ರಾಜ್ಯದಲ್ಲಿ ತೀವ್ರ ಬರಗಾಲ ಛಾಯೆ | ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕವನ್ನು ಕೂಡಲೇ ಬರಪೀಡಿತ ರಾಜ್ಯ ಎಂದು ಘೋಷಣೆ ಮಾಡಿ ಕೂಡಲೇ ರೈತರಿಗೆ ಅಭಯ ಹಸ್ತ ನೀಡುವುದಕ್ಕಾಗಿ ಬೆಳೆ ನಷ್ಟ ಪರಿಹಾರವಾಗಿ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಧನ ಘೋಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಿ ರೈತರು ಕೃಷಿ ಚಟುವಟಿಕೆಗಳಿಗೆ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್, ಸಹಕಾರ ವಲಯ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಒಂದು ಕಡೆ ಕೇಂದ್ರ ಸರ್ಕಾರದ ಷಡ್ಯಂತ್ರದ ಭಾಗವಾಗಿರು ಎಸ್.ಐ.ಆರ್. ಹಾಗೂ ಬರಗಾಲ ಎರಡು ಆತಂಕದ ಛಾಯೆ ಎದುರಾಗಿದೆ ಎಂದರು.
ವಾಡಿಕೆ ಮಳೆ ಪ್ರಮಾಣ ಶೇ.೭೫ ರಷ್ಟು ಕಡಿಮೆ ಮಳೆ ಸುರಿದಿರುವುದರಿಂದ ಬರಗಾಲ ಎದುರಾಗಿದೆ, ಬಿತ್ತನೆ ಪ್ರಮಾಣ ಶೇ.೧೫ಕ್ಕೆ ಸೀಮಿತವಾಗಿದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಹ ಬಿತ್ತನೆ ಮಾಡಬೇಡಿ ಎಂದು
ಹೇಳಿದ್ದಾರೆ, ಅನೇಕ ಜಲಾಶಯಗಳು ಭರ್ತಿಯಾಗಿಲ್ಲ, ಅತ್ತ ಬೋರವೆಲ್ ನೀರಿನ ಪ್ರಮಾಣವೂ ವ್ಯಾಪಕ ಪ್ರಮಾಣದಲ್ಲಿ ಕುಸಿದಿದೆ, ಮುಂಗಾರು ವೈಫಲ್ಯದಿಂದ ರಾಜ್ಯ ತೀವ್ರತರವಾದ ಬರ ಎದುರಿಸುತ್ತಿದೆ ಎಂದರು.
ಕೃಷಿ ಚಟುವಟಿಕೆಗಳು ಕೈಯಲ್ಲಿ ಇಲ್ಲ, ನರೇಗಾ ಸಹ ಹೊಸ ರೂಪದಲ್ಲಿ ಜಾರಿಯಾದ ಕಾರಣ ರೈತ ದೊಡ್ಡ ಸಂಕಷ್ಟ ಅನುಭವಿಸುವಂತಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ರೈತರು ಗುಳೇ ಹೋಗುವ
ಪರಿಸ್ಥಿತಿ ನಿರ್ಮಾಣವಾಗಿದೆ, ಈ ಎಲ್ಲ ಪರಿಸ್ಥಿತಿ ಎದುರಾದರೂ ಸರ್ಕಾರಗಳು ಯಾವ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದರು.
ನೀರಾವರಿ ಯೋಜನೆಗಳ ಜಾರಿಗೆ ಇಚ್ಚಾಶಕ್ತಿಯೇ ಇಲ್ಲ, ಒಂದರ್ಥದಲ್ಲಿ ಬರ ಎಂದರೆ ಈ ಸರ್ಕಾರಕ್ಕೆ ಆದಾಯ ಎಂಬಂತಾಗಿದೆ, ಬಡವರು ತಮ್ಮ ಆಸ್ತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ, ಬಡ್ಡಿ
ಮಾಡುವವರಿಗೆ ಬರ ಒಂದರ್ಥದಲ್ಲಿ ಸುಗ್ಗಿ, ಇವರೇ ರಾಜಕೀಯ ವ್ಯಕ್ತಿಗಳನ್ನು ಪೋಷಿಸುತ್ತಿದ್ದಾರೆ, ಇದು ದೊಡ್ಡ ದುರಂತ ಎಂದರು.
ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಎನ್.ಡಿ.ಆರ್.ಎಫ್ ನಿಯಮಾವಳಿಗಳು ಪರಿಷ್ಕರಣೆಯಾಗಬೇಕು, ಓಬಿರಾಯನ ಕಾಲದಲ್ಲಿರುವ ಈ ಮಾರ್ಗಸೂಚಿ ಬದಲಾಗಬೇಕಿದೆ, ಕೇರಳ ರಾಜ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ನೀರಾವರಿಯಾದರೆ ಬರಕ್ಕೆ ಹೆದರುವ ಅಗತ್ಯವಿಲ್ಲ, ನೀರಾವರಿ ಯೋಜನೆಗಳ ಜಾರಿಗೆ ಉದಾಸೀನ ನೀತಿ ರಾಜಕಾರಣಿಗಳಲ್ಲಿ ಅಡಗಿದೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಜಮೀನು ನೀಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ ಎಂದು ದೂರಿದರು.
ಸಂಘಟನೆಯ ಪ್ರಮುಖರಾದ ಖಾಜೇಸಾಬ ಕೊಲ್ಹಾರ, ಸಿದ್ಧರಾಮ ಹಂಜಗಿ, ಸಲೀಂ ನಾಯ್ಕೋಡಿ, ಗೋಪಾಲ ಶಿವಗದಗಿ, ಬೀರೇಶ ಬಿರಾದಾರ, ಬಷೀರಸಾಬ್ ತಾಂಬೆ, ನಿಂಗಪ್ಪ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

