ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಕೆಲವರು ದುಡ್ಡು ಮಾಡುತ್ತಿದ್ದಾರೆ. ಇಲಾಖೆಗಳಲ್ಲಿ ಮಧ್ಯ ಪ್ರವೇಶಿಸಿ ಹಣಗಳಿಸುವ ದಂಧೆ ಮಾಡಿಕೊಂಡಿದ್ದಾರೆ. ಜೊತೆಗೆ ಸಿವಿಲ್ ಪ್ರಕರಣಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ನಿಗಾವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ದಲಿತ ಸಮುದಾಯದ ಕೆಲವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿಗೆ ಮನವಿ ಮಾಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಹೆಚ್.ಡಿ.ಕೋಟೆ, ಸರಗೂರು ಹಾಗೂ ಅಂತರಸಂತೆ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಹಲವು, ಸಲಹೆ, ಸೂಚನೆ, ದೂರುಗಳು ಕೇಳಿಬಂದವು.
ಶಾಲಾ, ಕಾಲೇಜು ಸಮಯಗಳಲ್ಲಿ ಪುಂಡರು ಅತೀ ವೇಗ, ಎಕ್ಸಲೇಟರ್ ಶಬ್ದ ಹೆಚ್ಚಿಸಿಕೊಂಡು ಬೈಕ್ ಚಲಾಯಿಸುತ್ತಾರೆ. ಗದ್ದಿಗೆ ಸರ್ಕಲ್ ಪುಂಡ, ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಶಾಲಾ, ಕಾಲೇಜಿಗೆ ಮಕ್ಕಳು ಹೋಗುವ, ಬರುವ ಸಮಯ ಬ್ಯಾರಿಕೇಡ್ ಅಳವಡಿಸಿ ಸಂಚಾರ ದಟ್ಟಣೆ, ಅತೀ ವೇಗದ ಚಾಲನೆ ನಿಯಂತ್ರಿಸಬೇಕು. ಹೌಸಿಂಗ್ ಬೋರ್ಡ್, ಸ್ಟೇಡಿಯಂ, ಕನಕ ಭವನದ ಹಿಂದಿನ ನೂತನ ಬಡಾವಣೆಗಳು ಅಪರಾಧ ಕೃತ್ಯಗಳ ತಾಣಗಳಾಗಿ ಮಾರ್ಪಡಾಗುತ್ತಿವೆ. ಆದಿಚುಂಚನಗಿರಿ ಶಾಲೆ ಬಳಿ ಇರುವ ಹಂಪ್ ನಿಂದ ದ್ವಿ-ಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಇಲ್ಲಿ ಜೀಬ್ರಾ ಕ್ರಾಸಿಂಗ್ ಅಳವಡಿಕೆ, 0.5ಮೀ ಅಂತರದಲ್ಲಿ ಹಂಪ್ ಇರುವ ಬಗ್ಗೆ ಸೂಚನಾ ಫಲಕ ಅಳವಡಿಸಬೇಕು ಎಂದು ಜೀವಿಕ ಸಂಘಟನೆ ಜಿಲ್ಲಾ ಸಂಚಾಲಕ ಉಮೇಶ್ ಸಲಹೆ ನೀಡಿದರು.
ಕೆಲ ಸಾರ್ವಜನಿಕರ ಅಸಮಾಧಾನ ತಾಲೂಕಿನಿಂದ ಸರಗೂರನ್ನು ಬೇರ್ಪಡಿಸಿ ನೂತನ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಯಾವುದೇ ಸಭೆ, ಸಮಾರಂಭ ನಡೆದರೂ ಕೋಟೆಯಲ್ಲಿಯೇ ಮಾಡುತ್ತೀರಿ. ಅಧಿಕಾರಿಗಳು ಸರಗೂರನ್ನು ಕಡೆಗಣಿಸಿದ್ದೀರಿ ಆದ್ದರಿಂದ ನಾವು ಸಭೆ ಬಹಿಷ್ಕರಿಸಿ ಹೊರ ನಡೆಯುತ್ತೇವೆ ಎಂದು ಕೆಲವರು ಸಭೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ಸರಗೂರಿನಲ್ಲೂ ಸಭೆ ಮಾಡಲಾಗುವುದು ಎಂದು ನಾಗೇಶ್ ತಿಳಿಸಿದ ನಂತರ, ಸಭೆ ಆರಂಭವಾಯಿತು.
ಸರಗೂರಿನ ಕೃಷ್ಣ, ಮಹಿಳಾ ಆಪ್ತ ಸಮಾಲೋಚಕಿ ಜಶೀಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತ ಬಸವರಾಜು ಮಾತನಾಡಿದರು.
ಅಪರ ಪೊಲೀಸ್ ವರಿಷ್ಟಧಿಕಾರಿ ನಾಗೇಶ್, ಡಿವೈಎಸ್ಪಿ ರವಿ, ಆರಕ್ಷಕ ವೃತ್ತ ನಿರೀಕ್ಷಕರಾದ ಗಂಗಾಧರ್, ಪ್ರಸನ್ನ ಕುಮಾರ್, ಸಬ್ ಇನ್ಸ್ ಪೆಕ್ಟರ್ ಗಳಾದ ಕಿರಣ್, ಚಂದ್ರಹಾಸ, ಸುರೇಶ್ ನಾಯಕ, ಗೋಪಾಲ್, ತಹಶೀಲ್ದಾರ್ ಗಳಾದ ಮೋಹನ ಕುಮಾರಿ, ಶ್ರೀನಿವಾಸ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರೇಮ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

