ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವಕನ ಅಪಹರಣ ಪ್ರಕರಣವನ್ನು ಪೊಲೀಸರು ಕೇವಲ ಎರಡು ದಿನಗಳಲ್ಲಿ ಭೇದಿಸಿ, ಅಪಹರಣಕ್ಕೊಳಗಾದ ಯುವಕನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದರು.
ಘಟನೆ ವಿವರ: ಜೂನ್ 19ರಂದು ಕಸ್ತೂರಿ ಕಾಲೋನಿಯ ನಿವಾಸಿ ಮಮ್ತಾಜ್ ಇಮಾಮಜಾಪರ್ ಚಪ್ಪರಬಂಧ ಅವರು ತಮ್ಮ ಪುತ್ರ ಸಾಹಿಲ್ ಇಮಾಮಜಾಪರ್ ಚಪ್ಪರಬಂಧ (22) ಅಪಹರಣಕ್ಕೊಳಗಾಗಿರುವ ಕುರಿತು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ತನಿಖೆಯಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ, ಸಾಹಿಲ್ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಎರಡು ತಿಂಗಳ ಹಿಂದೆ ತನ್ನ ಕುಟುಂಬದ 2 ಎಕರೆ ಜಮೀನನ್ನು ₹26 ಲಕ್ಷಕ್ಕೆ ಮಾರಾಟ ಮಾಡಿರುವ ವಿಷಯವನ್ನು ಸಹೋದ್ಯೋಗಿ ಮಹಮ್ಮದ್ ರಫೀಕ್ಗೆ ತಿಳಿಸಿದ್ದನು. ಈ ಮಾಹಿತಿಯನ್ನು ಬಳಸಿಕೊಂಡ ಆರೋಪಿಗಳು ಹಣಕ್ಕಾಗಿ ಸಾಹಿಲ್ನನ್ನು ಅಪಹರಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ಯುವತಿಯೊಬ್ಬಳನ್ನು ಬಳಸಿಕೊಂಡು ಸಾಹಿಲ್ಗೆ ಪರಿಚಯ ಮಾಡಿಸಿ ಸ್ನೇಹ ಬೆಳೆಸಲಾಗಿತ್ತು.
ಜೂನ್ 18ರಂದು ಯುವತಿ ವಿಜಯಲಕ್ಷ್ಮಿ ಸಾಹಿಲ್ಗೆ ಕರೆ ಮಾಡಿ ವಿಜಯಪುರದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಖಾಲಿ ಜಾಗಕ್ಕೆ ಬರಲು ತಿಳಿಸಿದ್ದಳು. ಅಲ್ಲಿಗೆ ಹೋದ ಸಾಹಿಲ್ನನ್ನು ಆರೋಪಿಗಳು ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿ ಕರೆದೊಯ್ದಿದ್ದರು.
ನಂತರ ಸಾಹಿಲ್ನ ಮೊಬೈಲ್ನಿಂದಲೇ ಆತನ ತಾಯಿಗೆ ಕರೆ ಮಾಡಿಸಿ, “ನಿಮ್ಮ ಮಗ ನಮ್ಮ ಬಳಿ ಇದ್ದಾನೆ. ಅವನನ್ನು ಬಿಡಲು ₹12 ಲಕ್ಷ ಹಣ ನೀಡಬೇಕು” ಎಂದು ಬೇಡಿಕೆ ಇಟ್ಟಿದ್ದರು.
ಮೊಬೈಲ್ ಕರೆಗಳ ಮಾಹಿತಿ ಹಾಗೂ ತಾಂತ್ರಿಕ ತನಿಖೆಯ ಆಧಾರದ ಮೇಲೆ ಆರೋಪಿಗಳ ಚಲನವಲನವನ್ನು ಪತ್ತೆ ಹಚ್ಚಿದ ಪೊಲೀಸರು, ಅವರು ವಿಜಯಪುರದಿಂದ ಗದಗ, ಅಲ್ಲಿಂದ ಗೋವಾ ಹಾಗೂ ಬಳಿಕ ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾಗದಲ್ಲಿ ಇರುವುದನ್ನು ಗುರುತಿಸಿದರು.
ಜೂನ್ 21ರಂದು ಘಟಪ್ರಭಾ ಸಮೀಪ ದಾಳಿ ನಡೆಸಿ ಅಪಹರಣಕ್ಕೊಳಗಾದ ಸಾಹಿಲ್ನನ್ನು ಸುರಕ್ಷಿತವಾಗಿ ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದರು.
ಪ್ರಕರಣವನ್ನು ದಾಖಲಾಗಿದ ಕೇವಲ ಎರಡು ದಿನಗಳಲ್ಲಿ ಭೇದಿಸಿದ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.
ಬಂಧಿತ ಆರೋಪಿಗಳು
- ಗೋಪಾಲ ಯಮನಪ್ಪ ಮಾದರ (28)
- ನಿಂಗಪ್ಪ ಭೂತಾಳಿ ನಾವದಗಿ (27)
- ಮಹಮ್ಮದ್ ರಫೀಕ್ ನಧಾಪ (27)
- ವಿಜಯಲಕ್ಷ್ಮಿ ತೊನಶ್ಯಾಳ (24)
- ದಶರಥ ಸೋಮಪ್ಪ ಮಾದರ (21)
- ಶಿವಾನಂದ ಮೃತ್ಯುಂಜಯ ನಂದಿಕೋಲಮಠ (25)
- ಸುನೀಲ್ ಗಿರಿಮಲ್ಲಪ್ಪ ನಾವಿ (20)
- ಶಿವಕುಮಾರ ಶರಣಪ್ಪ ಹೊಸಟ್ಟಿ (23)
ವಶಪಡಿಸಿಕೊಂಡ ವಸ್ತುಗಳು
- ಅಪಹರಣಕ್ಕೆ ಬಳಸಿದ MH-06-AW-7474 ಸಂಖ್ಯೆಯ ಸ್ಕಾರ್ಪಿಯೋ ವಾಹನ
- 7 ಮೊಬೈಲ್ ಫೋನ್ಗಳು

