ವ್ಯಕ್ತಿ – ವ್ಯಕ್ತಿತ್ವ
(ಸಾಧಕರ ಬದುಕಿನ ಪುಟಗಳು)
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಜಾನ್ ವಾರ್ಸ್ ಅವರು, “ಅoಟಟeಛಿಣ booಞs, eveಟಿ iಜಿ ಥಿou ಜoಟಿ’ಣ ಠಿಟಚಿಟಿ oಟಿ ಡಿeಚಿಜiಟಿg ಣhem ಡಿighಣ ಚಿತಿಚಿಥಿ. ಓoಣhiಟಿg is moಡಿe imಠಿoಡಿಣಚಿಟಿಣ ಣhಚಿಟಿ ಚಿಟಿ uಟಿಡಿeಚಿಜ ಟibಡಿಚಿಡಿಥಿ” ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ, ಹವ್ಯಾಸ ಮತ್ತು ಸಂಸ್ಕೃತಿ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಅದರಲ್ಲಿ ಪುಸ್ತಕ ಓದುವಿಕೆಯಂತೂ ತೀರ ವಿರಳ. ಪುಸ್ತಕ ಓದುವುದು ಎಂದರೆ ಕೇವಲ ಕಾಲಹರಣ ಮಾಡುವುದಲ್ಲ. ಅದು ನಮ್ಮ ಜ್ಞಾನ ವೃದ್ಧಿ, ವ್ಯಕ್ತಿತ್ವ ವಿಕಸನ ಮತ್ತು ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಹಂಬಲವನ್ನು ಅಭಿವ್ಯಕ್ತಿಗೊಳಿಸುವ ಸಾಧನವಾಗಿದೆ. ಓದುವ ಹವ್ಯಾಸವು ನಮ್ಮಲ್ಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನದಲ್ಲಿ ಸೃಜನಾತ್ಮಕತೆಯು ಅರಳುವಂತೆ ಮಾಡುತ್ತದೆ. ಆದ್ದರಿಂದ ಕೇವಲ ‘ಮೋಬೈಲ್ ಫೋಬಿಯಾ’ ಮತ್ತು ಸಮೂಹ ಮಾಧ್ಯಮಗಳ ಬೆನ್ನು ಹತ್ತಿರುವ ಯುವ ಜನಾಂಗ ಓದುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ. ಮೋಬೈಲ್ ಬಳಕೆಯಿಂದ ದೂರವಿರಿಸಿ, ಭೌತಿಕ ಪುಸ್ತಕಗಳನ್ನು ಹಿಡಿಯುವ ಹವ್ಯಾಸ ರೂಢಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.

ಪುಸ್ತಕ ಸಂಗ್ರಹ, ಓದಿನ ಮಹತ್ವ ಮತ್ತು ಪುಸ್ತಕದ ಮೇಲಿನ ಪ್ರೇಮದಿಂದ ವೇತನದ ಬಹುಪಾಲು ಹಣವನ್ನು ಪುಸ್ತಕಗಳ ಖರೀದಿಗೆ ವ್ಯಯಿಸಿದ ಅಪರೂಪದ ವ್ಯಕ್ತಿತ್ವದ ಅವರು. ತಮ್ಮ ಶಾಲಾ ಜೀವನದಲ್ಲಿ ಶಾಲೆಗಳಲ್ಲಿರುವ ಪುಸ್ತಕಗಳನ್ನು ಮನೆಗೆ ಒಯ್ಯಲು ಅವಕಾಶ ಕೊಡಲಿಲ್ಲ ಎಂದು ಬೇಸರಪಟ್ಟುಕೊಂಡು, ಈ ಕಾರಣಕ್ಕೆ ಪುಸ್ತಕಗಳ ಸಂಗ್ರಹಣೆ ಮಾಡಿ, ನಾಲ್ಕು ಜನರಿಗಾದರೂ ಪುಸ್ತಕಗಳನ್ನು ಓದುವ ಅವಕಾಶ ದೊರಕಿಸಿ ಕೊಡಬೇಕೆಂಬ ಕಳಕಳಿ, ಪುಸ್ತಕಗಳ ಮೇಲಿನ ಪ್ರೀತಿ ಮತ್ತು ಸಂಗ್ರಹಣೆಯ ಪ್ರವೃತ್ತಿ ಮನದಲ್ಲಿ ಮೂಡಿತು. ತಮ್ಮ ಸ್ವಂತ ಮನೆಯನ್ನೇ ಪುಸ್ತಕಗಳ ಖರೀದಗಾಗಿ ಮಾರಾಟ ಮಾಡಿದ ಹಾಗೂ ಗ್ರಾಮೀಣ ಭಾಗದ ಜನರ ಜ್ಞಾನದ ಹಸಿವನ್ನು ನೀಗಿಸಲು ಸುಮಾರು ೨೦ ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳ ಭಂಢಾರವನ್ನಾಗಿಸಿ, ತಮ್ಮ ಮನೆಯನ್ನು ‘ಪುಸ್ತಕ ಮನೆ’ ಯಾಗಿ ಪರಿವರ್ತಿಸಿದ ಕನ್ನಡ ಪುಸ್ತಕ ಪ್ರೇಮಿ ಅವರು. ಏನಪ್ಪ ಇವರು ಯಾರ ಬಗ್ಗೆ ಇಷ್ಟೊಂದು ಗುಣವಿಶೇಷಣದೊಂದಿಗೆ ಯಾರನ್ನು ವರ್ಣನೆ ಮಾಡುತ್ತಿದ್ದಾರೆ ಅಂದುಕೊಂಡೀರಾ? ಖಂಡಿತ ಹೌದು. ಈ ಲೇಖನದಲ್ಲಿ ನಾನು ಹೇಳೋಕೆ ಹೊರಟಿರುವುದು ಮತ್ತಾರೂ ಅಲ್ಲ. ಅವರೇ ನಮ್ಮ ಮಂಡ್ಯ ಜಿಲ್ಲೆಯ ‘ಪುಸ್ತಕ ಮನೆಯ’ ಯ ಅಕ್ಷರ ಲೋಕದ ತಪಸ್ವಿ ಮತ್ತು ಅಕ್ಷರ ಯೋಗಿ ಎಂದೇ ಹೆಸರುವಾಸಿಯಾದ ಎಂ ಅಂಕೇಗೌಡ್ರ ಅವರ ಬಗ್ಗೆ.

ಪುಸ್ತಕಗಳು ವ್ಯಕ್ತಿಯ ಜೀವನದ ಸರ್ವಸ್ವ ಎಂಬುದನ್ನು ೨೦ ಲಕ್ಷ ಪುಸ್ತಕ ಸಂಗ್ರಹಿಸಿ ಮೈಲಿಗಲ್ಲು ಸಾಧನೆ
ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ್ರರು ಕನ್ನಡ ಭಾಷೆ, ಸಾಹಿತ್ಯ ಮತ್ತು ಪುಸ್ತಕಗಳ ಮೇಲಿನ ಪ್ರೇಮದಿಂದ ಪ್ರಖ್ಯಾತಿಯಾಗಿದ್ದವರು. ‘ಪುಸ್ತಕಗಳು ಜೀವನದ ಸರ್ವಸ್ವ’ ಎಂದೇ ಪರಿಗಣಿಸಿದ್ದ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿರುವ ತಮ್ಮ ಮನೆಯನ್ನೇ ‘ಪುಸ್ತಕ ಮನೆ’ ಯನ್ನಾಗಿಸಿ ಸಾರ್ವಜನಿಕರಿಗಾಗಿ ತೆರೆದಿಟ್ಟ ಅಪರೂಪದ ಪುಸ್ತಕ ಪ್ರೇಮಿ. ೨೦ ಭಾಷೆಗಳ ಸುಮಾರು ೨೦ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಸಂಗ್ರಹಿಸಿರುವುದು ಇವರ ಸಾಧನೆಗೆ ಹಿಡಿದ ಮೈಲಿಗಲ್ಲು ಎಂದು ಹೇಳಬಹುದು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಅನ್ನೋದಕ್ಕೆ ಇವರ ಪತ್ನಿಯು ಕೂಡ ಇಂತಹ ಸಾಧನೆಗೆ ಸಾಥ ನೀಡಿರುವುದು ಇನ್ನೊಂದು ವೈಶಿಷ್ಟ್ಯತೆ. ಇವರು ಕೇವಲ ಪುಸ್ತಕಗಳ ಸಂಗ್ರಹಣೆ ಮಾತ್ರವಲ್ಲದೇ ನಾಣ್ಯ, ಅಂಚೆ ಚೀಟಿ ಮತ್ತು ಅಪರೂಪದ ಲಗ್ನಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದು, ತಮ್ಮ ದುಡಿಮೆಯ ಅರ್ಧದಷ್ಟು ಹಣವನ್ನು ಪುಸ್ತಕಗಳ ಸಂಗ್ರಹಣೆ, ನಿರ್ವಹಣೆ ಮತ್ತು ಸಾರ್ವಜನಿಕರಲ್ಲಿ ಓದಿನ ಹವ್ಯಾಸ ಬೆಳೆಸುವುದಕ್ಕಾಗಿಯೇ ಖರ್ಚು ಮಾಡಿದ ಸಾಧಕರೆಂದರೆ ಅತಿಶಯೋಕ್ತಿಯಾಗಲಾರದು. ಇವರ ಪುಸ್ತಕ ಸಂಗ್ರಹಣೆಯ ಕನಸನ್ನು ನನಸು ಮಾಡಲು ಉದ್ಯಮಿ ಹರಿಕೋಡೆ ಅವರು ಮನೆಯೊಂದನ್ನು ನಿರ್ಮಿಸಿಕೊಟ್ಟು ಅದು ಬೃಹತ್ ಗ್ರಂಥಾಲಯವಾಗುವಂತೆ ಸಹಕಾರ ನೀಡಿದ್ದಾರೆ.
