ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ ಅನಿಲ ಕುಂಭ್ಳೆ ಅವರ ವೃತ್ತಿ ಜೀವನದ ಆರಂಭದಲ್ಲಿ ವಿಮರ್ಶಕರಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಅವರು ಸಾಂಪ್ರದಾಯಿಕ ಸ್ಪಿನ್ನರ್ಗಳಂತೆ ಚೆಂಡನ್ನು ಹೆಚ್ಚು ಟರ್ನ್ ಮಾಡುವುದಿಲ್ಲ ಹೀಗಾಗಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಮಾಧ್ಯಮಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಬಹಿರಂಗವಾಗಿ ಅವಮಾನಿಸಲಾಗಿತ್ತು. ಟೀಕೆಗಳಿಗೆ ಅನಿಲ ಕುಂಬ್ಳೆ ಮೈದಾನದಲ್ಲಾಗಲಿ ಹೊರಗಾಗಲಿ ಎಂದೂ ಜಗಳವಾಡಲಿಲ್ಲ. ಬದಲಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿಖರ ಬೌಲಿಂಗ್ ದಾಳಿ ನಡೆಸಿ ಪಾಕಿಸ್ತಾನದ ವಿರುದ್ಧ ಒಂದೇ ಇನ್ನಿಂಗ್ಸ್ನಲ್ಲಿ ೧೦ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಜಾಗತಿಕ ದಂತಕಥೆಯಾಗಿ ವಿಮರ್ಶಕರ ಬಾಯಿ ಮುಚ್ಚಿಸಿದರು. ‘ಬಿದ್ದಾಗ ನಗುವವರ ಸಂಖ್ಯೆ ಹೆಚ್ಚಿರಬಹುದು. ಆದರೆ ಗೆದ್ದಾಗ ಚಪ್ಪಾಳೆ ತಟ್ಟುವ ಜಗತ್ತು ಇದೇ ಆಗಿದೆ.’ ಆದ್ದರಿಂದ ದೃತಿಗೆಡದೇ ಮುನ್ನಡೆಯಬೇಕು.
ಹಾಗಾದರೆ ಗೆಲುವಿನ ಹಾದಿಯಲ್ಲಿ ಎದುರಾಗುವ ಅವಮಾನವನ್ನು ಮೆಟ್ಟಿ ನಿಲ್ಲುವ ಬಗೆ ಹೇಗೆ? ಎಂಬ ಪ್ರಶ್ನೆಗೆ ಉತ್ತರವಾಗಿ ಇಲ್ಲಿವೆ ಕೆಲವು ಸಲಹೆಗಳು.

ದೃಷ್ಟಿ
ಹೋದಲೆಲ್ಲ ನಮ್ಮನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವುದಿಲ್ಲ. ಹಾಗೆಯೇ ಯಾವಾಗಲೂ ಗೆಲುವು ನಮ್ಮೊಂದಿಗೆ ಬರುವುದಿಲ್ಲ. ನಾವಂದುಕೊಂಡ ಕೆಲಸಗಳು ನಿಗದಿತ ಸಮಯಕ್ಕೆ ಆಗದಿರುವ ಸಮಯದಲ್ಲೂ ಅವಮಾನ ಉಂಟಾಗಬಹುದು. ಕೆಲವು ಸಮಯದಲ್ಲಿ ನಮ್ಮದೇನೂ ತಪ್ಪು ಇಲ್ಲದಿದ್ದರೂ ಅವಮಾನ ಅನುಭವಿಸಬೇಕಾಗುತ್ತದೆ. ಬೇರೆಯವರ ದೃಷ್ಟಿಯಲ್ಲಿ ಸಣ್ಣವರಾಗಿ ಕಾಣುತ್ತೇವೆ. ಅದು ನಮ್ಮನ್ನು ಒಮ್ಮೊಮ್ಮೆ ಖಿನ್ನತೆಗೆ ಕೂಡ ತಳ್ಳಬಹುದು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇತರರ ದೃಷ್ಟಿಯನ್ನು ಬಿಟ್ಟು ನಿಮ್ಮ ದೃಷ್ಟಿಯಲ್ಲಿ ನೋಡಬೇಕು. ಅವಮಾನಿಸಿದವರ ದೃಷ್ಟಿ ಸರಿಯಾಗಿದ್ದರೆ ತಿದ್ದಿಕೊಳ್ಳಬೇಕು. ನಿಮ್ಮ ಗುರಿ ಮತ್ತು ನೀವು ಹೋಗುವ ದಾರಿ ಸರಿಯಿದ್ದರೆ ಸಾಕು ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ‘ಜಗತ್ತು ನಿಮ್ಮನ್ನು ಹೇಗೆ ನೋಡುತ್ತದೆ ಮುಖ್ಯವಲ್ಲ, ನಿಮ್ಮ ಗುರಿಯ ಮೇಲೆ ನಿಮಗಿರುವ ದೃಷ್ಟಿ ಮತ್ತು ಕಠಿಣ ಪರಿಶ್ರಮ ಮಾತ್ರ ನಿಮ್ಮ ಭವಿಷ್ಯವನ್ನು ಬದಲಾಯಿಸಬಲ್ಲದು.’
