ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಈ ಭಾರಿ ಮುನಿಸಿಕೊಂಡಿರುವ ವರುಣದೇವ ಕೃಪೆಗಾಗಿ ಮುಸ್ಲಿಂ ಬಾಂದವರು ಶುಕ್ರವಾರರಂದು ಪಟ್ಟಣದಲ್ಲಿ ಮುಸ್ಲಿಂ ಬಾಂದವರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಪಟ್ಟಣ ಅಂಜುಮನ್ ಪ್ರೌಢ ಶಾಲೆಯ ಹಿಂಬಾಗದಲ್ಲಿರುವ ಬಾಪುಗೌಡ ಸಂಗನಗೌಡ ಪಾಟೀಲ ಅವರ ಜಮೀನಿನಲ್ಲಿ ಒಗ್ಗೂಡಿದ ನೂರಾರು ಮುಸ್ಲಿಂ ಬಾಂಧವರು ಸಾತೋ ಶಹೀದ ಜಾಮೀಯಾ ಮಸೀದಿಯಲ್ಲಿ ಶುಕ್ರವಾರ ನಮಾಜದ ಪ್ರಾರ್ಥನೆಯ ನಂತರ ಅಂಜುಮನ್ ಶಾಲೆಯ ಮೈದಾನದವರೆಗೆ ಪಾದಯಾತ್ರೆ ಮೂಲಕ ತೆರಳಿದ ನಂತರ ಈ ವಿಶೇಷ ಪ್ರಾರ್ಥನೆಯನ್ನು ಮೌಲಾನಾ ಮೊಹಮ್ಮದ್ ಅಜರುದ್ದೀನ ಖಾಸಮಿ ಅವರ ನೇತೃತ್ವದಲ್ಲಿ ನಿರ್ವಹಿಸಿದರು.
ನಂತರ ದೇವರಲ್ಲ್ಲಿ ಸಮೃದ್ಧ ಮಳೆ ಸುರಿಸುವಂತೆ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯದ್ ಶಕೀಲ ಅಹ್ಮದ್ ಖಾಜಿ ಅವರು ಮಾತನಾಡಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಮ್ಮ ರೈತರನ್ನು ಬಧುಕು ಒಳಗೊಂಡು ಎಲ್ಲರೂ ತೊಂದರೆಯಲ್ಲಿದ್ದಾರೆ ಇಂಥ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ದೇವರ ಮೊರೆ ಹೋಗಿ ಅವನಲ್ಲಿ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ. ಪ್ರವಾದಿ ಮಹಮ್ಮದರು ಮಳೆ ಬಾರದೆ ಇದ್ದಾಗ ತಮ್ಮ ಅನುಯಾಯಿಗಳಿಗೆ ಈ ರೀತಿಯ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲು ಸೂಚಿಸಿದ್ದಾರೆ. ಆದ್ದರಿಂದ ಇವತ್ತು ನಾವೆಲ್ಲರೂ ಇಲ್ಲಿ ಸೇರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದೇವೆ ಆ ದೇವರು ಆದಷ್ಟು ಬೇಗ ಸಮೃದ್ಧಿದಾಯಕ ಮಳೆ ಸುರಿಸಲೆಂದು ನಮ್ಮ ಪ್ರಾರ್ಥನೆ ಯಾಗಿದೆ ಎಂದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಇದಗಾ ಕಮಿಟಿ ಅಧ್ಯಕ್ಷ ಮಾಸೂಮಸಾಬ ಕೆಂಭಾವಿ, ಉಪಾಧ್ಯಕ್ಷ ಅಬ್ದುಲ್ ರಜಾಕ ಮನಗೂಳಿ, ಆಲಾ ಮಸೀದಿ ಅಧ್ಯಕ್ಷ ಅಲ್ಲಾಭಕ್ಷ ನಮಾಜಕಟ್ಟಿ, ಖಜಾಂಚಿ ರೋಷನ್ ಡೋಣಿ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹೀದ ಸಮಾಜಕಟ್ಟಿ, ಜಮಾತೆ ಅಹಲೆ ಹದೀಸ್ ಅಧ್ಯಕ್ಷ ಅಬ್ದುಲ್ ರಜಾಕ ನಾಲತವಾಡ, ಜಾಮಿಯಾ ಮಸೀದಿ ಅಧ್ಯಕ್ಷ ಖಾಜಾಹುಸೇನ ಸಗರ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ನಿರ್ದೇಶಕ ಇಬ್ರಾಹಿಂ ಮನ್ಸೂರ, ಮೊಹಮ್ಮದ್ ಶಫೀಕ ಇನಾಮದಾರ, ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.

