ಬೂದಿಹಾಳ ಪಿಎಚ್ ಗ್ರಾಮದ ರೈತನ ಜೋಡೆತ್ತುಗಳ ಅಪ್ರತಿಮ ಸಾಧನೆಗೆ ಜನರ ಮೆಚ್ಚುಗೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶೈಕ್ಷಣಿಕ ಕಾಶಿಯ ಸಿಂದಗಿ ತಾಲೂಕಿನ ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಕೈಗೊಳ್ಳುವ ಕೃಷಿ ಚಟುವಟಿಗಳು ನಾನಾ ಸಾಧನೆಗಳಿಗೆ ಪ್ರೇರೆಪಿಸುತ್ತಿವೆ. ಇಂತಹದ್ದೆ ಸಾಧನೆಯೊಂದನ್ನು ಸಿಂದಗಿ ತಾಲೂಕಿನ ಬೂದಿಹಾಳ ಪಿಹೆಚ್ ಗ್ರಾಮದ ರೈತ ಮತ್ತು ಆತನ ಎತ್ತುಗಳು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಾಗರ ಪಂಚಮಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೈತ ಗುರುಪಾದ ಚೌಧರಿ ತನ್ನ ಜೋಡೆತ್ತುಗಳಿಗೆ ನೊಗಕಟ್ಟಿ ತಮ್ಮ ಜೋಡಿ ಎತ್ತುಗಳೊಂದಿಗೆ ಕೇವಲ ೫ಗಂಟೆಯಲ್ಲಿಯೇ ಒಂಟಿ ದಿಂಡಿನ ಸಹಾಯದಿಂದ ೧೧ ಎಕರೆ ಜಮೀನು ಹರಗಿ ಗಮನ ಸೆಳೆದಿದ್ದಾರೆ.
ಪಂಚಮಿ ಬಂತೆಂದರೆ ಸಾಕು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರೈತರು ತಮ್ಮ ಜಾನುವಾರುಗಳ ಮೂಲಕ ವಿವಿಧ ಸಾಧನೆ ಮಾಡುತ್ತಾರೆ. ಅಂತೆಯೇ ಈ ರೈತ ತನ್ನ ಊರಾದ ಬೂದಿಹಾಳ ಗ್ರಾಮದಲ್ಲಿ ೫ಗಂಟೆಯಲ್ಲಿ ೧೧ಎಕರೆ ಜಮೀನು ಹರಗುವ ಮೂಲಕ ರೈತರು ಮೆಚ್ಚುವ ಸಾಧನೆ ಮಾಡಿದ್ದಾರೆ.
ಕೃಷಿಕ ಈ ಸಾಧನೆ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಬೂದಿಹಾಳ ಗ್ರಾಮದ ರೈತರು ಆಗಮಿಸಿದ್ದಾರೆ. ಅಲ್ಲದೇ, ರೈತ ಮತ್ತು ಆತನ ಜೋಡೆತ್ತುಗಳ ಸಾಧನೆಗಳನ್ನು ಕಣ್ತುಂಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮದ ಜನರೂ ಕೂಡ ತಮ್ಮೂರಿನ ಹೆಮ್ಮೆಯ ರೈತ ಹಾಗೂ ಆತನ ಎತ್ತುಗಳಿಗೆ ಗುಲಾಲು (ಬಣ್ಣ) ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಗುರುಪಾದ ಚೌಧರಿ, ಕಳೆದ ಹಲವು ವರ್ಷಗಳಿಂದ ಭೂಮಿಯನ್ನು ಹರಗುತ್ತಲೇ ಬಂದಿದ್ದೆ, ಆದರೆ ಸಂಭ್ರಮಾಚರಣೆ ಮಾಡಿರಲಿಲ್ಲ. ಮನೆಯಲ್ಲಿ ದನಕರುಗಳು ಇರಬೇಕು. ಹಂಬಲದಿಂದ ಎತ್ತುಗಳನ್ನು ಕಟ್ಟಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿ ಉಳಿಯಬೇಕು ಎಂಬ ಸದುದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆಧುನಿಕ ಯಂತ್ರೋಪಕರಣಗಳಿಗೆ ಹೆಚ್ಚು ಮಾರು ಹೋಗದೇ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ರೈತರು ಉಪಯೋಗಿಸಬೇಕು. ಎರಡೆತ್ತುಗಳು ಮನೆಯಲ್ಲಿದ್ದರೆ ಅದಕ್ಕೊಂದು ಸಿರಿಯೇ ಬೇರೆ ಎಂದರು.
ಈ ರೈತ ಸಾಧನೆಯ ಬಗ್ಗೆ ಗ್ರಾಮದ ರೈತರಾದ ಶರಣಗೌಡ ಬಿರಾದಾರ ಮತ್ತು ಶಿವನಗೌಡ ಬಿರಾದಾರ ಸಂತಸ ವ್ಯಕ್ತಪಡಿಸಿದ್ದು, ಈ ರೈತ ತಮ್ಮೂರಿಗೆ ಕೀರ್ತಿ ತಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