ಬೇಡ ಕೋಪ

ಅವಮಾನ ಅನುಭವಿಸಿದ ಬಹಳಷ್ಟು ಸಂದರ್ಭದಲ್ಲಿ ಕೋಪ ನೆತ್ತಿಗೇರುತ್ತದೆ. ನಾನು ಆ ಅವಮಾನಕ್ಕೆ ಯೋಗ್ಯನಲ್ಲ ಎಂದು ಜೋರಾಗಿ ಚೀರಿ ಹೇಳಬೇಕೆನಿಸುತ್ತದೆ. ಆದರೆ ಆ ಕೂಗಾಟ ಬೆಂಕಿಗೆ ತುಪ್ಪ ಸುರಿದಂತೆ ಮತ್ತಷ್ಟು ಅವಮಾನ ಹೆಚ್ಚಿಸುತ್ತದೆ. ‘ಕೋಪವು ಬುದ್ಧಿಯನ್ನು ನಾಶಪಡಿಸುತ್ತದೆ. ಮೌನವು ಎದುರಾಳಿಯನ್ನು ಯೋಚಿಸುವಂತೆ ಮಾಡುತ್ತದೆ.’ ಅವಮಾನಕ್ಕೆ ಜಗಳವಾಡುವುದಾಗಲಿ ಇಲ್ಲವೇ ಕೋಪದಿಂದ ಕಿರುಚಾಡುವುದಾಗಲಿ ಉತ್ತರವಲ್ಲ. ಅವಮಾನ ಎಂಬುದು ನಮ್ಮ ಯೋಗ್ಯತೆಯನ್ನಾಗಲಿ, ನಮ್ಮ ಬದುಕಿನ ಭವ್ಯ ಭವಿಷ್ಯವನ್ನಾಗಲಿ ನಿರ್ಧರಿಸುವುದಿಲ್ಲ ಎಂಬುದನ್ನು ಚೆನ್ನಾಗಿ ನೆನಪಿಡಬೇಕು.
ಮೌನ ವಹಿಸಿ
ದುಡುಕಿ ಪ್ರತ್ಯುತ್ತರ ನೀಡುವುದೂ ಸರಿಯಲ್ಲ. ಅವಮಾನವಾದ ಕ್ಷಣದಲ್ಲಿ ಕೆಲ ಕಾಲ ಮೌನವಾಗಿರುವುದು ಒಳಿತು. ಮೌನವಾಗಿ ಇದ್ದರೆ ಅದು ನಮ್ಮ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಎಷ್ಟೋ ಸಲ ಅವಮಾನ ಮಾಡಿದವರಿಗೆ ಪ್ರತಿಕ್ರಿಯೆ ನೀಡಲು ಮುಂದಾಗುತ್ತೇವೆ. ನಾವು ಕೊಟ್ಟ ಪ್ರತಿಕ್ರಿಯೆ ಅವರ ಆಟಕ್ಕೆ ಬೆಲೆ ಕೊಟ್ಟಂತಾಗುತ್ತದೆ. ಅವಮಾನಕ್ಕೆ ಮೌನದಿಂದ ಉತ್ತರಿಸುವುದು ಉತ್ತಮ ಮಾರ್ಗವಾಗಿರುತ್ತದೆ. ಮೌನವಾಗಿದ್ದರೆ ಅವಮಾನಿಸಿದವರ ಅಹಂಕಾರವೂ ತಗ್ಗುತ್ತದೆ. ಮೌನ ತಾತ್ಕಾಲಿಕ ಪರಿಹಾರವಲ್ಲ. ಅದು ನಮಗೆ ಆಂತರಿಕ ಶಕ್ತಿಯನ್ನೂ ನೀಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅವಮಾನಗಳಿಗೆ ಮಾತಿನಲ್ಲಿ ಉತ್ತರ ನೀಡುವುದಕ್ಕಿಂತ ನಮ್ಮ ಸಾಧನೆಯ ಮೂಲಕ ಉತ್ತರ ನೀಡುವುದು ಅತ್ಯಂತ ಪರಿಣಾಮಕಾರಿ ಮಾರ್ಗ. ನಿಮ್ಮನ್ನು ಕೀಳಾಗಿ ಕಂಡವರ ಮುಂದೆ ಎಂದಿಗೂ ವಾದ ಮಾಡಬೇಡಿ. ನಿಮ್ಮ ಮೌನ ಕಠಿಣ ಪರಿಶ್ರಮವಾಗಿ ಬದಲಾಗಲಿ. ನಿಮ್ಮ ಯಶಸ್ಸು ಅವರಿಗೆ ಉತ್ತರಿಸಲಿ.
