್ಜನವರು ಆಶೀರ್ವಚನ ನೀಡಿದರು.
ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಸಹಕಾರಿ ಧುರೀಣ ಗುರುಲಿಂಗಪ್ಪ ಅಂಗಡಿ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್. ಬಸವರಾಜ್, ವೇದಾಂತ ಕೇಸರಿ ಸೌಹಾರ್ದ ಅಧ್ಯಕ್ಷ ಮಲ್ಲು ಕಲಾದಗಿ, ಉಪಾಧ್ಯಕ್ಷ ಡಾ.ಆನಂದ ಚೌಧರಿ, ನಿರ್ದೇಶಕರಾದ ಡಾ.ಅರವಿಂದ ಢಾಣಕಶಿರೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಬಸವರಾಜ ಬಡದಾಳ, ಡಾ.ಅಜೀತ್ ಗತಾಟೆ, ಶಂಕರರಾವ್ ಜೋಶಿ, ಈರಣ್ಣ ಅಳ್ಳಗಿ, ಡಾ.ಸುಧಾ ಕರಿಲಿಂಗಣ್ಣನವರ, ಸಾವಿತ್ರಿ ಚಿಂಚಲಿ ಪಾಲ್ಗೊಂಡಿದ್ದರು.

