ಉದಯರಶ್ಮಿ ದಿನಪತ್ರಿಕೆ
ಇಂಡಿ: ಕ್ಷೇತ್ರದಲ್ಲಿ ಏಕಲವ್ಯ ಶಾಲೆ ಸ್ಥಾಪಿಸುವ ಮೂಲಕ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಸತಿಯುತ ಶಿಕ್ಷಣ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ತಾಲ್ಲೂಕಿನ ನಾದ ಗ್ರಾಮದ ತಾ.ಪಂ ಸದಸ್ಯ ಸಿದ್ದಪ್ಪ ತಳವಾರ ಭಾನುವಾರ ಮಾತನಾಡಿದರು.
ಇಂಡಿ ನಗರದಲ್ಲಿ ತಳವಾರ ಸೇವಾ ಸಮಿತಿ (ಟಿಎಸ್ಎಸ್) ಹಾಗೂ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಜಂಟಿಯಾಗಿ ನಡೆಸಿರುವ ಜಾಗೃತಿ ಸಭೆಯಲ್ಲಿ ಹೇಳಿದರು.
ತೆನಹಳ್ಳಿ ತಾ.ಪಂ ಸದಸ್ಯ ಸಿದ್ದಪ್ಪ ನಾಟೀಕಾರ ಮಾತನಾಡಿ, ಯಾವುದೇ ಒಂದು ಸಮಾಜ ಮುಖ್ಯ ಭೂಮಿಕೆಯಲ್ಲಿ ಬರಬೇಕಾದರೆ ಶಿಕ್ಷಣ ಅವಶ್ಯಕ. ಆದರೆ ಇಂಡಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಸುಮಾರು ಒಟ್ಟು 35 ಸಾವಿರ ಕ್ಕಿಂತಲೂ ಹೆಚ್ಚಿರುವ ತಳವಾರ, ಹರಿಣಶಿಕಾರಿ,ಬೇಡ,ಬೇಡರ, ವಾಲ್ಮೀಕಿ ಸಮಾಜದ, ಪರಿಶಿಷ್ಟ ಪಂಗಡದ ಜನರ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಾಲೆ ಇಲ್ಲವಾದರೆ ಅವರ ಪರಿಸ್ಥಿತಿ ಏನಾಗಬಾರದು ಹೇಳಿ. ಅದಕ್ಕಾಗಿ ಈ ಎಲ್ಲಾ ಸಮುದಾಯದ ಜನರ ಪರವಾಗಿ ಒಕ್ಕೂರಲಿನಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಏಕಲವ್ಯ ಶಾಲೆಯನ್ನು ಸ್ಥಾಪಿಸಲು ಮನವಿ ಮಾಡುತ್ತೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ,ನಿವೃತ್ತ ಮುಖ್ಯ ಉಪಾಧ್ಯಾಯ ಬಿಎಸ್ ತಳವಾರ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೆ ಸಿಗುವ ಶಿಕ್ಷಣ ನಮ್ಮ ಮಕ್ಕಳಿಗೂ ಸಿಗಬೇಕು. ಹಾಗಾಗಿ ನಮ್ಮ ತಾಲ್ಲೂಕಿನಲ್ಲಿ ಕೇಂದ್ರೀಯ ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆ ಅಗತ್ಯವಿದೆ. ವಿಶೇಷವಾಗಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವಸತಿ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಿ, ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಇದು ಸಹಕಾರಿ. ಈ ಶಾಲೆಗಳು ನಮ್ಮ ಮಕ್ಕಳ ಶಿಕ್ಷಣದ ಹಂತವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಇವುಗಳ ಸ್ಥಾಪನೆ ಆಗಬೇಕು ಎಂದು ಹೇಳಿದರು.
ಟಿಎಸ್ಎಸ್ ಜಿಲ್ಲಾ ಅಧ್ಯಕ್ಷ ಸೋಮು ಜಮಾದಾರ ಮಾತನಾಡಿ, ನಮ್ಮ ತಳವಾರ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಜನ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಆದರೆ ಕೇವಲ ರಾಜಕೀಯ ನಾಯಕರ ಮತಬ್ಯಾಂಕ್ ಗೆ ಮೀಸಲು ಇಟ್ಟಂತೆ ಆಗಿದೆ. ಇಲ್ಲಿಯವರೆಗೆ ನಮ್ಮ ಜನರಿಗೆ ಒಂದೇ ಒಂದು ಯೋಗ್ಯವಾದ ಸ್ಥಳ, ಸಾಂಸ್ಕೃತಿಕ ಭವನ ಜೊತೆಯಲ್ಲಿ ಶಿಕ್ಷಣ ಕಲಿಯಲು ವಿಶೇಷ ಶಾಲೆಯಿಲ್ಲ ಎಂದರೆ ನಮ್ಮ ಬದುಕಿನ ಬಗ್ಗೆ ನಾವೇ ಅವಲೋಕನ ಮಾಡಿಕೊಳ್ಳಬೇಕು. ಹಾಗಾಗಿ ಇಂಡಿ ನಗರದಲ್ಲಿ ಅತೀ ತುರ್ತಾಗಿ ಏಕಲವ್ಯ ವಸತಿ ಶಾಲೆಗೆ ಶಾಸಕರು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಬರುವ ಭವಿಷ್ಯದ ದಿನಗಳು ಕಠಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ ಮಲ್ಲಪ್ಪ ನಾಟೀಕಾರ, ಭೀಮರಾಯ ಬಿಲ್ಕಾರ, ಪರಶುರಾಮ ನಾಟೀಕಾರ, ರವಿ ರಾಯಜಿ, ಶಿವರಾಜ ವಾಲಿಕಾರ, ಸಿದ್ದರಾಮ ನಾಟೀಕಾರ, ಚಂದ್ರಾಮ ತಳವಾರ, ಎಚ್ ಕೆ ಅಳ್ಳಗಿ, ಈರಣ್ಣ ತಳವಾರ, ಸುರೇಶ ಡೊಂಗ್ರೊಜ್, ಅಮೋಘಿ ತಳವಾರ, ಪ್ರಕಾಶ ಬೈರೋಡಗಿ, ರಾವುತರಾಯ ಕಾಮನಕೇರಿ, ಈಶ್ವರಪ್ಪ ಮಣಿಗಿರಿ, ಅನೀಲ ಕೋಳಿ,ಸುಧಾಕರ ಆಳೂರ, ಶ್ರೀಧರ ನಾಟೀಕಾರ, ಶ್ರೀಕಾಂತ ಅಳ್ಳಗಿ, ಸಿದ್ದು ತಳವಾರ, ಮಲ್ಲಿಕಾರ್ಜುನ ಕುಮಸಿಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.