ಸ್ವೀಕರಿಸಿ
ಹೊಡೆದ ಕಲ್ಲುಗಳಿಂದಲೇ ಕೋಟೆ ಕಟ್ಟಿಕೊಳ್ಳಿ ಎಂಬ ಮಾತಿನಂತೆ ಅವಮಾನಗಳಿಂದಲೇ ಸನ್ಮಾನದ ದಾರಿಯಲ್ಲಿ ಭದ್ರ ಕೋಟೆ ಕಟ್ಟಿಕೊಳ್ಳಬೇಕು. ನಮ್ಮ ಗೆಲುವೇ ನಮ್ಮನ್ನು ಅವಮಾನಿಸಿದವರಿಗೆ ನೀಡುವ ಅತಿ ದೊಡ್ಡ ಶಿಕ್ಷೆ. ಅವಮಾನ ಯಾವಾಗಲೂ ನಿಂದೆಗಳಿಂದಲೇ ಕೂಡಿರುತ್ತದೆ ಅಂತೇನಿಲ್ಲ. ಕೆಲವೊಮ್ಮೆ ಆ ಅವಮಾನದ ಹಿಂದಿನ ಮಾತುಗಳಲ್ಲಿ ಸತ್ಯವೂ ಅಡಗಿರಬಹುದು. ಹಾಗಿದ್ದ ಸಮಯದಲ್ಲಿ ಅವಮಾನವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಯಾರೋ ಎಸೆದ ಕಲ್ಲುಗಳನ್ನು ನೋಡಿ ಕುಗ್ಗಬೇಡಿ. ಆ ಕಲ್ಲುಗಳನ್ನೇ ಬಳಸಿ ಯಶಸ್ಸಿನ ಭದ್ರ ಬುನಾದಿ ನಿರ್ಮಿಸಿಕೊಳ್ಳಿ.’ ಅವಮಾನವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಬದುಕಿನ ಯಶೋಮಾರ್ಗ ಆಧಾರಿತವಾಗಿರುತ್ತದೆ. ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.

ಕುಗ್ಗದಿರಿ
‘ಅವಮಾನ ಎಂಬುದು ಕಹಿ ಕಷಾಯವಿದ್ದಂತೆ. ಅದನ್ನು ಕುಡಿದು ಕುಗ್ಗಬೇಡಿ. ಅದನ್ನೇ ನಿಮ್ಮ ಯಶಸ್ಸಿನ ಇಂಧನವಾಗಿಸಿಕೊಳ್ಳಿ.’ ಅವಮಾನದ ಒಲೆಯಲ್ಲಿ ಬೆಂದು ಸಿದ್ಧರಾದವರು ಚಿನ್ನದಂತೆ ಹೊಳೆಯುತ್ತಾರೆ. ಯಾರೋ ನಿಮ್ಮನ್ನು ಅವಮಾನಿಸಿದರು ಎಂದಮಾತ್ರಕ್ಕೆ ನೀವು ಅಯೋಗ್ಯರು ಎಂದಲ್ಲ ಅಸಮರ್ಥರು ಎಂದಲ್ಲ ಕೆಟ್ಟವರು ಎಂತಲೂ ಅರ್ಥವಲ್ಲ. ಇತರರ ಮಾತುಗಳು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ, ನೀವು ನಿರ್ಧರಿಸಲು ಬಿಡಬಾರದು. ಬಂಗಾರವನ್ನು ಕಸದಲ್ಲಿ ಎಸೆದ ತಕ್ಷಣ ಅದರ ಬೆಲೆ ಕಡಿಮೆ ಆಗುವುದಿಲ್ಲ. ನೀವು ಯಾರು ನಿಮ್ಮ ಸಾಮರ್ಥ್ಯವೇನು ನಿಮ್ಮ ದೌರ್ಬಲ್ಯವೇನು ಎಂಬುದು ನಿಮಗಿಂತ ಚೆನ್ನಾಗಿ ಬೇರೆ ಯಾರಿಗೂ ತಿಳಿಯುವುದಿಲ್ಲ. ನಿಮ್ಮ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲಿರಿ.
