ಟ್ರಾಕ್ಟರ್ ನಲ್ಲಿ ರೈತರ ದಂಡು | ಸರ್ಕಾರದ ವಿರುದ್ಧ ರೈತರ ಗುಡುಗು | ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಾವಿರಾರು ರೈತರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಹೆದ್ದಾರಿ ರಸ್ತೆಯಲ್ಲಿರುವ ಟೋಲ್ ಕೇಂದ್ರದಲ್ಲಿ ಟ್ರ್ಯಾಕ್ಟರ್ಗಳ ಮೂಲಕ ಆಗಮಿಸಿ ಸಮಾವೇಶಗೊಂಡರು. ನೂರಾರು ರೈತರು ಹಸಿರು ಶಲ್ಯ ಧರಿಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಫಲಕಗಳನ್ನು ಪ್ರದಶಿಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿರುವ ತೊಗರಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆಗಳನ್ನು ಪ್ರದರ್ಶಿಸಿ ಪರಿಹಾರಕ್ಕಾಗಿ ಹಕ್ಕೊತ್ತಾಯ ಮಂಡಿಸಿದರು.
ಇನ್ನೂ ಹಲವಾರು ಕಡೆ ಸೂಕ್ತ ಬೆಲೆ ನಿಗದಿ ಮಾಡದ ಹಿನ್ನೆಲೆಯಲ್ಲಿ ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳನ್ನು ಸುರುವಿ ಆಕ್ರೋಶ ಹೊರಹಾಕಿದರು.
ಕೇವಲ ಪ್ರತಿಭಟನೆಗೆ ಸೀಮಿತವಾದ ಟ್ರ್ಯಾಕ್ಟರ್ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಕೆಲವೊಂದು ಟ್ರ್ಯಾಕ್ಟರ್ಗಳಲ್ಲಿ ಕುಳಿತು ಪ್ರತಿಭಟನಾ ರ್ಯಾಲಿಗೆ ಅಣಿಯಾದರು.
ಶಾಸಕ ಜನಾರ್ಧನ್ ರೆಡ್ಡಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರೈತರಿಗಾಗಿ ಒಂದು ಗಂಟೆ ಕೂಡಾ ಈ ಸರ್ಕಾರದ ಬಳಿ ಸಮಯವಿಲ್ಲ
ರೈತರನ್ನುದ್ದೇಶಿಸಿ ಮಾತನಾಡಿದ ಶಾಸಕ ಜನಾರ್ಧನ್ ರೆಡ್ಡಿ ಮಾತನಾಡಿ, ಈ ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಸಂಪೂರ್ಣ ಬೇಜವಾಬ್ದಾರಿ ತೋರಿದೆ, ಒಂದು ಗಂಟೆಯೂ ಸಹ ರೈತರ ಸಮಸ್ಯೆ ಬಗೆ ಹರಿಸುವುದಕ್ಕೆ ಸಮಯವಿಲ್ಲ, ಕೇವಲ ಒಂದು ತಾಸು ಸಮಯ ತೆಗೆದರೆ ರೈತರ ಎಷ್ಟೋ ಸಮಸ್ಯೆಗಳನ್ನು ಬಗೆ ಹರಿಯುತ್ತಿದ್ದವು, ಆದರೆ ಕುರ್ಚಿ ಕಚ್ಚಾಟಕ್ಕೆ ದೊಡ್ಡ ಸಮಯವಿದೆ, ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಈ ಸರ್ಕಾರದ ಬಳಿ ಒಂದೇ ಒಂದು ತಾಸು ಸಮಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೈತರನ್ನ ನಿರ್ಲಕ್ಷ ಮಾಡಲಾಗಿದೆ, ಬೆಳೆ ಪರಿಹಾರ ಪಾವತಿಯಲ್ಲಿ ವಿಳಂಬ, ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ಅರಂಭಕ್ಕೆ ವಿಳಂಬ ಹೀಗೆ ಅನೇಕ ವಿಳಂಬ ಧೋರಣೆ ಮೂಲಕ ಸಿಎಂ ಸಿದ್ದರಾಮಯ್ಯ ರೈತ ವಿರೋಧಿ ಅನ್ನುವುದನ್ನು ತೋರಿಸಿಕೊಟ್ಟಿದ್ದರೆ, ಈ ಸರ್ಕಾರದ ನಡವಳಿಕೆಯಿಂದ ರಾಜ್ಯದಲ್ಲಿ ರೈತರಿಗೆ ತೀವ್ರವಾದ ಅನ್ಯಾಯವಾಗಿದೆ, ರೈತರು ಬೀದಿಗೆ ಬಿದ್ದು ಹೋರಾಟ ಮಾಡುತ್ತಿದ್ದಾರೆ, ಆದರೆ ರೈತರಿಗಾಗಿ ಈ ಸರ್ಕಾರದ ಬಳಿ ಸಮಯವೇ ಇಲ್ಲ, ಸಚಿವರು ಸಹ ರೈತರ ಬೇಡಿಕೆ ಅಲಿಸಲು ಹೋಗಬೇಕಿತ್ತು, ಅವರೂ ಅತ್ತ ಹೋಗುತ್ತಿಲ್ಲ ಇದು ರಾಜ್ಯ ಸರ್ಕಾರ ರೈತರಿಗೆ ತೋರುತ್ತಿರುವ ಗೌರವ ಎಂದು ಅಕ್ರೋಶ ವ್ಯಕ್ತಡಪಿಸಿದರು.
