ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತಾನು ವಾಸಿಸುತ್ತಿರುವ ಪರಿಸರ, ಪ್ರಕೃತಿ ಸಮಾಜ, ಸಂಸ್ಕೃತಿ, ಕುಟುಂಬ ಪರಿವಾರ ಹೀಗೆ ಎಲ್ಲರೊಂದಿಗೆ ಒಂದು ಅನನ್ಯ, ಆತ್ಮೀಯ ಭಾವವನ್ನು ಹೊಂದಿರುತ್ತಾನೆ. ತನ್ನ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಸ್ಪಂದಿಸುವ ಪ್ರತಿಕ್ರಿಯಿಸುವ ಎಲ್ಲರೊಂದಿಗೆ ಮನುಷ್ಯ ಕೃತಜ್ಞತಾ ಭಾವವನ್ನು ಹೊಂದಿರಲೇಬೇಕು.
ಯಾವುದೇ ಒಂದು ಕಟ್ಟಡವನ್ನು ಕಟ್ಟುವಾಗ ಕಂಬಗಳನ್ನು ನಿರ್ಮಿಸುತ್ತಾರೆ. ಇದನ್ನು ಸ್ಟ್ರಕ್ಚರ್ ಅಥವಾ ಸಂರಚನೆ ಎಂದು ಕರೆಯುತ್ತೇವೆ. ಈ ರಚನೆಯ ಆಧಾರದ ಮೇಲೆ ಕಟ್ಟಡದ ಉಳಿದ ನಿರ್ಮಾಣ ಕಾರ್ಯ ನಡೆಯುತ್ತದೆ. ಈ ಕಂಬ (ಕಾಲಂ)ಗಳ ಸಂರಚನೆ ಸರಿಯಾಗಿರದಿದ್ದರೆ, ಅದೆಷ್ಟೇ ಚೆನ್ನಾಗಿ ಕಟ್ಟಿದರೂ ಕಟ್ಟಡ ತನ್ನ ಗಟ್ಟಿತನವನ್ನು, ರಚನಾತ್ಮಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಲ್ಲವೇ?
ಹಾಗೆಯೇ ಮಕ್ಕಳಲ್ಲಿ ಸಂಸ್ಕಾರ ಎಂಬ ಉತ್ತಮ ಅಡಿಪಾಯವನ್ನು ಹಾಕಿ ಸುಸಂಸ್ಕೃತಿಯನ್ನು ಬೆಳೆಸಬೇಕು. ಕುಟುಂಬದ ಹಿರಿಯರು ಹೇಳುವ ಮಾತುಗಳನ್ನು ಮಕ್ಕಳು ಕಡ್ಡಾಯವಾಗಿ ಪಾಲಿಸಲೇಬೇಕು ಎಂಬ ಅಲಿಖಿತ ನಿಯಮ ಮನೆಯಲ್ಲಿ ಜಾರಿಯಲ್ಲಿದ್ದರೆ, ಮಕ್ಕಳು ತಮ್ಮ ಹಿರಿಯರನ್ನು ಗೌರವಿಸುವರು. ಅವರ ಮಾತುಗಳಿಗೆ ಒಡಂಬಡುವರು. ಪರಿವಾರದ ಭದ್ರ ಬುನಾದಿ ಪರಿವಾರವು ಹಾಕಿ ಕೊಡುವ ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಿಸುವುದರಲ್ಲಿ ಇದೆ.
ಸಂಸ್ಕೃತಿ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ, ಕುಟುಂಬದ ಸರ್ವತೋಮುಖ ಬೆಳವಣಿಗೆ ಮತ್ತು ಕುಟುಂಬದಲ್ಲಿ ಉತ್ತಮ ಸಂವಹನ ನಡೆಯಲು ಬೇಕಾಗಿರುವುದು ಕುಟುಂಬದ ಸಂಸ್ಕೃತಿಯ ಪಾಲನೆ.
ಹಿರಿಯರ ಕುರಿತಾದ ಈ ರೀತಿಯ ಕೃತಜ್ಞತಾ ಭಾವವನ್ನು ಸೂಚಿಸುವುದೇ ಸುಸಂಸ್ಕೃತಿಯಾಗಿದ್ದು ಇದು ಕುಟುಂಬದ ಏಕತೆಯನ್ನು ತೋರುತ್ತದೆ.

ಕುಟುಂಬ ಚೆನ್ನಾಗಿದ್ದರೆ ಇಡೀ ದೇಶವು ಚೆನ್ನಾಗಿರುತ್ತೆ ಎಂಬ ಮಾತನ್ನು ನಮ್ಮ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಮ್ ಅವರು ಹೇಳಿದ್ದಾರಷ್ಟೇ. ಸಾಮೂಹಿಕ ಶಿಸ್ತು ಮತ್ತು ಬದ್ಧತೆಯುಳ್ಳ ಕುಟುಂಬ ಅತ್ಯಂತ ಸಮತೋಲನವನ್ನು ಕಾಯ್ದುಕೊಂಡು ಹೋಗುತ್ತವೆ.
