ಎಚ್ ಡಿ ಕೋಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನಾ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಅವಳಿ ತಾಲೂಕಿನ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರವನ್ನು ಒಂದು ತಿಂಗಳಲ್ಲೇ ವಿತರಿಸಬೇಕು. ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ 2 ಟಿಎಂಸಿ ನೀರು ಲಿಫ್ಟ್ ಮಾಡಬೇಕೆಂದು ರೈತ ಮುಂಖಡ ಚಾ. ನಂಜುಂಡಮೂರ್ತಿ ಒತ್ತಾಯ ಮಾಡಿದರು.
ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಹಾಗೂ ವಿಳಂಭನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವೈನಾಡಲ್ಲಿ ವರುಣ ತೋರಿದೆ ಕೃಪದಿಂದ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಆ ನೀರನ್ನು ತಮಿಳುನಾಡಿಗೆ ಹರಿಯಬಿಡಲಾಗುತ್ತಿದೆ. ಮೊದಲು ತಾರಕ ಜಲಾಶಯ ಹಾಗೂ ಹೆಬ್ಬಾಳ ಜಲಾಶಯಕ್ಕೆ ನೀರು ತುಂಬಿಸಿ, ನಾಲೆಗಳಲ್ಲಿ ನೀರುಹರಿಸಿ ಕೆರೆಕಟ್ಟೆಗಳನ್ನು ಭರ್ತಿ ಮಾಡಬೇಕು. ಈ ಮೂಲಕ ಬತ್ತಿಹೋಗಿರುವ ಬೋರ್ ವೆಲ್ ಗಳಿಗೆ ಮರುಜೀವ ನೀಡಿ, ರೈತನ ಬದುಕನ್ನ ಹಸನಮಾಡಬೇಕು. ಕಾಡುಪ್ರಾಣಿಗಳಿಂದ ಜೀವಕ್ಕೆ ಹಾನಿಯಾದರೆ, ಸುಪ್ರೀಂಕೋರ್ಟ್ ನಿರ್ದೇಶನಂತೆ ಸೂಕ್ತ ಪರಿಹಾರ ಹಾಗೂ ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಲೋಕೇಶ್ ರಾಜ್ ಅರಸು ಮಾತನಾಡಿ, ರೈತರ ಬದುಕು ಇಂದು ಅತಂತ್ರವಾಗಿದೆ. ದಿನೇ ದಿನೇ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ, ಸ್ವಾತಂತ್ರ್ಯ ಬರುವ ಮೊದಲು ಈ ದೇಶದಲ್ಲಿ ಬರಗಾಲ ಇತ್ತು, ಆ ಪರಿಸ್ಥಿತಿಯನ್ನು ಎದುರಿಸಲು ವಿದೇಶದಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿಕೊಳ್ಳಲಾಗಿತ್ತು, ಆದರೆ ಇವತ್ತು ದೇಶದ ನೂರ ನಲ್ವತ್ತು ಕೋಟಿ ಜನಕ್ಕೂ ಯಾವುದೇ ಆಹಾರ ಕೊರತೆ ಆಗದಂತೆ ರೈತಾಪಿ ವರ್ಗವು ದುಡಿಯುತ್ತಿದೆ. ರಾಜ್ಯಕ್ಕೆ ಬರಗಾಲ ಬಂದಿದೆ ಈ ಬರಗಾಲವನ್ನ ಎದುರಿಸಲು ಸರ್ಕಾರ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹದೇವನಾಯ್ಕ, ನಂದೀಶ್, ಉಮೇಶ್, ಪ್ರಸಾದ್, ಚಾ.ನಂಜುಂಡಮೂರ್ತಿ, ಲೋಕೇಶ್ ರಾಜೇ ಅರಸ್, ಗೌಡೆಗೌಡ, ವಿಜಯೇಂದ್ರ, ಕೆ.ಸಿ.ಪರಮೇಶ್, ಶಿರಮಳ್ಳಿ ಸಿದ್ದಪ್ಪ, ಸರಗೂರು ನಟರಾಜು, ಮನುಸೋಮಯ್ಯ, ಹೆಜ್ಜಿಗೆ ಪ್ರಕಾಶ್, ಟಿ.ರಾಜು, ಮಹದೇವನಾಯ್ಕ, ನಂದೀಶ್ ಹಿರೇಹಳ್ಳಿ, ಬಿ.ಟಿ.ಉಮೇಶ, ಪಿ.ನಾಗರಾಜು, ಪ್ರಸಾದ್, ಚೌಡನಾಯ್ಕ, ಮಹೇಂದ್ರ, ಸಿ.ವೆಂಕಟಸ್ವಾಮಿ, ರವಿ, ಮುನಿಯಾಂಡಿ, ಬಸವರಾಜು, ಮಂಚನಾಯ್ಕ, ಚೌಡಮ್ಮ, ಚನ್ನನಾಯಕ, ಮಹಾಲಿಂಗು, ರತ್ನಮ್ಮ, ಬಿ.ಕೆ.ಮಹೇಶ್. ಬಸವರಾಜಪ್ಪಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ತಾಲೂಕು ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಪ್ರತಿಯೊಂದಕ್ಕೂ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಹಯೋಗದಲ್ಲಿ
ಎಚ್ ಡಿ ಕೋಟೆ ತಾಲೋಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸಂಘದ ಸದಸ್ಯರು, ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಗದ್ದಿಗೆ ಸರ್ಕಲ್ ನಿಂದ ಮಿನಿ ವಿಧಾನ ಸೌಧದ ಆವರಣದವರೆಗೂ ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗು ಬೈಕ್ ರ್ಯಾಲಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

