ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಗೀತೆಯು ನಾವೆಲ್ಲ ಒಂದೇ ಎನ್ನುವ ಚಿಂತನೆಯನ್ನು ನೀಡುವುದರ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುತ್ತದೆ ಎಂದು ಭಗವದ್ಗೀತಾ ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ರಾಘವೇಂದ್ರ ಮಠದ ಧಾರ್ಮಿಕ ಭವನದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ,(ಉ.ಕ) ) ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಮುದ್ದೇಬಿಹಾಳ ತಾಲೂಕಾ ಸಮಿತಿ ಹಾಗೂ ರಾಘವೇಂದ್ರ ಮಠದ ಸಹಯೋಗದಲ್ಲಿ ಆಯೋಜಿಸಿರುವ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದ ಪ್ರತಿಯೊಂದು ಸುಖ-ದು:ಖಗಳಿಗೆ ಗೀತೆಯಲ್ಲಿ ಉತ್ತರವಿದೆ. ಕಲೆ ಮತ್ತು ವಿಜ್ಞಾನ ಸದೃಶವಾದ ಅಂಶಗಳು ಅಡಕವಾಗಿದೆ. ಹಾಗಾದರೆ ಅದನ್ನು ಅಳವಡಿಸಿಕೊಳ್ಳುವ ಚಿಂತೆನೆಮಾಡಬೇಕಾಗಿದೆ, ಗೀತೆಯ ಪ್ರತಿಯೊಂದು ಅಂಶಗಳನ್ನು ಅನ್ವಯಮಾಡಿಕೊಳ್ಳುತ್ತಾ ಸಾರ್ಥಕ್ಯ ಕಾಣಬೇಕಾಗಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮಾಡಬಾರದನ್ನು ಮಾಡುವ, ನೋಡಬಾರದನ್ನು ನೋಡುವ ಕಾರ್ಯಕ್ಕೆ ಮುಂದಾಗಿ ಸಮಾಜಕ್ಕೆ ಕಂಟಕರಾಗುತ್ತಾರೆ. ಆದುದರಿಂದ ಮನೆಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಧರ್ಮಮಾರ್ಗದ ಸುವಾಸನೆ ಪಸರಿಸುತ್ತ ಇರಬೇಕು. ಭಾರತವು ಆರ್ಥಿಕರಂಗವನ್ನು ಹೊರತುಪಡಿಸಿ ಉಳಿದ ರಂಗಗಳಲ್ಲಿ ಯಾವತ್ತೂ ವಿಕಾಸವಾಗಿಯೆ ಇದೆ. ಅಂದರೆ ಜ್ಞಾನ, ವಿಜ್ಞಾನ, ಆವಿಷ್ಕಾರ, ಮಾನವೀಯತೆ, ಸಂಸ್ಕಾರ, ಗುರುಕುಲ ಶಿಕ್ಷಣ ಇತ್ಯಾದಿ ವಿಚಾರಗಳ ಮೇಲೆ ಸ್ವಾವಲಂಬನೆಯನ್ನು ಸಾಧಿಸಿಕೊಂಡು ಬಂದಿದ್ದೇವೆ. ಅದಕ್ಕೆ ವಿಶ್ವದ ಬೇರೆ ದಾರ್ಶನಿಕರಿಂದ ಮನ್ನಣೆಯನ್ನು ಪಡೆದಿದೆ. ಶೃದ್ಧಾವಾನ್ ಲಭತೆ ಜ್ಞಾನವೆನ್ನುವ ಮೂಲ ಮಂತ್ರ ವಿದ್ಯೆಯ ಪ್ರವೇಶದ್ವಾರವಾಗಿದೆ. ದೂರದ ಬೇರೆಬೇರೆ ದೇಶಗಳ ಸಾಧನೆಯಲ್ಲಿ ಭಗವದ್ಗೀತೆ ಪ್ರಧಾನ ಪಾತ್ರ ವಹಿಸಿದೆ. ಆದರೆ ಎಲ್ಲರಿಗೂ ಅದು ಗೊತ್ತಿಲ್ಲ. ಗೊತ್ತಿದ್ದು ಕಾರ್ಯತತ್ಪರರಾಗುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಭಗವದ್ಗೀತೆ ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಸದುದ್ದೇಶದಿಂದ ೨೦೦೭ರಿಂದ ಸ್ವರ್ಣವಲ್ಲೀ ಸಂಸ್ಥಾನದ ಯತೀವರೇಣ್ಯರಾದ ಗಂಗಾಧರೇAದ್ರ ಮಹಾಸ್ವಾಮಿಗಳು ಭಗವದ್ಗೀತಾ ಅಭಿಯಾನವನ್ನು ನಾಡಿನಾದ್ಯಂತ ಆರಂಭಿಸಿರುತ್ತಾರೆ. ನಾವೆಲ್ಲ ಅದರ ಪ್ರಯೋಜನ ಪಡೆದುಕೊಳ್ಳೋಣ ಎಂದರು.
ಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಮಾತನಾಡಿ ಭಗವದ್ಗೀತೆ ಕೃಷ್ಣ ಅರ್ಜುನರ ನಡುವೆ ನಡೆದ ಸಂದೇಶದAತೆ ಕಂಡರೂ ಇಲ್ಲಿ ಕೃಷ್ಣ ಗುರುವಾಗಿಯೂ ಆರ್ಜುನ ಶಿಷ್ಯನಾಗಿಯೂ ಎಷ್ಟೇ ಯುದ್ಧವಿದ್ಯೆ ಪರಿಣತಿಯನ್ನು ಹೊಂದಿದ್ದರೂ, ಮಹಾ ಭಾರತ ಯುದ್ಧಕಾಲದಲ್ಲಿ ಉಂಟಾದ ಮಾನಸಿಕ ಸಮಸ್ಯೆಗಳಿಗೆ ಅರ್ಥಾತ್ ಅರ್ಜುನನ ಧರ್ಮದ ರಕ್ಷಣೆ ಒಬ್ಬರಿಗೆ ಸೀಮಿತವಾಗಿಲ್ಲ. ಸನಾತನ ಸಂಸ್ಕೃತಿ ಬೆಳೆಸಿ, ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬನ ಜವಾಬ್ದಾರಿ ಅಡಕವಾಗಿದೆ ಎಂದರು.
ಮಠದ ಅರ್ಚಕ ಗುರುರಾಜ ರಾಜಪುರೋಹಿತ, ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲ ದೊಡಮನಿ, ಕಾರ್ಯದರ್ಶಿ ರವೀಂದ್ರ ಬಿರಾದಾರ, ಸರಸ್ವತಿ ಕುಲಕರ್ಣಿ, ಲಕ್ಷ್ಮೀ ನಲವಡೆ, ರತ್ನಾ ನಾವಡ, ಪ್ರಶಿಕ್ಷಕಿ ರಂಜಿತಾ ಭಟ್ಟ, ಬಾಳು ಗಿಂಡಿ, ಸರೋಜಿನಿ ದೇವೂರ, ಶ್ರೀಮತಿ ಪದಕಿ, ಗೋದಾವರಿ ಕುಲಕರ್ಣಿ, ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ತಾಡಪತ್ರೆ ಸೇರಿದಂತೆ ಮತ್ತೀತರರು ಇದ್ದರು.