ಕೌಟುಂಬಿಕ ಸಂಪ್ರದಾಯಗಳು ತಲೆತಲಾಂತರವಾಗಿ ಪಾಲಿಸಲ್ಪಡಬೇಕು. ಕುಟುಂಬದ ಕೆಲ ಮೂಲಭೂತ ವಿಷಯಗಳನ್ನು ನಾವು ಸರಿಯಾಗಿ ಪಾಲಿಸಿದ್ದೇ ಆದರೆ ಕುಟುಂಬದಲ್ಲಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿ ಸದಾ ನೆಲೆಸಿರುತ್ತದೆ.
ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡುವುದರ ಮೂಲಕ ಸಾಂಸಾರಿಕ ಒಗ್ಗಟ್ಟು, ಪ್ರೀತಿ, ವಿಶ್ವಾಸ ಬೆಳೆಯುತ್ತದೆ. ಎಲ್ಲರ ಬೇಕು ಬೇಡಗಳ ಅರಿವು ಉಂಟಾಗುತ್ತದೆ.
ಇದರ ಜೊತೆಗೆ ಒಟ್ಟಾಗಿ ಆಹಾರವನ್ನು ಸೇವಿಸುವುದರಿಂದ ಆಹಾರವನ್ನು ಪದೇ ಪದೇ ಬಿಸಿ ಮಾಡುವ, ಬಡಿಸುವ ಶ್ರಮವು ಕಡಿಮೆಯಾಗುವುದಲ್ಲದೇ ಆಹಾರ ಪೋಲಾಗುವುದು ಕೂಡ ತಪ್ಪುತ್ತದೆ. ಒಟ್ಟಾಗಿ ಊಟ ಮಾಡುವಾಗ ಆಹಾರದ ವಿತರಣೆ ಸರಿಯಾಗಿ ಆಗುತ್ತದೆ, ಆಹಾರವನ್ನು ಕೆಡಿಸದೆ ಉಣ್ಣುವುದು ಕೂಡ ಒಳ್ಳೆಯ ಸಂಸ್ಕೃತಿಯ ಲಕ್ಷಣ.
ಮನೆಯ ಕೆಲಸಗಳನ್ನು ಮನೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಹಂಚಿಕೊಂಡು ಮಾಡುವಾಗ ಅವರಲ್ಲಿ ಒಗ್ಗಟ್ಟು ಮೂಡುತ್ತದೆ. ಕೆಲಸದ ಹಂಚಿಕೆ ಕೆಲಸದ ಶ್ರಮವನ್ನು ಕೂಡ ಕಡಿಮೆ ಮಾಡುತ್ತದೆ, ಪರಸ್ಪರರಲ್ಲಿ ಅನುಸರಣ ಭಾವ ಮತ್ತು ಉತ್ತಮ ಸಂವಹನ ಕ್ರಿಯೆ ಬೆಳೆಯುತ್ತದೆ. ಮಾನಸಿಕ ಬಂಧಗಳು ಹೆಚ್ಚು ಸದೃಢವಾಗುತ್ತವೆ.
ಪ್ರತಿಯೊಂದು ಮನೆಯೊ ತನ್ನದೇ ಆದ ಸಂಸ್ಕೃತಿ, ಸಂಸ್ಕಾರಗಳನ್ನು ಹೊಂದಿದ್ದು ಮಕ್ಕಳು ತಮ್ಮ ಮನೆಯ ಎಲ್ಲಾ ರೀತಿ ರಿವಾಜುಗಳಿಗೆ ಪರಿಚಿತರಾಗಿರಬೇಕು. ಮನೆ ಎಂಬುದು ಒಂದು ಅಪ್ಯಾಯಮಾನವಾದ, ಅಕ್ಕರೆಯ, ನೆಮ್ಮದಿಯ ವಾಸಸ್ಥಳವಾಗಿರಬೇಕು, ಮನೆಯ ಪ್ರೀತಿಪೂರ್ವಕ ವಾತಾವರಣ ಆಯಸ್ಕಾಂತದಂತೆ ಮಕ್ಕಳನ್ನು ಸೆಳೆಯಬೇಕು.
ಪ್ರಸ್ತುತ ದಿನಮಾನಗಳಲ್ಲಿ ಕುಟುಂಬದ ನಿರ್ವಹಣೆ ಮಾಡಲು
ದಂಪತಿಗಳಿಬ್ಬರು ದುಡಿಯಬೇಕಾದ ಅನಿವಾರ್ಯತೆ ಇದೆ ಎಂಬುದು ನಿಜ. ಆದರೆ ಇದನ್ನು ಮಗುವಿಗೆ ಮನದಟ್ಟು ಮಾಡಿಕೊಡಬೇಕಾದ ಕರ್ತವ್ಯ ಪಾಲಕರದ್ದೇ, ಮಕ್ಕಳಿಗೆ ಅವರವರ ವಯಸ್ಸಿಗೆ ಅನುಗುಣವಾಗಿ ಅರ್ಥವಾಗುವಂತೆ ವಸ್ತು ವಿಷಯಗಳ ಗಂಭೀರತೆಯನ್ನು ತಿಳಿಸಿ ಹೇಳುವುದು ಪಾಲಕರ ಜವಾಬ್ದಾರಿ ಆಗಿರುತ್ತದೆ.

