ಉದಯರಶ್ಮಿ ದಿನಪತ್ರಿಕೆ
ಅಥಣಿ: ಡಿ.ದೇವರಾಜ ಅರಸ ಅವರು ದಲಿತ ಹಿಂದುಳಿದವ ಹಾಗೂ ಶೋಷಿತ ವರ್ಗಗಳ ಆಶಾಕಿರಣವಾಗಿದ್ದು ಭೂ ಸುಧಾರಣಾ ಕಾಯ್ದೆ ಹಾಗೂ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಜಾರಿಗೆ ತರುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಮುನ್ನುಡಿ ಬರೆದ ಮಹಾನ ನಾಯಕರು ಎಂದು ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಹೇಳಿದರು.
ಅವರು ಪಟ್ಟಣದ ಎಸ್.ಎಸ್.ಎಂ.ಎಸ್. ಕಾಲೇಜಿನ ಖೋತ ಸಭಾಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜೀತ ಪದ್ಧತಿ ನಿರ್ಮೂಲನೆ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರು ಮತ್ತು ದುರ್ಬಲ ವರ್ಗಗಳ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದರು. ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವು ಸೌಲಭ್ಯ ಹಾಗೂ ಯೋಜನೆಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಂಡು ಶ್ರದ್ಧೆ ಹಾಗೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ನಾಗರಿಕರಾಗಬೇಕು. ಆಗ ಮಾತ್ರ ಅರಸು ಅವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು
ತಾಲೂಕಾ ದಂಡಾಧಿಕಾರಿ ಹಾಗೂ ತಹಶಿಲ್ದಾರ ಸಿದರಾಯ ಬೋಸಗಿ ಮಾತನಾಡಿ, ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿದ್ದ ದೂರದೃಷ್ಟಿಯ ನಾಯಕರು. ವಿದ್ಯಾರ್ಥಿಗಳು ಅವರ ಜೀವನ, ಹೋರಾಟ ಹಾಗೂ ಜನಪರ ಆಡಳಿತದ ಬಗ್ಗೆ ತಿಳಿದು ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪಂಚ ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ಮಾತನಾಡಿದರು.
ಸಿದ್ರಾಮ ಕಾಂಬಳೆ ಅವರು ಉಪನ್ಯಾಸ ನೀಡಿದರು.
ಈ ವೇಳೆ ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಡಿಪಿಒ ಮಹಾದೇವ ಕೋಳಿ, ಪ್ರಾಚಾರ್ಯ ಪ್ರಶಾಂತ ಮಗದುಮ, ನೌಕರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಕೃಷಿ ಅಧಿಕಾರಿ ನಿಂಗಣ್ಣಗೌಡ ಬಿರಾದರ, ರೇಷ್ಮಾ ಇನಾಮದಾರ, ರೂಪಾ ಕಾಂಬಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದುಳಿದ ಇಲಾಖೆಯ ತಾಲೂಕಾ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ ಸ್ವಾಗತಿಸಿದರು, ವಿಸ್ತಿರ್ಣಾಧಿಕಾರಿ ಅಶೋಕ ಸತ್ತಿಗೌಡರ ವಂದನಾರ್ಪಣೆ ಹಾಗೂ ನಿರೂಪಣೆ ಶಿಕ್ಷಕ ಸಂಗಮೇಶ ಹಚಡದ ಮಾಡಿದರು.

