ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಡಗುಂದಿ ಸಮೀಪ 1203 ಎಕರೆ ರೈತರ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವುದನ್ನು ಸಂಪೂರ್ಣವಾಗಿ ವಿರೋಧಿಸಿ, ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು ಇಲ್ಲವಾದಲ್ಲಿ 350 ಕುಟುಂಬ ಬಿದಿಗೆ ಬೀಳಲಿದೆ. ಕೃಷಿಯನ್ನೆ ನಂಬಿರುವ ಅನೇಕ ಕುಟುಂಬ ಹಾಗೂ ಉನ್ನತ ಶಿಕ್ಷಣ ಪಡೆದ ಯುವಕರು ಮತ್ತೆ ದೂರದ ಪಟ್ಟಣಗಳಿಗೆ ದಿನಗೂಲಿ ಕೆಲಸಕ್ಕಾಗಿ ಅಲೆದಾಡಬೇಕಾಗುತ್ತದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತ, ಈಗಾಗಲೇ ರಾಜ್ಯದ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲರಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಹಾಗೂ ಕೈಗಾರಿಕಾ ಇಲಾಖೆಯ ಸರ್ಕಾರದ ಅಧಿನ ಕಾರ್ಯದರ್ಶಿಗಳಿಗೆ 3 ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಕೂಡಾ ಕೆ.ಐ.ಡಿ.ಬಿ ಅಧಿಕಾರಿಗಳು ಕೆಲವೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ವಿವಿಧ ಆಸೆಗಳನ್ನು ಹಚ್ಚಿ ಭೂಮಿ ಪಡೆದುಕೊಳ್ಳುವ ಕಳ್ಳರ ಕೆಲಸ ಮಾಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ನಾಗಠಾಣ ಹೋಬಳಿಯ ತಿಡಗುಂದಿ ವ್ಯಾಪ್ತಿಯ ಒಟ್ಟು 1203 ಎಕರೆ ರೈತರ ಫಲವತ್ತಾದ ಕಪ್ಪ ಮಣ್ಣಿನ ಎರಿ ಜಮೀನುಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ತಯಾರಿ ನಡೆದಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಭಾಗದ ಯಾವ ರೈತರು ಕೂಡಾ ಈ ಬೆಲೆಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ಕೂಡಲೇ ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು ಅಥವಾ ಬೇರೆಡೆಗೆ ಕೃಷಿಗೆ ಯೋಗ್ಯವಿರದ ಭೂಮಿಯಲ್ಲಿ ಮುಂದುವರೆಸಬಹುದು, ಒಂದು ವೇಳೆ ಈ ಯೋಜನೆಯನ್ನು ತಿಡಗುಂದಿಯಲ್ಲಿ ಮುಂದುವರೆಸಿದ್ದೆ ಆದರೆ 1203 ಎಕರೆಯ ಸುಮಾರು 350 ಕುಟುಂಬಗಳು ಬೀದಿಗೆ ಬೀಳಲಿವೆ. ಈ ಕುರಿತು ಜಿಲ್ಲೆಯಾಧ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೆವೆ ಎಂದರು.
ಮುಖಂಡರಾದ ಗಿರೀಶ ತಾಳಿಕೋಟಿ ಅವರು ಮಾತನಾಡುತ್ತ ಎಂ.ಬಿ ಪಾಟೀಲರೇ ನಮ್ಮ ಭಾಗಕ್ಕೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಪದವಿದರರು ಬೇರೆ ಕಡೆ ಕೆಲಸ ಮಾಡುವುದು ಬೇಡ ನಮ್ಮ ಜಮೀನಿನಲ್ಲಿಯೇ ದುಡಿದು ಮಾಲಿಕರಾಗಿ ಇರೋಣ ಎನ್ನುವ ಆಸೆಯಿಂದ ನಮ್ಮ ಸ್ವಗ್ರಾಮಕ್ಕೆ ಬಂದು ವ್ಯವಸಾಯ ಮಾಡಿಕೊಂಡು ಸಂತೋಷದಿಂದ ಇದ್ದೇವೆ, ಆದರೆ ಈಗ ಏಕಾಏಕಿ ಕೈಗಾರಿಕೆಗಾಗಿ ಒಳ್ಳೆಯ ಜಮೀನನ್ನು ಬಳಸಿಕೊಳ್ಳುವುದು ಯಾವ ನ್ಯಾಯ, ನಾವ್ಯಾರೂ ನಮ್ಮ ಭೂಮಿಯನ್ನು ಮಾರಿಕೊಳ್ಳಲ್ಲು ತಯಾರಿಲ್ಲ ಎಂದರು.