ಮನೆಯಲ್ಲಿ ಅಪ್ಪ ಅಮ್ಮ ಇದ್ದಾಗಲೂ ಕೂಡ ಮಕ್ಕಳು ಮೊಬೈಲನ್ನು ಹಿಡಿದು ಕುಳಿತುಕೊಳ್ಳುತ್ತಾರೆ ಎಂದರೆ ಅದರರ್ಥ ತನ್ನ ಅಪ್ಪ ಅಮ್ಮನಲ್ಲಿ ದೊರೆಯದ ಯಾವುದೋ ಒಂದು ಮನಸ್ಸಿಗೆ ಹಿಡಿಸುವ ವಿಷಯ ಮೊಬೈಲ್ ನಲ್ಲಿ ಮಕ್ಕಳಿಗೆ ದೊರೆಯುತ್ತದೆ ಎಂದಲ್ಲವೇ?. ಮಕ್ಕಳ ಪಾಲಿಗೆ ತಂದೆ ತಾಯಿಗಳು ಚುಂಬಕ ಶಕ್ತಿಯಂತೆ ಆಕರ್ಷಣೆಯನ್ನು ಹೊಂದಿರಬೇಕು. ತಮ್ಮೆಲ್ಲ ಬೇಕು ಬೇಡಗಳನ್ನು ನೋವು ನಲಿವುಗಳನ್ನು ಮಕ್ಕಳು ನಿಸ್ಸಂಕೋಚವಾಗಿ ಪಾಲಕರ ಮುಂದೆ ಹೇಳಿಕೊಳ್ಳುವಂತಹ ವಾತಾವರಣವನ್ನು ಪಾಲಕರು ಮನೆಯಲ್ಲಿ ಸೃಷ್ಟಿಸಬೇಕು.
ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ನಡವಳಿಕೆಯನ್ನು, ಮನೆಯ ಪರಿಪಾಠಗಳನ್ನು ಕಡ್ಡಾಯವಾಗಿ ಹಾಕಿಕೊಟ್ಟರೆ ಮುಂದೆ ಮಕ್ಕಳು ಅದೆಷ್ಟೇ ಬೆಳೆದು ದೊಡ್ಡವರಾದರು ಕೂಡ ಅವುಗಳನ್ನು ಪರಿಪಾಲಿಸುತ್ತಾರೆ. ಚಿಕ್ಕವರಿದ್ದಾಗ ‘ಅವರಿಗೆ ಏನು ತಿಳಿಯುತ್ತದೆ ಹೋಗಲಿ ಬಿಡು’ ಎಂದು ಭಾವಿಸಿ ಮಕ್ಕಳಿಗೆ ಏನೂ ಹೇಳದೆ ಹೋದರೆ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎಂಬಂತೆ ಮಕ್ಕಳು ಪಾಲಕರ ಮಾತನ್ನು ಅನುಸರಿಸುವುದಿಲ್ಲ.
ಭಾರತ ದೇಶ ಎಂಬುದು ಕೇವಲ ಒಂದು ದೇಶ ಮಾತ್ರವಲ್ಲ ಅದೊಂದು ಸನಾತನ ಸಂಸ್ಕೃತಿ. ಆಧ್ಯಾತ್ಮಿಕ ಔನ್ನತ್ಯವನ್ನು
ಹೊಂದಿರುವ ಭಾರತ ದೇಶ ಅದೆಷ್ಟೇ ವಿದೇಶಿ ಸಂಸ್ಕೃತಿಯ ಹೊರವೇಷವನ್ನು ಧರಿಸಿದ್ದರೂ ಮೂಲದಲ್ಲಿ ಭಾರತೀಯತೆಯ ಆತ್ಮಿಕ ಭಾವವನ್ನು ಹೊಂದಿದೆ. ಧರಿಸಿರುವುದು ವೇಷ ಎಂದಾದರೆ ಯಾವತ್ತಾದರೂ ಕಳಚಲೇಬೇಕಲ್ಲವೇ?
ನಮ್ಮ ಮಕ್ಕಳು ನಮ್ಮದೇ ನೆಲದ ಜೀವ, ಭಾವಗಳನ್ನು ಹೊಂದಿರುವಂತೆ ಬೆಳೆಸುವುದು ಪಾಲಕರ ಕರ್ತವ್ಯವಷ್ಟೇ ಅಲ್ಲ ಜವಾಬ್ದಾರಿ ಕೂಡ ಎಂಬ ಅರಿವು ಸದಾ ಪಾಲಕರಲ್ಲಿರಬೇಕು.