ಗಮನ ಹರಿಸಿ
ಅವಮಾನ ನಮ್ಮನ್ನು ಅಧೋಗತಿಗೆ ಇಳಿಸಲು ಬರುವುದಿಲ್ಲ. ಅವುಗಳು ನಮ್ಮನ್ನು ಪ್ರಗತಿಯ ದಾರಿಯತ್ತ ಕರೆದೊಯ್ಯಲು ಬರುತ್ತವೆ. ಅವು ಎಚ್ಚರಿಸಲು ಬರುವ ಅಲಾರಾಂ ಎಂದು ತಿಳಿಯಬೇಕು. ಅವಮಾನಿಸಿದವರ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತ ಕುಳಿತರೆ ಅತ್ಯಮೂಲ್ಯ ಸಮಯ ವ್ಯರ್ಥವಾಗುವುದು. ಆ ಸಮಯ ಮತ್ತೆಂದು ಮರಳಿ ಬಾರದು. ಆದ್ದರಿಂದ ನಿಮ್ಮ ಗುರಿಯ ಕಡೆಗೆ ನಿಮ್ಮ ಗಮನ ಹರಿಸಿ. ಕೆಲವೊಮ್ಮೆ ಅವಮಾನದ ಹಿಂದೆ ಸತ್ಯ ಇರಬಹುದು. ಆಗ ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಅದು ಉತ್ತಮ ಅವಕಾಶವೆಂದು ಭಾವಿಸಬೇಕು. ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳಬೇಕು. ಮುಂದೆ ಸಾಗಬೇಕು. ಹಗಲಿರುಳೆನ್ನದೇ ಗುರಿಯತ್ತ ಗಮನ ಹರಿಸಿ. ಯಶಸ್ಸು ಗಳಿಸಿ. ನಿಮ್ಮ ಯಶಸ್ಸೆ ನಿಮ್ಮನ್ನು ಅವಮಾನಿಸಿದವರಿಗೆ ಸಿಗುವ ಅತಿ ದೊಡ್ಡ ಪ್ರತಿಕಾರ.
ಕೊನೆ ಹನಿ
ನಮಗೆ ಆಗುವ ಪ್ರತಿಯೊಂದು ಅವಮಾನವೂ ಭವಿಷ್ಯದ ದೊಡ್ಡ ಗೌರವಕ್ಕೆ ದಾರಿಯಾಗುತ್ತದೆ. ಎಲ್ಲ ಸಾಧಕರು ಅವಮಾನವನ್ನು ಎದುರಿಸಿದವರೆ. ನಿಮ್ಮನ್ನು ನೋಡಿ ನಗುವವರ ಮುಂದೆ ನೀವು ನಗುತ್ತಾ ಯಶಸ್ವಿಯಾಗಿ ಬಾಳಿ ತೋರಿಸುವುದೇ. ನೀವು ಅವರಿಗೆ ಕೊಡುವ ಅತ್ಯಂತ ದೊಡ್ಡ ಶಿಕ್ಷೆ. ‘ಜಗತ್ತು ನಿನ್ನನ್ನು ಸೋಲಿಸಲು ಬಯಸಿದರೆ ನೀನು ಗೆದ್ದು ತೋರಿಸು. ಜಗತ್ತು ನಿನ್ನನ್ನು ಕೀಳಾಗಿ ನೋಡಿದರೆ, ನೀನು ಎತ್ತರಕ್ಕೆ ಬೆಳೆದು ತೋರಿಸು.’ ಅವಮಾನಕ್ಕೆ ತಲೆ ತಗ್ಗಿಸಿ ಕುಳಿತರೆ ಬದುಕು ಹಳಿ ತಪ್ಪಿ ಹೋಗುತ್ತದೆ. ಅವಮಾನಕ್ಕೆ ಕುಗ್ಗಿ ಹೋಗದೆ ಅದನ್ನು ಮೆಟ್ಟಿ ನಿಲ್ಲಬೇಕು. ‘ಅವಮಾನವೇ ಸನ್ಮಾನಕ್ಕೆ ಮೊದಲ ಮೆಟ್ಟಿಲು’ ಜೀವನದಲ್ಲಿ ಮುಳ್ಳಿನಂತೆ ಚುಚ್ಚುವ ಅವಮಾನಗಳನ್ನು ಸಹಿಸಿಕೊಂಡು, ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಆಗ ಅವಮಾನಿಸಿದವರೆ ಮಣೆ ಹಾಕಿ ಸನ್ಮಾನ ಮಾಡುವ ಸಂಭ್ರಮದ ಗಳಿಗೆ ಸ್ವಾಗತಿಸುತ್ತದೆ.


