“ಉದಯರಶ್ಮಿ” ಪತ್ರಿಕೆಯ ವರದಿ ಪರಿಣಾಮ ಎಚ್ಚೆತ್ತ ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿನ ಪರಿಸರದಲ್ಲಿ ಡೈಬ್ಯಾಕ್ ರೋಗಕ್ಕೆ ಒಣಗುತ್ತಿರುವ ನೂರಾರು ಬೇವಿನ ಮರಗಳಿಗೆ ಕಳೆದ ಎರಡು ದಿನಗಳಿಂದ ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.
ಬಾಧಿತ ಗಿಡಗಳಿಗೆ ತಜ್ಞರ ಶಿಫಾರಸ್ಸು ಮೇರೆಗೆ ಔಷಧವನ್ನು ಅರಣ್ಯ ಇಲಾಖೆಯ ಕಾರ್ಮಿಕರು ಸಿಂಪಡಿಸುತ್ತಿದ್ದಾರೆ.
ಒಣಗುತ್ತಿರುವ ನೂರಾರು ಬೇವಿನ ಮರಗಳ ಕುರಿತು ’ಉದಯರಶ್ಮಿ’ ಪತ್ರಿಕೆಯು ಇತ್ತೀಚಿನ ಸಂಚಿಕೆಯಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಇದೀಗ ಕ್ರಮಕ್ಕೆ ಮುಂದಾಗಿರುವುದು ಸ್ತುತ್ಯಾರ್ಹವಾಗಿದೆ.
ಆಲಮಟ್ಟಿಯ ಪರಿಸರದಲ್ಲಿ ಸುಮಾರು ೬೦೦ ಕ್ಕೂ ಅಧಿಕ ಬೇವಿನ ಮರಗಳು “ಟೀ ಮಾಸ್ಕುಟೋ ಬಗ್’ ಕಾಯಿಲೆಗೆ ಒಳಗಾಗಿ ನಂತರ ಶಿಲೀಂಧ್ರದ ರೀತಿ ಡೈಬ್ಯಾಕ್ ಎಂಬ ರೋಗಕ್ಕೆ ತುತ್ತಾಗಿದ್ದವು. ಇದರಿಂದ ಆ ಮರಗಳ ಎಲೆಗಳು ಸಂಪೂರ್ಣ ಒಣಗಿದ್ದವು. ಇಡೀ ಗಿಡ ಕಳಾಹೀನಗೊಂಡಿತ್ತು.
ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಅಧಿಕಾರಿಗಳು ಸಸ್ಯ ತಜ್ಞರನ್ನು ಸಂಪರ್ಕಿಸಿ ಈ ರೋಗಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಪಡೆದಿದ್ದರು.
ಅವರ ಮಾರ್ಗದರ್ಶನದಲ್ಲಿ ಅಣೆಕಟ್ಟು ವ್ಯಾಪ್ತಿಯ ಸುಮಾರು ೧೦೦೦ ಬೇವಿನ ಗಿಡಗಳಿಗೂ ಈ ಔಷಧ ಸಿಂಪಡಿಸಲಾಗುತ್ತಿದೆ ಎಂದು ಆರ್.ಎಫ್.ಓ. ಮಹೇಶ ಪಾಟೀಲ ಮಾಹಿತಿ ನೀಡಿದರು. ಬೇವಿನ ಮರಗಳ ಬಗ್ಗೆ ವಿಶೇಷ ನಿಗಾ ವಹಿಸಲಾಗಿದ್ದು ಎಂದು ತಿಳಿಸಿದರು.
ಪ್ರತಿ ಬಾಧಿತ ಗಿಡಗಳಿಗೆ ಎರಡು ಹಂತದಲ್ಲಿ ಶೀಲಿಂಧ್ರ ನಾಶಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ.
ಡಿ,ಎಫ್,ಓ ಎನ್.ಕೆ. ಬಾಗಾಯತ್, ಆರ್.ಎಫ್.ಓ ಮಹೇಶ ಪಾಟೀಲ, ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮತ್ತೀತರರು ಸ್ಥಳಕ್ಕೆ ಭೇಟಿ ನೀಡಿ ಔಷಧ ಸಿಂಪಡಣೆ ಪರಿಶೀಲಿಸಿದರು.

