ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): “ಸರಿಯಾದ ಮಾರ್ಗವನ್ನು ತೋರಿಸುವವರೇ ನಮ್ಮ ನಿಜವಾದ ಸ್ನೇಹಿತರು. ನಮ್ಮನ್ನು ದುಶ್ಚಟಗಳ ದಾರಿಗೆ ಕೊಂಡೊಯ್ಯುವವರೇ ನಿಜವಾದ ಶತ್ರುಗಳು. ಯುವಕರು ದುಶ್ಚಟಗಳಿಂದ ದೂರ ಉಳಿದು ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ” ಎಂದು ಓಲೆಮಠದ ಆನಂದ ಶ್ರೀಗಳು ಹೇಳಿದರು.
ತಾಲೂಕಿನ ಕಡಪಟ್ಟಿ–ಹಂಚಿನಾಳ ಗ್ರಾಮದಲ್ಲಿ ಓಲೆಮಠದ ಆಶ್ರಯದಲ್ಲಿ ವ್ಯಸನ ಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಒಂಬತ್ತು ದಿನಗಳ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜನಜಾಗೃತಿ ಯಾತ್ರೆಯ ಅಂಗವಾಗಿ ಗ್ರಾಮದಲ್ಲಿ ರುದ್ರಾಕ್ಷಿ ಧಾರಣ ಹಾಗೂ ಸದ್ಭಾವನ ಪಾದಯಾತ್ರೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಗ್ರಾಮದ ಮನೆ–ಮನೆಗೆ ತೆರಳಿ ಜನರಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಿದ ಶ್ರೀಗಳು, ಮದ್ಯಪಾನ, ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯ ಹದಗೆಡುವುದರ ಜೊತೆಗೆ ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ದುಶ್ಚಟ ಹೊಂದಿರುವವರು ಅವುಗಳನ್ನು ತ್ಯಜಿಸುವ ಸಂಕಲ್ಪದೊಂದಿಗೆ ಶ್ರೀಗಳ ಜೋಳಿಗೆಗೆ ತಮ್ಮ ಕೆಟ್ಟ ಚಟಗಳನ್ನು ‘ಭಿಕ್ಷೆ’ಯಾಗಿ ಹಾಕುವಂತೆ ಕರೆ ನೀಡಲಾಯಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಅನೇಕ ಯುವಕರಿಂದ ದುಶ್ಚಟ ತ್ಯಜಿಸುವ ಕುರಿತು ಪ್ರತಿಜ್ಞೆ ಮಾಡಿಸಲಾಯಿತು.
ಪಾದಯಾತ್ರೆಯಲ್ಲಿ ಗ್ರಾಮದ ಹಿರಿಯರಾದ ಶ್ರೀಕಾಂತ್ ರಾಮದುರ್ಗ, ಕಲ್ಯಾಣಕುಮಾರ್ ಇಟ್ಟಿ, ಬಸಯ್ಯ ಕಡಕೋಳ, ಆನಂದ ಬೊಮ್ಮಣ್ಣವರ, ಸದಾಶಿವ ಮಡಿವಾಳರ, ಜಕ್ಕಪ್ಪ ಮೆಂಡಿಗೇರಿ, ಬಸವರಾಜ ಗದ್ಯಾಳ, ಹನುಮಂತ ಕೊಂಚನೂರ, ಚಿಕ್ಕಯ್ಯ ಪೂಜಾರಿ, ಶ್ರೀಕಾಂತ್ ನ್ಯಾಮಗೌಡ, ಸಿದ್ದು ಮಾಳಿ, ಮಲ್ಲಿಕಾರ್ಜುನ ರಾವಳೋಜಿ, ಶಿಕ್ಷಕರಾದ ಶಿವಾನಂದ ಕಲ್ಯಾಣಿ, ರವಿ ತಳ್ಳಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

