ಡಂಬಳ ಗ್ರಾಮದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಪೆ.3 ರಿಂದ ಆರಂಭ
ಉದಯರಶ್ಮಿ ದಿನಪತ್ರಿಕೆ
ಡಂಬಳ: ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜಗದ್ಗುರು
ತೋಂಟದಾರ್ಯ ಮಠದ 286 ನೇ ಜಾತ್ರಾಮಹೋತ್ಸವ ಕಾರ್ಯಕ್ರಮಗಳು ಇದೇ ಪೆಬ್ರವರಿ 3 ರಿಂದ ಪ್ರಾರಂಭವಾಗಲಿದೆ. ಎರಡು ದಿನಗಳಕಾಲ ಸರಳತೆಯ ವೈಭವೋಪೇತದಲ್ಲಿ ನಡೆಯಲಿದೆ.
ಲಿಂ.ತೋಂಟದ ಡಾ, ಸಿದ್ದಲಿಂಗ ಮಹಾಸ್ವಾಮೀಜಿಯವರ ಪ್ರಕಾಶದಲ್ಲಿ, ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಹಾಗೂ ಸಕಲ ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮದ ವೈಭವದಲ್ಲಿ ವೈವಿಧ್ಯಮಯವಾಗಿ ಜರುಗಲಿವೆ.
ಇದೇ ಪೆಬ್ರುವರಿ 3 ರಿಂದ ಅಸಂಖ್ಯಾತ ಭಕ್ತಗಣದ ಆರಾಧ್ಯದೈವ ಶ್ರೀ ತೋಂಟದ
ಶ್ರೀಮಧರ್ದನಾರೀಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಪ್ರಾರಂಭವಾಗಲಿದೆ.
ಫೆಬ್ರುವರಿ 3 ರಂದು ಮಂಗಳವಾರ ಡಂಬಳದ ಭಕ್ತರಾದ ಚನ್ನಬಸಪ್ಪ. ಎಂ.ಪಟ್ಟಣಶೆಟ್ಟರ ಇವರ ಮನೆಗೆ ಪೂಜ್ಯ ಡಾ,ಸಿದ್ದರಾಮ ಶ್ರೀಗಳವರು ದಯಪಾಲಿಸಿ ಸಂಪ್ರದಾಯದಂತೆ ಪ್ರಸಾದ ಸ್ವೀಕರಿಸಿದ ಬಳಿಕ ಡಂಬಳ ಜೆ.ಟಿ. ಶ್ರೀಮಠಕ್ಕೆ ಸಂಜೆ 4 ಗಂಟೆಗೆ ಸಕಲವಾದ್ಯ ಮೇಳಗಳೊಂದಿಗೆ ಆಗಮಿಸಿ ಜಾತ್ರ್ಯೋತ್ಸವಕ್ಕೆ ಮೆರಗು ನೀಡಲಿದ್ದಾರೆ.
ಜಾತ್ರಾ ಪ್ರಯುಕ್ತ ತೋಂಟದ ಮಧರ್ದನಾರೀಶ್ವರ ಶಿವಯೋಗಿಗಳವರ 286 ವರ್ಷದ ಮಹಾರಥೋತ್ಸವವು ಸಂಜೆ 6-30 ಗಂಟೆಗೆ ವಾದ್ಯಮೇಳಗಳೊಂದಿಗೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಲಿವೆ.