ರೈತರನ್ನ ಕರೆದು ಅವರ ಸಮಸ್ಯೆ ಆಲಿಸಿ ಸಮಾಧಾನ ಹೇಳಬಹುದಿತ್ತು. ಆದರೆ ಎಲ್ಲರಿಗೂ ತಮ್ಮ ಕುರ್ಚಿ ಚಿಂತೆ, ಶಾಸಕರಾದವರಿಗೆ ಸಚಿವರಾಗುವ ಚಿಂತೆ, ರೈತರು ಏನಾದ್ರೂ ಮಾಡಿ ಹಾಳಾಗಿ ಹೋಗ್ಲಿ, ಜನರು ಹಾಳಾಗಿ ಹೋಗಲಿ ಎಂದು ಬೇಜವಾಬ್ದಾರಿ ತೋರಿದ್ದರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಸಾಬು ಮಾಶ್ಯಾಳ, ಸಂಜಯ ಪಾಟೀಲ ಕನಮಡಿ, ಕಾಸುಗೌಡ ಬಿರಾದಾರ, ಚಿದಾನಂದ ಚಲವಾದಿ, ಡಾ.ಸುರೇಶ ಬಿರಾದಾರ, ಸಂದೀಪ ಪಾಟೀಲ, ಮಹೇಂದ್ರ ನಾಯಕ, ಗೋಪಾಲ ಘಟಕಾಂಬಳೆ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸ್ವಪ್ನಾ ಕಣಮುಚನಾಳ, ಉಪಮೇಯರ್ ಸುಮಿತ್ರಾ ಜಾಧವ, ಸಂಜೀವ ಐಹೊಳಿ, ವಿಜಯ ಜೋಶಿ, ಸಂಪತ್ ಕೋವಳ್ಳಿ, ರಾಜಶೇಖರ ಡೊಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.

ಇಲ್ಲಿಗೆ ಈ ಹೋರಾಟ ನಿಲ್ಲಿಸುವುದಿಲ್ಲ :ನಡಹಳ್ಳಿ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮತನಾಡಿ, ರೈತರು ಇಲ್ಲಿಯವರೆಗೆ ಸಹಕಾರದ ಹೋರಾಟ ಮಾಡುತ್ತಿದ್ದರು, ಆದರೆ ರೈತರ ಈ ಸಹನೆಯನ್ನು ರಾಜ್ಯ ಸರ್ಕಾರ ದುರಪಯೋಗಪಡಿಸಿಕೊಳ್ಳುತ್ತದೆ, ರೈತರು ಈಗ ಅನಿವಾರ್ಯವಾಗಿ ಸಂಘರ್ಷದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ, ಇನ್ನಾದರೂ ಈ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಲಿ, ನಾವು ಇಲ್ಲಿಗೆ ಈ ಹೋರಾಟ ನಿಲ್ಲಿಸುವುದಿಲ್ಲ, ವಿಧಾನಸೌಧಕ್ಕೂ ಈ ಹೋರಾಟ ವ್ಯಾಪಿಸಲಿದೆ ಎಂದರು. ರೈತರ ವಾಹನ ಟ್ರ್ಯಾಕ್ಟರ್, ಆದರೆ ಅದರ ಪ್ರವೇಶ ತಡೆದರೆ ಹೇಗೆ? ರೈತರ ಹೋರಾಟವನ್ನು ತಡೆದರೆ ನಾವೇಕೆ ಸುಮ್ಮನಿರಬೇಕು ಎಂದು ಅಸಮಾಧಾನ ಹೊರಹಾಕಿದರು.

ಸಾವಿರಾರು ರೈತರ ಸಮ್ಮುಖದಲ್ಲಿ ಸಾಗಿದ ಟ್ರ್ಯಾಕ್ಟರ್ ರ್ಯಾಲಿ
ಸಾವಿರಾರು ರೈತರ ಸಮ್ಮುಖದಲ್ಲಿ ಸಾಗಿದ ಟ್ರ್ಯಾಕ್ಟರ್ ರ್ಯಾಲಿ ಟೋಲ್ ಕೇಂದ್ರದಿಂದ ಆರಂಭಗೊಂಡು ಗಣೇಶ ನಗರ, ಜಲನಗರ, ಜಮಖಂಡಿ ರಸ್ತೆ, ಬಬಲೇಶ್ವರ ನಾಕಾ, ಶಿವಾಜಿ ಮಹಾರಾಜರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಡಾ.ಅಂಬೇಡ್ಕರ ವೃತ್ತದ ಎದುರು ಸಮಾವೇಶಗೊಂಡಿತು.

