ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಉಳ್ಳಾಗಡ್ಡಿ ದರ ಕುಸಿತಕ್ಕೆ ಬೇಸತ್ತ ರೈತರು ಮಾರುಕಟ್ಟೆ ಮುಂಭಾಗದಲ್ಲಿ ಹಾಯ್ದುಹೋಗುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಮೇಲೆ ರೈತರು ಉಳ್ಳಾಗಡ್ಡಿ ಸುರಿದು ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ.
ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ತಹಸೀಲ್ದಾರರು ಬರುತ್ತಾರೆ. ತಮಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮನವೊಲಿಸಿ ರಸ್ತೆ ತಡೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ನಂತರ ರೈತರು ಎಪಿಎಂಸಿ ಆವರಣದಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಿದರು. ಆಗ ಸ್ಥಳಕ್ಕೆ ಗ್ರೇಡ್ -2 ತಹಸೀಲ್ದಾರ ಎಸ್.ಎಚ್. ಅರಕೇರಿ ಭೇಟಿ ನೀಡಿದರು. ಇವರ ಮುಂದೆ ರೈತರು ಬೆಂಗಳೂರಿನಲ್ಲಿ ₹2500-₹3000 ರೂಪಾಯಿ ಸಿಗುವ ಉಳ್ಳಾಗಡ್ಡಿ ಮಾಲಿಗೆ ಬಸವನಬಾಗೇವಾಡಿ ಮಾರುಕಟ್ಟೆಯಲ್ಲಿ ಕೇವಲ 500ಕ್ಕೆ ಕೇಳುತ್ತಿದ್ದಾರೆ. ರೈತರಿಗೆ ಈರುಳ್ಳಿ ಪಾಕೀಟ್ ಮಾಡುವ 500 ಕೂಲಿಯೂ ಸಿಗುತ್ತಿಲ್ಲ. ವಿಜಯಪುರದಲ್ಲಿ ಹೆಚ್ಚಿನ ದರಕ್ಕೆ ಉಳ್ಳಾಗಡ್ಡಿ ಮಾರಾಟವಾಗಿದೆ. ಇಂದು ಇಲ್ಲಿನ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದೆ. ನಮಗೆ ಉತ್ತಮ ದರ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಬಂದು ರೈತರ ಬೇಡಿಕೆಯನ್ನು ಆಲಿಸಿದ ಅವರು, ಎಪಿಎಂಸಿ ರೈತರ ಬೆಳೆದ ಬೆಳೆಗೆ ಮಾರುಕಟ್ಟೆ ಸ್ಥಳ ಮಾತ್ರ ಒದಗಿಸುತ್ತದೆ. ಎಪಿಎಂಸಿ ದರ ನಿಗದಿ ಪಡಿಸುವುದಿಲ್ಲ. ದರವು ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿಸಿದೆ. ರೈತ ಬಾಂಧವರಿಗೆ ಯಾವುದೇ ವ್ಯಾಪಾರಸ್ಥರು ತೊಂದರೆ ಮಾಡಿದರೆ ಅಂತಹವರ ಮೇಲೆ ಕ್ರಮತೆಗೆದುಕೊಳ್ಳಬಹುದು. ನಿನ್ನೆ ಯಶವಂತಪುರ ಮಾರುಕಟ್ಟೆಯಲ್ಲಿ ವಿವಿಧ ಉಳ್ಳಾಗಡ್ಡಿ ರೂ.500 ರಿಂದ 3,500ರವೆಗೂ ಮಾರಾಟವಾಗಿದೆ. ಇಂದು ಅಲ್ಲಿ ರೂ.200 ರಿಂದ 2,800 ವರೆಗೆ ಮಾರಾಟವಾಗಿದೆ. ಇಂದು ಹೆಚ್ಚು ಪೂರೈಕೆಯಾದ ಪರಿಣಾಮ ಅಲ್ಲಿ ಧಾರಣೆ ಕಡಿಮೆಯಾಗಿದೆ. ಕೂಡಗಿ ಮಾರುಕಟ್ಟೆಯಲ್ಲಿಯೂ ನಿನ್ನೆ ರೂ.3 ಸಾವಿರದವರೆಗೂ ಮಾರಾಟವಾಗಿದೆ. ಇಂದು ಎಲ್ಲೆಡೆ ಹೆಚ್ಚು ಪೂರೈಕೆಯಾದ ಪರಿಣಾಮ ಬೆಲೆ ಕಡಿಮೆಯಾಗಿದೆ. ಇಲ್ಲಿಯ ಖರೀದಿದಾರರು ಸಹ ದರ ಇಳಿಸಿದ್ದಾರೆ ಅಷ್ಟೇ. ಉತ್ತಮ ಉಳ್ಳಾಗಡ್ಡಿಗೆ ಉತ್ತಮ ಬೆಲೆ ನೀಡುವಂತೆ ಖರೀದಿದಾರರಿಗೆ ನಾವು ಹೇಳುತ್ತೇನೆ. ರೈತ ಬಾಂಧವರು ಬೆಲೆ ಯಾರ ಕೈಯಲ್ಲಿಯೂ ಇಲ್ಲ ಎಂಬುವದನ್ನು ಅರಿತುಕೊಳ್ಳಬೇಕು. ಈ ಭಾಗದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಉಳ್ಳಾಗಡ್ಡಿ ಮಾರುಕಟ್ಟೆ ಆರಂಭಿಸಲಾಗಿದೆ. ರೈತರು ಖರೀದಿದಾರರೊಂದಿಗೆ ಸಹಕಾರ ನೀಡದೇ ಹೋದರೆ ಅವರು ಮುಂದೆ ಇಲ್ಲಿ ಬಾರದೇ ಹೋಗಬಹುದು. ಈ ರೀತಿಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಜು ರಾಠೋಡ, ಅಧೀಕ್ಷಕ ಆರ್.ಬಿ.ಬಿರಾದಾರ, ಮಾರುಕಟ್ಟೆ ಹಿರಿಯ ಮೇಲ್ವಿಚಾರಕ ಸುರೇಶ ಮೋಹಿತೆ, ಮಾರುಕಟ್ಟೆ ಮೇಲ್ವಿಚಾರಕ ನವೀನ ಪಾಟೀಲ, ಮುಖಂಡರಾದ ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ ಇತರರು ಇದ್ದರು. ಪ್ರತಿಭಟನೆಯಲ್ಲಿ ದೇವೇಂದ್ರ ಅಂಬಳನೂರ, ಪ್ರಕಾಶ ರಾಠೋಡ, ತುಕ್ಕಪ್ಪ ಗೋಡಕಾರ, ಪ್ರವೀಣ ಪವಾರ, ಪರಶು ಗುಡನಾಳ, ಲಕ್ಷ್ಮಣ ಲಕ್ಕುಂಡಿ, ಬಾಳಪ್ಪ ಬೇವೂರ, ಸಿದ್ದು ಜಾಧವ, ದುಂಡಪ್ಪ ಅಂಬಳನೂರ ಸೇರಿದಂತೆ ಇತರರು ಭಾಗವಹಿಸಿದ್ದರು.
ನಂತರ ನಡೆದ ಬಹಿರಂಗ ಸವಾಲಿನಲ್ಲಿ ರೂ.2,500 ರವರೆಗೂ ಉಳ್ಳಾಗಡ್ಡಿ ಮಾರಾಟವಾಯಿತು. ಇಂದು ಸುಮಾರು 28 ಲೋಡ್ ವಾಹನಗಳು ಬಂದಿದ್ದವು.