ರಾತ್ರಿ 7-30 ಗಂಟೆಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಎಡೆಯೂರ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ- ಗದಗದ ಪರಮಪೂಜ್ಯರಾದ ತೋಂಟದ ಡಾ,ಸಿದ್ದರಾಮ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಖನಿಜ ಮತ್ತು ಅರಣ್ಯ ಇಲಾಖೆ ಅಧ್ಯಕ್ಷರಾದ ರೋಣ ಕ್ಷೇತ್ರದ ಜನಪ್ರಿಯ ಶಾಸಕರಾಗಿರುವ
ಜಿ.ಎಸ್. ಪಾಟೀಲ, ಡಂಬಳ ಗ್ರಾಮ ಪಂಚಾಯತ ಅಧ್ಯಕ್ಷೆ
ಶಿವಲೀಲಾ ಡಿ.ಬಂಡಿಹಾಳ, ಗ್ರಾಮದ ಗಣ್ಯರು, ಜಾತ್ರಾ ಕಮಿಟಿಯ ಪದಾಧಿಕಾರಿಗಳು ಸರ್ವಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಫೆಬ್ರುವರಿ 4 ಬುಧವಾರ ರಂದು ಶಿವಪ್ಪ ಸಿ. ಪ್ಯಾಟಿ ಭಕ್ತರ ಮನೆಗೆ ಪೂಜ್ಯ ತೋಂಟದ ಸಿದ್ದರಾಮ ಸನ್ನಿದಿಯವರು ದಯಪಾಲಿಸಿ ಪ್ರಸಾದ ಸ್ವೀಕರಿಸಲಿದ್ದಾರೆ. ನಂತರ ಡಂಬಳ ಜೆ.ಟಿ.ಮಠಕ್ಕೆ ಸಂಜೆ 4 ಗಂಟೆಗೆ ಪೂಜ್ಯರ ಆಗಮನವಾಗಲಿದೆ. ಬಳಿಕ ಸಂಜೆ 6-30 ಗಂಟೆಗೆ ಸಕಲವಾದ್ಯ ಮೇಳಗಳೊಂದಿಗೆ ಲಘು ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ರೊಟ್ಟಿ ಘಮ..ಸೇವನೆ ಗಮ್ಯ
ಅಂದು ಶ್ರೀಮಠದ ಅಂಗಳದಲ್ಲಿ ಖಡಕ್ ರೊಟ್ಟಿ ಘಮದ ಸುಗಂಧ ಪರಿಮಳಿಸಲಿದೆ. ಜಾತ್ರಾ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಜಾತಿ,ಜನಾಂಗ, ಮತ,ಪಂಥ,ವರ್ಗ, ಧರ್ಮದ ಪರಧಿ ತೊರೆದು ಸ್ವತಃ ತಾವೇ ತಮ್ಮ ಕೈಯಾರ ಏಕತಾ ಭಾವೈಕತೆಯ ಸಂಕೋಲೆಯಲ್ಲಿ ರುಚಿಕಟ್ಟಾದ ತೆಳ್ಳಗಿನ, ಬೆಳ್ಳಗಿನ ರೊಟ್ಟಿಗಳನ್ನು ತಯಾರಿಸಿಕೊಂಡು ಮಠಕ್ಕೆ ತಂದು ಕೊಡುವರು. ಜೆ ಟಿ ಮಠದಲ್ಲಿಯೇ ವಿವಿಧ ತರಕಾರಿಗಳಿಂದ ಕೂಡಿದ ತಪ್ಪಲ ಪಲ್ಲೆ, ವಿವಿಧ ಸ್ತರದ ಬಾಜಿ, ಕರೀಹಿಂಡಿ, ಅನ್ನ, ಬೊಳ್ಳೊಳ್ಳಿ ಚಟ್ನಿ, ಮೊಸರು, ಮಿಶ್ರೀತ ಬಾಣದ ಉಂಡಿ ಇವೆಲ್ಲ ಪದಾರ್ಥಗಳನ್ನು ರೊಟ್ಟಿಗಳೊಂದಿಗೆ ಸೇರಿಸಿ ರೊಟ್ಟಿ ಪ್ರಸಾದದ ಮಹಾ ಸೇವನೆಯೇ ವಿಶಿಷ್ಟ ವಾಗಿರುತ್ತದೆ.
