ಸಂಪೂರ್ಣ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರೈತಸಂಘ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಮ್ಮಿಕೊಳ್ಳಲಾದ ಅನಿರ್ದಾಷ್ಟಾವಧಿ ಹೋರಾಟಕ್ಕೆ ಚಡಚಣ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಎಲ್ಲ ಸಂಘಟನೆಗಳು, ರೈತರು ಪಾಲ್ಗೊಂಡು ಸೆ. 2ರಿಂದ ಹಮ್ಮಿಕೊಳ್ಳಲಾದ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಚಡಚಣ ತಾಲೂಕಾ ರೈತ ಸಂಘದ ಅಧ್ಯಕ್ಷ ವಸಂತ ಭೈರಾಮಡಿ ಮನವಿ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಕೇವಲ 3 ತಾಲೂಕುಗಳನ್ನು ಬರ ಎಂದು ಘೋಷಿಸಿ ಇನ್ನುಳಿದ ತಾಲೂಕುಗಳಿಗೆ ಸರಕಾರ ಅನ್ಯಾಯ ಎಸಗಿದ್ದು, ಸಂಪೂರ್ಣ ಜಿಲ್ಲೆಯನ್ನು ಬರ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ. 2ರಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅನಿರ್ದಾಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಈ ಹೋರಾಟದಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಪ್ರತಿ ಎಕರೆಗೆ 50 ಸಾವಿರ ರೂ. ಬರಗಾಲ ಪರಿಹಾರ ಹಾಗೂ ಮಧ್ಯಂತರ ವಿಮೆ ಬಿಡುಗಡೆ, ಜಿಲ್ಲೆಯ ಉಳಿದ 10 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಬೇಕು, ಜಿಲ್ಲೆಯ ಎಲ್ಲ ಕೆರೆ, ಕಾಲುವೆಗಳನ್ನು ತುಂಬಿಸಬೇಕು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ಅವ್ಯವಹಾರದ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಜಿಲ್ಲೆಯ ಉಳಿದ 10 ತಾಲೂಕುಗಳನ್ನು ಬರ ಎಂದು ಘೋಷಿಸುವವರೆಗೆ ಅನಿರ್ದಾಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಚಡಚಣ ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕಿನ ಎಲ್ಲ ಸಂಘಟನೆಗಳು ಹಾಗೂ ರೈತರು, ಮಠಾಧೀಶರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಚಡಚಣ ತಾಲೂಕಾ ರೈತ ಸಂಘದ ಅಧ್ಯಕ್ಷ ವಸಂತ ಭೈರಾಮಡಿ ಮನವಿ ಮಾಡಿದ್ದಾರೆ.

