ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪಟ್ಟಣದ ಉತ್ತರಾದಿ ಮಠದಲ್ಲಿ ಮಧ್ವನವಮಿ ಕಾರ್ಯಕ್ರಮವನ್ನು ಮಂಗಳವಾರ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು. ಮಧ್ವನವಮಿಯಿಂಗವಾಗಿ ಬೆಳಗ್ಗೆ 9 ಗಂಟೆಗೆ ಮುಖ್ಯಪ್ರಾಣ ದೇವರಿಗೆ ಹಾಗೂ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ವಾಯುಸ್ತುತಿ ಪುನಶ್ಚರಣ, ಭಜನಾ ಕಾರ್ಯಕ್ರಮ ಮುಂತಾದವು ನಡೆದವು. ನಂತರ ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸುಮಧ್ವ ವಿಜಯ ಗ್ರಂಥಗಳೊಂದಿಗೆ ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ ಸೇವೆಗಳು ವಿಜೃಂಭಣೆಯಿಂದ ಜರುಗಿದವು.
ಈ ಸಂದರ್ಭದಲ್ಲಿ ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಅವರು ಮಾತನಾಡಿ, ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿದ ದಿನವನ್ನು ಸ್ಮರಿಸುವುದಕ್ಕೆ ಮಧ್ವನವಮಿಯನ್ನು ಆಚರಿಸಲಾಗುತ್ತದೆ. ಮಧ್ವಮತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಶ್ರೀಮದಾಚಾರ್ಯರ ಸ್ಮರಣೆ ಅನುದಿನವೂ ಅವಶ್ಯಕ ಎಂದು ತಿಳಿಸಿದರು.
ಶ್ರೀಮಠದ ಸದ್ಭಕ್ತ ಆನಂದ ಜಿ.ಕುಲಕರ್ಣಿ ಅವರು ಇಂದಿನ ಕಾರ್ಯಕ್ರಮದ ಸಮಸ್ತ ಸೇವಾ ಕೈಂಕರ್ಯ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಕೈಗೊಂಡಿದ್ದರು. ಶ್ರೀಮಠದ ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ, ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರು ಹಾಗೂ ನೂರಾರು ಸದ್ಭಕ್ತರು ಹಾಗೂ ಮಹಿಳೆಯರು ಈ ಉತ್ಸವದಲ್ಲಿ ಪಾಲ್ಗೊಂಡು ವೇದಾಂತ ಸಾಮ್ರಾಜ್ಯದ ಚಕ್ರವರ್ತಿ ಶ್ರೀಮದಾಚಾರ್ಯರ ದರ್ಶನವನ್ನು ಪಡೆದು ಪುನೀತರಾದರು.