ಭಕ್ತರು ರೊಟ್ಟಿಗಳನ್ನು ಮಠದ ಜಾತ್ರೆಗೆ ಪ್ರಾಂಜಲ್ಯ ಮನಸ್ಸಿನಿಂದ ಧಾರೆಯರಿಯುವ ಭಕ್ತಿ ಕೈಂಕರ್ಯ ವಿಶಿಷ್ಟವಾಗಿದೆ. ಭಾಗಶಃ ಒಂದು ತಿಂಗಳಿಂದಲೇ ಕೈಲಾದ ಮಟ್ಟಿಗೆ ತಮ್ಮ ತಮ್ಮ ಮನೆಯಲ್ಲಿ ರೊಟ್ಟಿ ಬೆಯಿಸಿ ಭಕ್ತಿಧಾರಣೆಯೊಂದಿಗೆ ರೊಟ್ಟಿ ಸೇವೆ ಪೂರೈಸುತ್ತಾರೆ, ಆ ರೊಟ್ಟಿಗಳ ಸಂಗ್ರಹ ಕಾರ್ಯ ಶ್ರೀಮಠದಲ್ಲಿ ನಡೆಯುತ್ತದೆ. ಭಕ್ತರು ಅನಂತಸೇವಾ ಮನೋಭಾವದೊಂದಿಗೆ ಮೆರೆಯುತ್ತಿರುವುದು ವಣಿ೯ಸಲು ಅಸಾಧ್ಯ. ಮಠದಲ್ಲಿ ಲಕ್ಷಾಂತರ ರೊಟ್ಟಿಗಳು ಶೇಖರಣೆಯಾಗಿ ಜಾತ್ರೆಗೆ ಆಗಮಿಸುವ ಭಕ್ತರ ನಾಲಿಗೆಯಲ್ಲಿ ಕುರ್ರುಂ ಕ್ರುಂ ಸದ್ದಿನೊಂದಿಗೆ ಪಲ್ಲೇ ಜತೆಗೆ ಹೊಟ್ಟೆಗಿಳಿಯುತ್ತದೆ. ನಿಜಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣ ರೊಟ್ಟಿ ಸವಿಯುವ ನೋಟದ ಭಿನ್ನಾಣ ಮೈಮನಗಳ್ಲಿ ವಿಭಿನ್ನ ರೋಮಾಂಚನ ಸೃಜೀಸುತ್ತದೆ. ಆ ಸವಿ ನೋಟ ಕಣ್ಮುಂಬಿಸಿಕೊಳ್ಳುವುದೇ ಅನೋನ್ಯಾನುಭವ ನೀಡುತ್ತದೆ. ತೋಂಟದಾರ್ಯ ಜಾತ್ರಾ ಮಹೋತ್ಸವದ ಸಾರಸ್ವತ ಸೊಗಡಿನ ಭಾವೈಕತಾ ಲೋಕ ಹೃನ್ಮನ ತಣಿಸುತ್ತದೆ. ಪರಮಾನಂದದ ಭಕ್ತಿಯೋನ್ಮಾದ ಮೇಳೈಸಿ ಕಳೆ,ಇಳೆಯ ಸಂಪ್ರೇಮದ ತೃಷೆಭಾವ ಮನಾಂಗಳದಲ್ಲಿ ಸಂಚಲಿಸುತ್ತದೆ. ರೊಟ್ಟಿ ಜಾತ್ರೆಯ ವೈಭೋಗ ಅತ್ಯಂತ ಗಮನೀಯ, ರಮಣೀಯವಾಗಿ ಕಂಗೊಳಿಸುತ್ತದೆ. ರೊಟ್ಟಿ ಜಾತ್ರಾ ಸವಿಯ ಪುಳುಕಂತೂ ಭಕ್ತ ಕಂಗಳಲ್ಲಿ ಭಕ್ತಿಪ್ರಧಾನದ ಗಾನಯಾನದ ನವೀನತೆಗೆ ಸರಿಸಮ ಸ್ಪರ್ಶದ ನಾದಗಳ ರೋಮಾಂಚಕ ಲೀಲೆ ಕಲ್ಪಿಸುತ್ತದೆ. ಈ ಜಾತ್ರೆ ರೊಟ್ಟಿ ಜಾತ್ರೆ ಅಂತಲೇ ಉತ್ತರ ಕರ್ನಾಟಕದಲ್ಲಿಯೇ ಖ್ಯಾತಿ ಪಡೆದಿರುವುದು ಗಮನಾರ್ಹ. ತೋಂಟದ ಯತಿಗಳ ಕೃಪಾ ಕೃಪೆ ಮರೆಯಲಾಗದ ಕಥೆಗಳಾಗಿ ಹೊರಳಿವೆ ಎಂಬುದು ಸತ್ಯ ದರ್ಪಣವಾಗಿದೆ. ಹೀಗಾಗಿ ಡಂಬಳ ಜಾತ್ರಾ ರೊಟ್ಟಿ ಜಾತ್ರಾ ಖ್ಯಾತಿ ಲೇಪಿಸಿಕೊಂಡಿದೆ.
