ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಣೆಕಟ್ಟು ಸುರಕ್ಷತಾ ಕಾಯ್ದೆ–೨೦೨೧ರ ಅನ್ವಯ ಪ್ರೊ.ಶರದ್ ಜೋಷಿ ನೇತೃತ್ವದ ೮ ಜನರ ನೀರಾವರಿ ತಜ್ಞರ ತಂಡವು ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಆಲಮಟ್ಟಿ ಜಲಾಶಯದ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿದೆ.
ತಜ್ಞರು ಜಲಾಶಯದ ಬಾಳಿಕೆ ಮತ್ತು ನೀರಿನ ಸೋರಿಕೆ, ಭೂಕಂಪ ನಿರೋಧಕ ಸಾಮರ್ಥ್ಯ, ಗೇಟ್ಗಳ ಕಾರ್ಯಕ್ಷಮತೆ, ಸಿವಿಲ್ ಕಾಮಗಾರಿಗಳು ಮತ್ತು ಕಾಫರ್ ಜಲಾಶಯಗಳ ಗುಣಮಟ್ಟ ಈ ಅಂಶಗಳನ್ನು ಪರಿಶೀಲಿಸಿದರು.
ತಜ್ಞರ ಅಭಿಪ್ರಾಯ
ತಂಡದ ನೇತೃತ್ವ ವಹಿಸಿದ್ದ ಪ್ರೊ. ಶರದ್ ಜೋಷಿ ಮಾತನಾಡಿ, “ಜಲಾಶಯದ ಗುಣಮಟ್ಟ ಉತ್ತಮವಾಗಿದೆ. ಸುರಕ್ಷತೆ ಮತ್ತು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಪರಿಶೀಲಿಸಿದ್ದೇವೆ” ಎಂದು ತಿಳಿಸಿದರು.
ತಜ್ಞರು ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ ಬಳಿಕ ಅವುಗಳನ್ನು ಕ್ರೋಢೀಕರಿಸಿ ಡಿಸೆಂಬರ್ ೨೦೨೬ರೊಳಗೆ ರಾಜ್ಯ ಸರ್ಕಾರಕ್ಕೆ ಸಮಗ್ರ ಮೌಲ್ಯಮಾಪನ ವರದಿ ಸಲ್ಲಿಸಲಾಗುವುದು. ಅಗತ್ಯವಿರುವ ತುರ್ತು ಕ್ರಮಗಳನ್ನೂ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಸಮಿತಿ ಸದಸ್ಯರಾದ ಶಿವಪ್ರಸಾದ, ಎಸ್.ಎಲ್. ರಾಜಶೇಖರ, ಕೆ. ಸತ್ಯನಾರಾಯಣ, ಅಮರನಾಥ ಹೆಗಡೆ, ಕಮಲಶೇಖರನ್, ಪ್ರಾಣೇಶ ಮುರನಾಳ, ಎಸ್. ರಂಗರಾಮ, ಮುಖ್ಯ ಎಂಜಿನಿಯರ್ ಡಿ. ಬಸವರಾಜ, ಬಿ.ಎಸ್. ಪಾಟೀಲ, ಕೊಳ್ಳಿ, ವಿಠ್ಠಲ ಜಾಧವ, ರವಿ ಚಂದ್ರಗಿರಿ ಸೇರಿದಂತೆ ಅಧಿಕಾರಿಗಳು ಇದ್ದರು.
ರಾಜ್ಯದ ೨೩೧ ಅಣೆಕಟ್ಟುಗಳ ಪರಿಶೀಲನೆ
ರಾಜ್ಯದಲ್ಲಿರುವ ಒಟ್ಟು ೨೩೧ ಅಣೆಕಟ್ಟುಗಳ ಸುರಕ್ಷತಾ ಪರಿಶೀಲನೆಗೆ ೧೬ ತಂಡಗಳನ್ನು ರಚಿಸಲಾಗಿದೆ.
ಪರಿಶೀಲನೆ ಬಳಿಕ ಜಲಾಶಯಗಳನ್ನು ಸಂಪೂರ್ಣ, ಭಾಗಶಃ ಮತ್ತು ಅಲ್ಪ ಪ್ರಮಾಣದ ದುರಸ್ತಿ ಅಗತ್ಯವಿರುವ ಮೂರು ವರ್ಗಗಳಲ್ಲಿ ವಿಂಗಡಿಸಲಾಗುವುದು.
ಪ್ರೊ. ಜೋಷಿ ಅವರು “ಜಲಾಶಯಗಳಿಂದಲೇ ಭೂಕಂಪ ಸಂಭವಿಸುತ್ತದೆ ಎಂಬುದು ತಪ್ಪು ಕಲ್ಪನೆ” ಎಂದು ಸ್ಪಷ್ಟಪಡಿಸಿದರು. ಹಾಗೂ “ನದಿ ಪಾತ್ರಗಳ ಒತ್ತುವರಿ ತೆರವು ಅಗತ್ಯ” ಎಂದು ಹೇಳಿದರು.

