ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೈತ ಕೇವಲ ಉತ್ಪಾದಕನಲ್ಲ, ಕೃಷಿಯ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಪಾಲುದಾರ ಮತ್ತು ಉದ್ಯಮಿಯಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ರೈತ ಉತ್ಪಾದಕ ಕಂಪನಿಯಾಗಿ ‘ಆತ್ಮನಿರ್ಭರ ರೈತ’ ನಿರ್ಮಾಣದತ್ತ ದಾಸೋಹಿ ದೃಢ ಹೆಜ್ಜೆಯನ್ನಿಡುತ್ತಿದೆ ಇಡುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.
ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯಿಂದ ರೈತರಿಗೆ ತೋಟಗಾರಿಕೆ ಮತ್ತು ಆರಣ್ಯ ಸಸಿಗಳನ್ನು ಪೂರೈಸುವ ಉದ್ದೇಶದಿಂದ ಸ್ಥಾಪಿಸಲಾದ ದಾಸೋಹಿ ಹಸಿರು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ಸಂಬಂದಿಸಿದಂತೆ ಪರಿಹಾರಾತ್ಮಕ ಅನುಸಂಧಾನಗಳಿಗೆ ಹೆಸರಾದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಪ್ರಯತ್ನಗಳು ಕರ್ನಾಟಕ ರೈತ ಉತ್ಪಾದಕ ಸಂಸ್ಥೆಗಳ ಬೆಳವಣಿಗೆಗೆ ಹೊಸ ಮಾದರಿಯಾಗಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪಶು ಸಂಗೋಪನೆ ಮತ್ತು ವೈಧ್ಯಕೀಯ ಇಲಾಖೆಯ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಸುರೇಶ ಮಾತನಾಡಿ ರೈತ ಉತ್ಪಾದಕ ಕಂಪನಿಗಳು ಕೇವಲ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳಾಗದೆ, ರೈತರಿಗೆ ಅಗತ್ಯವಿರುವ ಕೃಷಿ ಒಳಸುಳಿಗಳ ಉತ್ಪಾದನೆ ಮತ್ತು ವಿತರಣೆ, ತಾಂತ್ರಿಕ ಸೇವೆಗಳು ಹಾಗೂ ಕೃಷಿ ಆಧರಿತ ಉದ್ಯಮಗಳನ್ನು ನಿರ್ವಹಿಸುವ ಸಂಸ್ಥೆಗಳಾಗಬೇಕು ಎಂಬ ಪರಿಕಲ್ಪನೆಗೆ ಒತ್ತು ನೀಡಿದ ದಾಸೋಹಿ ಕಂಪನಿಯಿಂದ ಈ ಭಾಗದಲ್ಲಿ ಸಮೃದ್ದ ಕೃಷಿ ಪರಿಸರ ವ್ಯವಸ್ಥೆಯೊಂದು ನಿರ್ಮಾಣವಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ದೇಶಪಾಂಡೆ ಮಾತನಾಡಿ, ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ತೋಟಗಾರಿಕೆಯ ಮಹತ್ವವನ್ನು ಅರಿತು ಈ ಭಾಗದ ರೈತರಿಗೆ ಉತ್ತಮ ತಳಿ, ಗುಣಮಟ್ಟದ ಸಸಿ, ಪೂರೈಕೆ ಸರಪಳಿ, ವೈಜ್ಞಾನಿಕ ಮಾರ್ಗದರ್ಶನ ಮತ್ತು ಮಾರುಕಟ್ಟೆ ಬೆಂಬಲಗಳನ್ನು ಒಂದೇ ಸೂರಿನಡಿ ತಂದು ರೈತರಿಗೆ ಸುಸ್ಥಿರ ತೋಟಗಾರಿಕೆ ಮಾದರಿ ಪರಿಚಯಿಸುವ ಉದ್ದೇಶದಿಂದ ತೆರೆದುಕೊಂಡ ದಾಸೋಹಿ ಹಸಿರು ಅಭಿವೃದ್ಧಿ ಕೇಂದ್ರವು ಈ ಭಾಗದ ತೋಟಗಾರಿಕೆ ಹಸಿವನ್ನು ತಣಿಸಲೆಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ರೈತ ಉತ್ಪಾದಕ ಸಮೂಹ ಸಂಸ್ಥೆಗಳ ಅಧ್ಯಕ್ಷ, ಚಿಂತಕ ಅರವಿಂದ ಕೊಪ್ಪ ಮಾತನಾಡಿದರು.
ರಮೇಶ ಶರಣರು, ಶರಣಯ್ಯ ಹಿರೇಮಠ, ದಾಸೋಹಿ ಕಂಪನಿ ಉಪಾಧ್ಯಕ್ಷ ಜಿ.ಎಂ ಯಡವಣ್ಣವರ, ಕೃಷಿ ಚಿಂತಕ ಡಾ. ರಾಜಶೇಖರ ಹತ್ತರಸಂಗ ಮಾತನಾಡಿದರು. ಆರ್.ಬಿ ಸಜ್ಜನ, ಎನ್.ರವಿಕುಮಾರ, ಸಿ.ಆರ್ ಬಿರಾದಾರ, ಬಿ.ಎಂ ಪಾಟೀಲ, ನಿರ್ದೇಶಕರಾದ ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ(ಚೊಂಡಿ), ಬಸವರಾಜ ಕುಂಟೋಜಿ, ಪರಸಪ್ಪ ಮೇಟಿ, ಡಾ. ವಿಜಯ ಹುಬ್ಬಳ್ಳಿ, ಬಸವರಾಜ ಸಿದ್ದಾಪೂರ, ಗುರಯ್ಯ ಮುದ್ದನೂರಮಠ, ಅಮರೇಶ ಹಟ್ಟಿ, ಮಲ್ಲು ಗುರಡ್ಡಿ, ಲೇಶಪ್ಪ ಪ್ಯಾಟಿಗೌಡರ, ಪ್ರಗತಿಪರ ರೈತ ಜಿ.ಎನ್ ಬಿರಾದಾರ(ಬಿಂಜಲಭಾವಿ) ಮತ್ತೀತರರು ಇದ್ದರು. ಪ್ರಭುದೇವಯ್ಯ ಹಿರೇಮಠ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಅರಮನಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ರಶ್ಮಿ ಗೋನಾಳ ಕಾರ್ಯಕ್ರಮ ನಿರೂಪಿಸಿದರು. ಶರಣು ಹೆಬ್ಬಾಳ ವಂದಿಸಿದರು.

