೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಸಿಂದಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ಜುಲೈ ೨೧ ಮತ್ತು ೨೨ ರಂದು ಜರುಗುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಭರವಸೆ ವ್ಯಕ್ತಪಡಿಸಿದರು.
ಸಿಂದಗಿ ನಗರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಡೆದ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಆಡಳಿತಾವಧಿಯಲ್ಲಿ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ. ಕನ್ನಡಮ್ಮನ ನುಡಿ ತೇರನೆಳೆದು ಸೇವೆ ಮಾಡುವ ಸೌಭಾಗ್ಯ ನಮಗೆ ದೊರಕಿರುವದು ನಮ್ಮೆಲ್ಲರ ಅದೃಷ್ಟ. ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ, ಮಾದರಿಯಾಗಿ ಆಚರಿಸೋಣ ಎಂದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸಿಂದಗಿಯಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿAದ ಸಮ್ಮೇಳನದ ತಯಾರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅಕ್ಷರ ಜಾತ್ರೆಯ ಯಶಸ್ಸು ಪ್ರತಿ ಕನ್ನಡಿಗನ ಸಹಕಾರದ ಜೊತೆ ಜೊತೆಗೆ ತಾಲೂಕಾಡಳಿತದ ಮೇಲೆಯೂ ಗುರುತರ ಜವಾಬ್ದಾರಿ ಇದೆ. ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಈಗಾಗಲೇ ತಾಲೂಕಾಡಳಿತ ಹಾಗೂ ತಾಲೂಕಿನ ಹಿರಿಯರೊಂದಿಗೆ ಸಭೆಯನ್ನು ಮಾಡಿ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ವಾಯ್.ಸಿ.ಮಯೂರ ಮಾತನಾಡಿ, ೧೪ ವರ್ಷಗಳ ಹಿಂದೆ ಸಿಂದಗಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗಿದೆ. ಈಗ ಮತ್ತೊಮ್ಮೆ ಜಿಲ್ಲಾ ಸಮ್ಮೇಳನ ಆಚರಣೆ ಮಾಡುವ ಸುಯೋಗ ದೊರೆತದ್ದು ತಾಲೂಕಿನ ಸುದೈವ. ೨೧ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶಾಸಕರು ಹಾಗೂ ತಾಲೂಕ ಆಡಳಿತಕ್ಕೆ ಗೌರವ ದೊರಕುವುದು ಎಂದರು.
ಪ್ರಾಸ್ತಾವಿಕವಾಗಿ ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಮಾತನಾಡಿದರು.
ಶಿಕ್ಷಕಿ, ಸಾಹಿತಿ ಸೈನಾಬಿ ಮಸಳಿ ಪ್ರಾರ್ಥಿಸಿದರು. ಶಿಕ್ಷಕ ಮಹೆತಾಬ ಕಾಗವಾಡ ಗೀತಗಾಯನ ಮಾಡಿದರು. ಪದಾಧಿಕಾರಿಗಳಾದ ಶಾಂತು ರಾಣಾಗೋಳ, ಎಸ್.ಎಸ್.ಸಾತಿಹಾಳ, ವರ್ಷಾ ಪಾಟೀಲ, ಸುನಂದಾ ಯಂಪೂರೆ, ರಾಮಕೃಷ್ಣ ಹೆಬ್ಬಾಳ, ಶಿವಾನಂದ ಶಿವಸಿಂಪಗೇರ, ಡಾ.ಪ್ರಕಾಶ ರಾಗರಂಜಿನಿ, ಅನಸೂಯ ಪಾರಗೊಂಡ, ಅಂಬರೀಶ ಚೌಗಲೆ, ಖಲೀಲ ಬಡಿಗೇರ, ವಿಶ್ವನಾಥ ಪಾಟೀಲ ಸೇರಿದಂತೆ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಇದ್ದರು.