ಸಿದ್ದರಾಮ ಶ್ರೀಗಳವರ ಸನ್ನಿಧಿಯ ಆಭಯ
ತೋಂಟದ ಡಾ,ಸಿದ್ದರಾಮ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ರಾತ್ರಿ 7-30 ಗಂಟೆಗೆ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ವತ್ಪೂರ್ಣ ಚಾಲನೆ ದೊರೆಯಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಮಾಜಿ ಸಚಿವರಾದ ಎಸ್. ಎಸ್. ಪಾಟೀಲ ಹಾಗೂ ಜೆ.ಟಿ.ವಿ.ಪಿ. ಶಿಕ್ಷಣ ಸಂಸ್ಥೆ ಡಂಬಳ-ಗದಗ ಆಡಳಿತಾಧಿಕಾರಿಗಳಾದ ಪ್ರೊ ಎಸ್.ಎಸ್.ಪಟ್ಟಣಶೆಟ್ಟರ, ಗದಗ ಹಾಗೂ ಡಂಬಳ ಜೆ.ಟಿ.ಮಠದ ವ್ಯವಸ್ಥಾಪಕರಾದ ಎಂ.ಎಸ್.ಅಂಗಡಿ,ಜಿ.ವಿ. ಹಿರೇಮಠ, ಜೆ.ಟಿ.ವಿ.ಪಿ. ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು,ಜಾತ್ರಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಗಣ್ಯಮಾನ್ಯ ಮಹನೀಯರು,ಭಕ್ತರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಗದಗ ಜೆ.ಟಿ.ಕಾಲೇಜು ವಿದ್ಯಾರ್ಥಿಗಳಾದ ಆಕಾಶ ಜೋಗರಡ್ಡಿ ಹಾಗೂ ಶ್ರವಣಕುಮಾರ ಇವರಿಂದ ಸ್ಕಿಪ್ಪಿ0ಗ ಪ್ರದರ್ಶನ ನಡೆಯಲಿದೆ. ಆ ನಿಮಿತ್ಯ ಅವರಿಗೆ ಸನ್ಮಾನ ಜರುಗುವದು.
ಜಾತ್ರೆಯ ದಾಸೋಹ ಸೇವೆ ಗೈದಿರುವ ವಿವಿಧ ಸ್ವಸಹಾಯ ಗುಂಪುಗಳಿಗೆ ವಿದ್ಯಾರ್ಥಿ,ಗೆಳೆಯರ ಬಳಗದವರಿಗೆ ಜಾತ್ರಾ ಸರ್ವ ಸಮಿತಿಗಳ ಸರ್ವ ಸದಸ್ಯರಿಗೆ, ದಾನಿಗಳಿಗೆ ಪೂಜ್ಯ ಸನ್ನಿದಿಯವರಿಂದ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ.
2025-26 ನೇ ಸಾಲಿಗಾಗಿ ಜಗದ್ಗುರು ತೋ0ಟದಾರ್ಯ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿರುವ ಜೆ.ಟಿ.ಮಠದ ಜಾತ್ರಾಮಹೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಯಲ್ಲಪ್ಪ.ಎನ್. ದಂಡಿನ, ಉಪಾಧ್ಯಕ್ಷರಾಗಿ ಯಂಕಣ್ಣ ಎಸ್.ಗಡಗಿ, ಕಾರ್ಯದರ್ಶಿಯಾಗಿ ಬುಡ್ನೇಸಾಬ. ಬಿ.ಅತ್ತಾರ, ಖಜಾಂಜಿಯಾಗಿ, ತಿಮ್ಮಪ್ಪ ಆರ್.ವಡ್ಡರ ಹಾಗೂ ವಿವಿಧ ಜಾತ್ರಾ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಜಾತ್ರಾ ಉತ್ಸವದ ಕಾಯಕ ತತ್ಪರತೆಯಲ್ಲಿ ತಲ್ಲಿನರಾಗುವರು,
ಐತಿಹ್ಯ ಹಿನ್ನೆಲೆ ಹೊಂದಿರುವ ಈ ಜಾತ್ರೆಯು ಹಿಂದೂ- ಮುಸ್ಲಿಂ ಬಾಂಧವರ ಸಾಮರಸ್ಯದ ಪ್ರತೀಕವಾಗಿದೆ. ಭಾವೈಕ್ಯತೆ ಪರಿಮಳದ ಪ್ರತಿಬಿಂಬ ಹೊಂದಿದೆ.
ಡಂಬಳ ಗ್ರಾಮದಲ್ಲಿ ಪೆಬ್ರುವರಿ 5 ಗುರುವಾರ ರಂದು ಜಮಾಲ ಶಾವಲಿ ಶರಣರ ಗಂಧ, ಶುಕ್ರವಾರ 6 ರಂದು ಉರುಸು ಜರುಗುವದು,ಸರ್ವ ಭಕ್ತಾದಿಗಳು ಆಗಮಿಸಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಜಾತ್ರಾಮಹೋತ್ಸವ ಸಮಿತಿಯವರು ವಿನಂತಿಸಿದ್ದಾರೆಂದು ಜಾತ್ರಾ ಪ್ರಚಾರ ಸಮಿತಿಯ ಟಿ. ಬಿ. ಕರದಾನಿ ಉಪನ್ಯಾಸಕರು, ಎಂಎಚ್ಎಂ ಪ.ಪೂ ಕಾಲೇಜ್, ಆಲಮಟ್ಟಿ ಸಾ.ಡಂಬಳ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


