ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರಕಾರ ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೂ ಕಲ್ಪಿಸಿದ್ದು, ಹಾಗಾಗಿ ಕಾಲೇಜ್ ನಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು, ಕನಸು ನನಸು ಮಾಡಿಕೊಳ್ಳುವ ಮೂಲಕ ಹೆತ್ತವರಿಗೆ, ಹುಟ್ಟಿದೂರಿಗೆ ಹಾಗೂ ಶಿಕ್ಷಕರ ಕೀರ್ತಿ ಹೆಚ್ಚಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರನಗೌಡ ಬಿರಾದಾರ ಹೇಳಿದರು.
ಕೊಲ್ಹಾರ ತಾಲೂಕಿನ ಕುಪಕಡ್ಡಿಯಲ್ಲಿ ಹೊಸದಾಗಿ ಪ್ರಾರಂಭವಾದ ಸರಕಾರಿ ಪದವಿ ಪೂರ್ವ ಕಾಲೇಜಿನ ೨೦೨೬-೨೭ ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಎಚ್. ಎಲ್. ದೊಡಮನಿ ಮಾತನಾಡಿ, ಊರಿನ ಶಿಕ್ಷಣ ಪ್ರೇಮಿಗಳ ಪರಿಶ್ರಮದಿಂದ ನಮ್ಮ ಗ್ರಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರಾಗಿದ್ದು ಇದು ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬಾ ಸಹಕಾರಿಯಾಗಿದೆ. ಕಾಲೇಜು ಮಂಜೂರಿಗೆ ಶ್ರಮಿಸಿದ ಗ್ರಾಮದ ಎಲ್ಲ ಧುರೀಣರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಎಂದ ಅವರು, ಕುಪಕಡ್ಡಿ ಗ್ರಾಮಸ್ಥರು ಕಾಲೇಜು ಅಭಿವೃದ್ಧಿಗೆ ಸಕಲ ಸಹಕಾರ ನೀಡುತ್ತಿರುವದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.
ಕಾಲೇಜಿಗೆ ೨೫೦೦೦ ರೂ. ಮೌಲ್ಯದ ಪೀಠೋಪಕರಣಗಳನ್ನು ದೇಣಿಗೆ ನೀಡಿದ ಉದ್ಯಮಿ ಹಾಗೂ ಪಿಕೆಪಿಎಸ್ ನಿರ್ದೇಶಕ ಉಮೇಶ ಇಂಡಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕಿ ರೇಖಾ ಟಿ. ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವದು ಮುಖ್ಯವಾಗಿದ್ದು ಸಂಸ್ಕಾರವಿಲ್ಲದ ಶಿಕ್ಷಣ ನಮಗೆ ಬೇಕಾಗಿಲ್ಲ ಎಂದರು. ಕಾಲೇಜಿನ ನಾಮಫಲಕ ದೇಣಿಗೆ ನೀಡಿದ ನರಸು ಪತ್ತಾರ ಹಾಗೂ ನಗದು ಕಾಣಿಕೆ ನೀಡಿದ ಹಿರಿಯ ಶಿಕ್ಷಕ ಅಪ್ಪಾಸಾಹೇಬ ಕುಲಕರ್ಣಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯರು, ಪಿಕೆಪಿಎಸ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಸಂಗನಗೌಡ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಿಕೆಪಿಎಸ್ ಅಧ್ಯಕ್ಷರಾದ ದೊಡ್ಡನಗೌಡ ಬಿರಾದಾರ, ಎಸ್ ಡಿಎಮ್ ಸಿ ಮಾಜಿ ಅಧ್ಯಕ್ಷರಾದ ಉದಯಕುಮಾರ ಹಳ್ಳಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಸಂಗು ಉಗ್ರಾಣ, ಗ್ರಾ ಪಂ ಮಾಜಿ ಸದಸ್ಯರಾದ ಮಹಾದೇವ ಚಲವಾದಿ, ಈಶ್ವರ ಕೋಲ್ಹಾರ, ಅಮೀನಸಾಬ ಪೆಂಡಾರಿ, ಪಿಕೆಪಿಎಸ್ ಸದಸ್ಯ ಪ್ರಕಾಶ ಬಿರಾದಾರ, ಶಾಂತು ಹಲಗಲಿ, ಸತ್ಯಪ್ಪ ಮದಗುಣಕಿ, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಸಂಗನಗೌಡ ಬಿರಾದಾರ, ದೊಡ್ಡನಗೌಡ ಬಿರಾದಾರ, ಉದಯಕುಮಾರ ಹಳ್ಳಿ, ಯುವ ಧುರೀಣ ಚಂದ್ರು ಅಂಬಿಗೇರ, ಮಹಾದೇವ ಚಲವಾದಿ ಸಹಕಾರ ನೀಡಿದರು.
ಕುಮಾರಿ ಭಾಗ್ಯಶ್ರೀ ಮ್ಯಾಗಾಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಿಯಂಕಾ ಇಂಡಿ ಹಾಗೂ ಸಂಗಡಿಗರು ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅತಿಥಿ ಉಪನ್ಯಾಸಕ ಯಲ್ಲಪ್ಪ ಹಳಬರ ಸ್ವಾಗತಿಸಿದರು. ಡಾ:ಲಕ್ಷ್ಮೀ ಅಂಗಡಿ ನಿರೂಪಿಸಿದರು. ಶ್ರೀಕಾಂತ ಪೂಜಾರಿ ವಂದಿಸಿದರು.

