ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ವರಕವಿ ಡಾ. ದ.ರಾ.ಬೇಂದ್ರೆ ಅವರ 130 ನೆ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಹಾವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಶಿಕ್ಷಕರು ಮತ್ತು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಬೇಂದ್ರೆ ಅವರ ಕವನಗಳು ಯುವಜನರಲ್ಲಿ ಚೈತನ್ಯ, ದೇಶ ಭಕ್ತಿ, ಮತ್ತು ಬದುಕಿನ ನೈಜ ಪ್ರೀತಿಯನ್ನು ಮೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.
ಗೌರವ ಉಪಸ್ಥಿತರಾಗಿ ಅಂಜುಮನ್ B.Ed ಕಾಲೇಜು ಪ್ರಾಚಾರ್ಯೆ ಡಾ.ಶಾರದಾಮಣಿ ಹುಣಶಾಳ ಅವರು, ಬೇಂದ್ರೆ ಅವರಿಗೆ ಜೀವನವೇ ಕಾವ್ಯ – ಕಾವ್ಯವೇ ಜೀವನವಾಗಿತ್ತು. ಕುವೆಂಪು, ಬೇಂದ್ರೆ ಇವರು ಕನ್ನಡ ಸಾರಸ್ವತ ಲೋಕದ ಎರಡು ಕಣ್ಣುಗಳು. ಅವರು ಸಾಗಿ ಬಂದ ಧಿವ್ಯಪಥ ನಮ್ಮ ಮುಂದೆ ಇದೆ. ಅವರ ನೆನಪು ನಮ್ಮಲ್ಲಿ ನಾಡು-ನುಡಿಯ ಅಭಿಮಾನವನ್ನು ಉಕ್ಕಿಸಲಿ ಎಂದು ಆಶಿಸಿದರು.
ಅಧ್ಯಕ್ಷ ಸ್ಥಾನ ವಹಿಸಿದ, ಮಹಾವಿದ್ಯಾಲಯ ಆಡಳಿತಗಾರ ಕು.ಮುಬೀನಾ ಮುಶ್ರೀಫ್ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಾಧ್ಯಾಪಕಿ ಡಾ. ಸುನಂದಾ ಗುಡದೂರ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಫಾಹಿಮಾ ಖಾಜಿ, ಶ್ರೀಮತಿ ಸಜಿಯಾ ಇನಾಂದಾರ್, ಡಾ. ನಜ್ನೀನ್ ಪಠಾಣ್, ಶ್ರೀಮತಿ ನಹಿದಾ ಅಂಜುಮ್ ಬಗಲಿ, ಬಿ.ಏಚ್.ಅವಟಿ, ಎಫ್.ಆರ್. ಸಾರ್ವಾಡ, ಎಂ.ಎಂ.ಮುಲ್ಲಾ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ, ಕು.ಕಾವೇರಿ ತೆಲಸಂಗ ಕಾರ್ಯಕ್ರಮ ನಿರ್ವಹಿಸಿದರು. ಮೊಹಮ್ಮದ ಆಸಿಮ್,ಮತ್ತು ನೀಲಮ್ಮ ಪ್ರಾರ್ಥಿಸಿದರು. ವಿಶಾಲಾಕ್ಷಿ ವಂದಿಸಿದರು.