*ಬೃಹತ್ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅಂಕೇ ಗೌಡ್ರ ಜೀವನ ನಮಗೆಲ್ಲ ಆದರ್ಶವಾಗಲಿ: ‘ಪುಸ್ತಕ ಪ್ರಪಂಚ’ ವಾಗಿ ಎಂದು ತೋರ್ಪಡುವ ಪಾಂಡವಪುರದ ಅವರ ‘ಪುಸ್ತಕ ಮನೆ’ ಯು ಪುಸ್ತಕ ಪ್ರೀಯರಿಗೆ, ಓದುಗರಿಗೆ ಮತ್ತು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಬೇಕೆನ್ನುವ ಹಂಬಲ ಹೊಂದಿರುವರಿಗೆ ಕೈ ಬೀಸಿ ಕರೆಯುತ್ತದೆ. ಹಳ್ಳಿಯಲ್ಲಿ ಸಾರ್ವಜನಿಕರಿಗಾಗಿಯೇ ಉಚಿತವಾಗಿ ಓದಲು ಬೃಹತ್ ಗ್ರಂಥಾಲಯ ಸ್ಥಾಪಿಸಿದ ನಿಸ್ವಾರ್ಥತೆಯ ವ್ಯಕ್ತಿ ಅಂಕೇ ಗೌಡ್ರರು. ತಮ್ಮ ೫೦ ಕ್ಕೂ ವರ್ಷಗಳ ಸಂಪಾದನೆಯ ಬಹುಭಾಗವನ್ನು ಮತ್ತು ಸ್ವಂತ ಮನೆಯನ್ನು ಮಾರಿ, ಕನ್ನಡ, ಹಿಂದಿ, ತಮಿಳು, ರಷ್ಯನ್ ಸೇರಿದಂತೆ ವಿವಿಧ ಭಾಷೆಗಳ ೨೦ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಅವರ ಈ ಪುಸ್ತಕಗಳ ಸಂಗ್ರಹಣೆಯಲ್ಲಿ ಮೈಸೂರು ಮಹಾರಾಜರ ಕಲದ ಹಸ್ತಪ್ರತಿಗಳು, ವೇದ, ಉಪನಿಷತ್ ಮತ್ತು ಮಹಾತ್ಮಾ ಗಾಂಧೀಜಿಯ ಕೃತಿಗಳು ಸೇರಿದಂತೆ ನೂರಾರು ವರ್ಷಗಳ ಹಳೆಯ ಪತ್ರಿಕೆಗಳು ಮತ್ತು ಪುಸ್ತಕಗಳು ಇಲ್ಲಿವೆ. ನಾಡಿನ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರಿಗೂ ಈ ಜ್ಞಾನ ಭಂಡಾರದಲ್ಲಿ ಉಚಿತವಾಗಿ ಪುಸ್ತಕಗಳು ಓದಲು ಯಾವುದೇ ಶುಲ್ಕವಿಲ್ಲದೇ ದೊರೆಯುವಂತೆ ಅವಕಾಶ ಕಲ್ಪಿಸಿಕೊಡಲಾಗಿದೆ.
*ಕೊನೆಯ ನುಡಿ*
ಶ್ರೇಷ್ಠ ಪುಸ್ತಕ ಪ್ರೇಮಿ, ಸಾಹಿತ್ಯಾಸಕ್ತ ಮತ್ತು ಪುಸ್ತಕ ಪ್ರೇಮಿಗಳಾದ ಅಂಕೇ ಗೌಡ್ರರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ, ಲಿಮ್ಕಾ ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ೨೦೨೬ ರ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಇವರ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ. ಅಂಕೇ ಗೌಡ್ರು ಇವರ ಪುಸ್ತಕ ಪ್ರೇಮ ನಮ್ಮ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ಮಾದರಿಯಾಗಲಿ. ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕಗಳು ಇ-ಸಂಪನ್ಮೂಲದಲ್ಲಿ ದೊರೆಯುತ್ತಿದ್ದರೂ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನಾರ್ಜನೆಗೆ ಅತ್ಯಂತ ಪರಿಣಾಮಕಾರಿಯಾಗಬೇಕು.