ಮುಖಂಡರಾದ ಮಡಿವಾಳ ತಿಲ್ಯಾಳ ಮಾತನಾಡುತ್ತ, ಜಿಲ್ಲೆಯಲ್ಲಿ ಈ ಮುಂಚೆ ಬೇರೆ ಬೇರೆ ಉದ್ದೇಶಕ್ಕಾಗಿ ನಿಗದಿ ಮಾಡಿರುವ ಭೂಮಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ನಂತರದಲ್ಲಿ ಹೊಸ ಹೊಸ ಯೋಜನೆಗಳಿಗೆ ಕೈಹಾಕಿದರೆ ಚೆನ್ನಾಗಿರುತ್ತದೆ. 10 ವರ್ಷ ಕಳೆದರೂ ಮುಳವಾಡದ 3500 ಎಕರೆ ಕೈಗಾರಿಕಾ ಪ್ರದೇಶ ಇನ್ನು ಖಾಲಿ ಖಾಲಿ ಬಿದ್ದಿದೆ. ರೈತರಿಗೆ ಕೊಡಬೇಕಾಗಿರುವ ಪರಿಹಾರದ ಹಣ ಕೂಡಾ ಇನ್ನು ಬಂದಿರುವುದಿಲ್ಲ ಎಂದು ನಿತ್ಯ ರೈತರ ಗೋಳಾಟವಾಗಿದೆ. ಮೊದಲು ಅಲ್ಲಿ ರೈತರಿಗೆ ಬರಬೇಕಾದ ಪರಿಹಾರ ಕೊಡಿ.
ಜಿಲ್ಲೆಯಲ್ಲಿಯ ಕೃಷಿಗೆ ಯೋಗ್ಯವಿರುವ ಯಾವ ಭೂಮಿಯನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬೇಡಿ, ಪಾಳುಬಿದ್ದಿರುವ ಗುಡ್ಡಗಾಡು ಪ್ರದೇಶಗಳಲ್ಲಿ ನೀವೂ ಕೈಗಾರಿಕೆ ತೆಗೆದುಕೊಂಡು ಬನ್ನಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಪಟ್ಟು ಹಿಡಿದು ನಮ್ಮ ಜೀವ ಹೋದರು ಕೃಷಿ ಭೂಮಿ ಬೀಡುವುದಿಲ್ಲ ಎನ್ನುತ್ತಿದ್ದಾರೆ.
ಒಂದು ವೇಳೆ ಮೊಂಡುತನದಿಂದ ಹೀಗೆ ಮುಂದುವರೆದು ಈ ಫಲವತ್ತಾದ ಕೃಷಿ ಭೂಮಿಯನ್ನು ಪಡೆದೆ ತೀರುತ್ತೇನೆ ಎನ್ನುವ ಹಠಕ್ಕೆ ಬಿದ್ದಿದೆ. ಆದರೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ 31 ಜಿಲ್ಲೆಯ ಪದಾಧಿಕಾರಿಗಳು ತಿಡಗುಂದಿಯಲ್ಲಿ ಬಿಡಾರ ಹೂಡಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ವೇಳೆ ರೈತ ಮುಖಂಡರಾದ ಅಶೋಕಗೌಡ ಬಿರಾದರ, ಸಿದ್ದರಾಮ ಪೂಜಾರಿ, ಗೋಪಾಲ್ ಬೋಸಲೆ, ಸಾಗರ ಗಡಚಿ, ಈಶ್ವರಪ್ಪ ಬೆಳ್ಳುಂಡಗಿ, ಮಡಿವಾಳ ತಿಲ್ಲಿಹಾಳ ಸಾಹೇಬಗೌಡ ಬಿರಾದಾರ ಮಾಳಪ್ಪ ಜಂಬಗಿ, ಹಣಮಂತ ಜಂಬಗಿ, ಅರವಿಂದ ಗಡಚಿ, ಬಿ ಬಿ ಮೇಲಿನಮನಿ, ಸಾಬುರಾವ್ ಛಲವಾದಿ, ಶಿವಪ್ಪ ಜಂಬಗಿ ಸೇರಿದಂತೆ ಅನೇಕರು ಇದ್ದರು.

