ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುತ್ತವೆ. ರೈತರು ತಮ್ಮ ಬೆಳೆಗಳನ್ನು ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದು ಮತ್ತು ಅಗತ್ಯವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನಿಯಮಿತ ಮಳೆ, ಬರ, ಗಾಳಿಮಳೆ, ಪ್ರವಾಹ, ಕೀಟ ಹಾಗೂ ರೋಗಬಾಧೆ ಮುಂತಾದ ಕಾರಣಗಳಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ರೈತರಿಗೆ ಆರ್ಥಿಕ ನೆರವು ಒದಗಿಸಿ ಕೃಷಿಯಲ್ಲಿ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ. 2026 ಮುಂಗಾರು ಹಂಗಾಮಿಗೆ ಬಸವನಬಾಗೇವಾಡಿ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ, ಸಜ್ಜೆ ಮತ್ತು ಸೂರ್ಯಕಾಂತಿ, ಹತ್ತಿ, ನಿಡಗುಂದಿ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ ಮತ್ತು ಸೂರ್ಯಕಾಂತಿ, ಕೊಲ್ಹಾರ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ ಮತ್ತು ಸಜ್ಜೆ ಅಧಿಸೂಚಿತ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರು ಯೋಜನೆಯ ಸೌಲಭ್ಯ ಪಡೆಯಬಹುದು. ನಮ್ಮ ಜಿಲ್ಲೆಗೆ ಎಸ್.ಬಿ.ಆಯ್, ಜನರಲ್ ಇನ್ಸೂರನ್ಸ್ ಕಂಪನಿ ಆಯ್ಕೆಯಾಗಿದೆ. ತೊಗರಿ (ಮಳೆಯಾಶ್ರಿತ), ತೊಗರಿ (ನೀರಾವರಿ) ಮುಸಕಿನ ಜೋಳ (ನೀರಾವರಿ), ಮುಸಕಿನ ಜೋಳ (ಮಳೆಯಾಶ್ರಿತ), ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ಕಟ್ಟಲು ಜುಲೈ 31 ಕೊನೆಯ ದಿನವಾಗಿದೆ. ಈರುಳ್ಳಿ (ನೀರಾವರಿ), ಹತ್ತಿ (ಮಳೆಯಾಶ್ರಿತ) ಬೆಳೆಗೆ ವಿಮೆ ಕಟ್ಟಲು ಆಗಷ್ಟ್ 14 ಕೊನೆಯ ದಿನವಾಗಿದೆ. ಬೆಳೆ ವಿಮೆ ನೋಂದಣಿಗೆ ರೈತರು ಕಡ್ಡಾಯಾವಾಗಿ ಫ್ರೂಟ್ಸ್ ಐ. ಡಿ. (ಎಫ್.ಐ.ಡಿ), ಎನ್.ಪಿ.ಸಿ.ಐ ಸಿಡಿಂಗ್ ಆಗಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ ಮತ್ತು ಜಮೀನಿನ ದಾಖಲೆಗಳನ್ನು ಹೊಂದಿರಬೇಕು. ರೈತರ ಬ್ಯಾಂಕ್ ಖಾತೆಯು ಎಫ್.ಐ.ಡಿ ಮತ್ತು ಆಧಾರ್ ಜೋಡಣೆಯಾಗಿರುವುದು ಕಡ್ಡಾಯವಾಗಿದೆ. ವಿಮೆ ಮಾಡಿಸಿದ ಬೆಳೆಗಳಿಗೆ ಪ್ರಕೃತಿ ವಿಕೋಪ ಅಥವಾ ಇತರೆ ಕಾರಣಗಳಿಂದ ಹಾನಿ ಯಾದಲ್ಲಿ ರೈತರು 72 ಗಂಟೆಗಳ ಒಳಗಾಗಿ ಕೃಷಿ ಇಲಾಖೆ, ಬ್ಯಾಂಕ್ ಅಥವಾ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಬಸವನಬಾಗೇವಾಡಿ, ನಿಡಗುಂದಿ ಮತ್ತು ಕೊಲ್ಹಾರ ತಾಲೂಕಿನ ರೈತ ಬಾಂಧವರು ಬೆಳೆ ವಿಮೆ ಯೋಜನೆಯ ಸದುಪಯೋಗ ಪಡೆದು ತಮ್ಮ ಬೆಳೆ ಸುರಕ್ಷಿತಗೊಳಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಅಮಗೋಂಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

