ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ ಅಂತೆ ನಮಗೂ ಒಂದು ಬೋರ್ಡ್ ಮಾಡಿಕೊಡುವ ಅಗತ್ಯವಿದೆ. ಬೆಳಗಾವಿಯಲ್ಲಿ ನಡೆದ ಈ ಅಧಿವೇಶನ ಸಾರ್ಥಕವಾಗುತ್ತದೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ`ಮಾತನಾಡಿದ ಅವರು, ಈ ಭಾಗದ ಜಲ್ವಂತ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಸರ್ಕಾರದ ಗಮನ ಸೆಳೆದರು.ಉತ್ತರ ಕರ್ನಾಟಕದಲ್ಲೇ ವಿಜಯಪುರ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಆದ್ದರಿಂದ ಜಿಲ್ಲೆ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವ್ಯವಸ್ಥೆ ಇಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಸರಿಯಾದ ರೈಲಿನ ವ್ಯವಸ್ಥೆ ಕೂಡ ಇಲ್ಲ. ಪ್ರಯಾಣಿಕರು ಬೆಂಗಳೂರಿಗೆ ತಲುಪಲು 9 ರಿಂದ 10 ಗಂಟೆಯವರೆಗೆ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ಸರಕಾರ ಆಲಮಟ್ಟಿಯಿಂದ ಚಿತ್ರದುರ್ಗ ಮಾರ್ಗವಾಗಿ ರೈಲು ಮಾರ್ಗ ಮಾಡಬೇಕೆಂಬುದು ಬಹು ಮುಖ್ಯ ಬೇಡಿಕೆಯಾಗಿದೆ ಎಂದರು.
ಈ ಸಲ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗಿರುವದರಿಂದ ರೈತರ ಹೊಲಗಳಿಗೆ ಹೋಗಲು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಆ ರಸ್ತೆಗಳ ಸುಧಾರಣೆಗೆ ಜಿಲ್ಲಾ ಪಂಚಾಯತ್ಗೆ ಅನುದಾನ ನೀಡಿ ಎಂದು ಮನವಿ ಮಾಡಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಸರಕಾರ ವಿಮಾ ಪರಿಹಾರ ಬಿಡುಗಡೆ ಮಾಡಿದೆ, ಕೆಲವು ರೈತರಿಗೆ ಬಂದಿದೆ. ಇನ್ನೂ ಕೆಲವು ರೈತರಿಗೆ ಬಂದಿಲ್ಲ. ಅದನ್ನು ಸಹ ಶೀಘ್ರದಲ್ಲಿಯೇ ಸರಿಪಡಿಸಬೇಕು. ರೈತರು ತಮ್ಮ ಹೊಲದಲ್ಲಿ ಕೆನಾಲ್ಳಿಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಕೋರ್ಟ್ನಿಂದ ಅವಾರ್ಡ್ ಆದರೂ ಇನ್ನೂವರೆಗೂ ಅವರಿಗೆ ಕೂಡಲೇ ಹಣ ಬಿಡುಗಡೆ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಜಮೀನು ಕಳೆದುಕೊಂಡ ರೈತರಿಗೆ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ತಮ್ಮ ಮತಕ್ಷೇತ್ರ ದೇವರಹಿಪ್ಪರಗಿ ನೂತನ ತಾಲೂಕ ಆಗಿದೆ. ಪ್ರಜಾಸೌಧದಲ್ಲಿ ಎಲ್ಲ ಕಚೇರಿಗಳು ಇನ್ನೂವರೆಗೂ ಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಅದನ್ನು ಸಹ ಶೀಘ್ರ ಸರಿಪಡಿಸಬೇಕು ಎಂಬುದೂ ಸೇರಿದಂತೆ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದರು.
ಕಂದಾಯ ಸಚಿವರು ಹೇಳಿದಂತೆ ರೂ.50 ಬಾಂಡನಲ್ಲಿ ಅಕ್ರಮವಿರುವದನ್ನು ಸಕ್ರಮ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ ರೈತರಿಗೆ ಆರ್.ಆರ್. ನಂಬರ್ ಸಹ ನೀಡಲಾಗಿದೆ. ಆರ್.ಆರ್. ನಂಬರ್ ಇದ್ದವರಿಗೂ ಹಣ ಕಟ್ಟುವಂತೆ ಹೇಳಲಾಗುತ್ತಿದೆ. ಇದರ ಬಗ್ಗೆ ಸಚಿವರು ಗಮನ ಹರಿಸಬೇಕೆಂದರು.
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಸಿನ್ ಸೇರಿದಂತೆ ಅನೇಕ ಸಣ್ಣ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರನ್ನು ರದ್ದುಪಡಿಸಿ ಮತ್ತೆ ಹೊಸದಾಗಿ ಬೇರೆಯವರನ್ನು ಇಲಾಖೆಯ ನಿರ್ದೇಶಕರು ತೆಗೆದುಕೊಳ್ಳಲು ಹೊರಟಿದ್ದಾರೆ. ಇದರಿಂದಾಗಿ 36 ಸಾವಿರ ಜನರು ಬೀದಿಗೆ ಬರುತ್ತಾರೆ. ಇದರ ಬಗ್ಗೆ ಆರೋಗ್ಯ ಸಚಿವರು ಗಮನ ಹರಿಸಬೇಕು. ಬಿಪಿಎಲ್ ಕಾರ್ಡ್ ಹೊಂದಿದವರು ಹೃದಯಾಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆ ಕಾರ್ಡ್ ಜನರೇಟ್ ಆಗಬೇಕೆಂದರೆ ಎರಡು-ಮೂರು ದಿನ ಬೇಕಾಗುತ್ತದೆ. ಒಂದು ವೇಳೆ ದಾಖಲಾದ ರೋಗಿ ಮೃತಪಟ್ಟರೆ ಅವರು ಹಣ ಕಟ್ಟಬೇಕಾಗುತ್ತದೆ. ಮೊದಲೇ ಅವರು ಬಡವರಾಗಿರುತ್ತಾರೆ. ಅವರಿಗೆ ಇದು ಹೊರೆಯಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರು ಆಸ್ಪತ್ರೆಗೆ ದಾಖಲಾದರೆ ಕೂಡಲೇ ಅದು ಜನರೇಟ ಆಗುವಂತೆ ಕ್ರಮ ತೆಗೆದುಕೊಳ್ಳುವಂತೆ ಮಾಡಬೇಕಿದೆ ಎಂದರು.

