ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಅನ್ನ, ನೀರು ಮತ್ತು ಒಳ್ಳೆಯ ಮಾತುಗಳು ಇವು ಜಗತ್ತಿನ ಮೂರು ರತ್ನಗಳು. ಪವಿತ್ರವಾದ ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು. ಆದ್ದರಿಂದ ಸಮಾಜದಲ್ಲಿ ಒಳ್ಳೆಯ ಮಾತುಗಳನ್ನು ಬಿತ್ತುವ ಕಾರ್ಯವನ್ನು ಓಲೆಮಠ ಮಾಡುತ್ತಿದೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ಓಲೆಮಠದ ಆಶ್ರಯದಲ್ಲಿ ಜು.25 ರಿಂದ ಆ.19ರ ವರಗೆ ನಡೆದ ವಚನ ಶ್ರಾವಣ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ನಡೆದ ವಚನ ಶ್ರಾವಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತಿಗೆ ಮನುಷ್ಯನಲ್ಲಿ ಪರಿವರ್ತನೆ ತರುವ ಶಕ್ತಿಸಾಮರ್ಥ್ಯವಿದೆ. ಆದ್ದರಿಂದ ಕೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಗೊಳ್ಳಬೇಕು ಎಂದರು.
ಸಿಂದಗಿ ಸಾರಂಗ ಮಠದ ಡಾ.ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ,
ಕರ್ನಾಟಕದಲ್ಲಿ ಅತ್ಯಂತ ಸಮನ್ವಯ ಇರುವ ಭಕ್ತರು ಜಮಖಂಡಿಯಲ್ಲಿದ್ದಾರೆ. ಯಾವ ಭಾವದಿಂದ ಭಕ್ತರು ಮಠಕ್ಕೆ ಬರುತ್ತಾರೆ ಅದನ್ನೆ ಭಕ್ತರು ಪಡೆದುಕೊಳ್ಳುತ್ತಾರೆ. ಭಕ್ತರು ಭಕ್ತಿಯಿಂದ ಬರುವಂತ ಕಾರ್ಯಗಳು ಓಲೆಮಠದಿಂದ ನಡೆಯುತ್ತಿವೆ. ಸಮನ್ವಯತೆ, ಸಹಬಾಳ್ವೆ, ಪ್ರೀತಿ, ವಿಶ್ವಾಸ, ಗೌರವದಿಂದ ಭಕ್ತರು ನಡೆದುಕೊಳ್ಳಬೇಕು. ಅಧ್ಯಾತ್ಮಿಕ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡುವ ಹಂಬಲದಿಂದ ಆನಂದ ದೇವರು ಶ್ರೀಗಳು ಓಲೆಮಠಕ್ಕೆ ಬಂದಿದ್ದಾರೆ. ಅದಕ್ಕೆ ಭಕ್ತರ ಸುಮಂಗಲವಿರಲಿ ಎಂದರು.
ಶೂರ್ಪಾಲಿಯ ಸಾರಂಗ ಮಠದ ಮಾತೋಶ್ರೀ ಸುನಂದಮ್ಮಾತಾಯಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಮಖಂಡಿಯ ಓಲೆಮಠವು ಬಸವಕಲ್ಯಾಣ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಮಾನ್ಯವಾಗಿ ಪ್ರವಚನ ಕಾರ್ಯಕ್ರಮಗಳು ಮಠದಲ್ಲಿಯೇ ನಡೆಯುವುದು ವಾಡಿಕೆ. ಆದರೆ, ಓಲೆಮಠದ ಪೂಜ್ಯರು ಪ್ರತಿ ಓಣಿ ಓಣಿಗೆ ತೆರಳಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಜೀವನ ಹೇಗೆ ಸಾಗಿಸಬೇಕು ಎಂಬುದನ್ನು ವಚನಗಳ ಮೂಲಕ ಅರಿವು ಮೂಡಿಸಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಉದ್ದಿಮೆದಾರ ಉಮೇಶ ಮಹಾಬಳಶೆಟ್ಟಿ, ಹಿರಿಯ ವಕೀಲ ಎನ್.ಎಸ್. ದೇವರವರ ಮಾತನಾಡಿದರು. ಗುರುಸಿದ್ದಯ್ಯ ಅವರವಾಡಮಠ ಆನಂದ ದೇವರು ಶ್ರೀಗಳ ಕುರಿತು ಬರೆದ ಸ್ವರಚಿತ ಕವನ ಓದಿದರು. ವಾರ್ಕರಿ ಸಂಪ್ರದಾಯದ ಸುನೀಲ ಬಾಬರ ಮಹಾರಾಜರು ಆಶೀರ್ವಚನ ನೀಡಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಜಾನಪದ ಹಾಡು ಹಾಡಿ ರಂಜಿಸಿದರು. ಕಸ್ತೂರಿ ಜೈನಾಪುರ ಕವನ ವಾಚನ ಮಾಡಿದರು. ಭವಾನಿ ಜಾಲಿಹಾಳ ವಚನ ನೃತ್ಯ, ಶ್ರೇಯಾ ಘಟ್ನಟ್ಟಿ ಭರತನಾಟ್ಯ, ಚಿತ್ರಕಲಾ ಶಿಕ್ಷಕಿ ಸಾನಿಯಾ ಹುನಗಂದ ಹಾಗೂ ತಂಡದವರು ಅನುಭವ ಮಂಟಪ ರೂಪಕ ಪ್ರದರ್ಶಿಸಿದರು. ವಾರ್ಕರಿ ಶಿಕ್ಷಣ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿ ಬಳಗದಿಂದ ಪಾವುಲ ಭಜನೆ ಪ್ರದರ್ಶಿಸಿದರು. ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳ ಗದ್ದುಗೆ ಮತ್ತು ಮಂಟಪದ ನೀಲನಕ್ಷೆಯನ್ನು ಬಿಡುಗಡೆ ಮಾಡಲಾಯಿತು.
ಕಡಪಟ್ಟಿಯ ಜಗದೀಶ್ವರ ಮಠದ ಮಾತೋಶ್ರೀ ಪ್ರಮಿಳಾತಾಯಿ, ಪವಿತ್ರವನದ ಬಿ.ಕೆ.ಭಾರತಿ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ನಗರಸಭೆ ಸದಸ್ಯ ಪರಮಾನಂದ ಗವರೋಜಿ, ಡಾ.ವಿಜಯಲಕ್ಷೀ ತುಂಗಳ, ರಾಜೇಶ್ವರಿ ಹಿರೇಮಠ, ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ವಾರದ, ನಗರಸಭೆ ಸದಸ್ಯ ದಾನೇಶ ಘಾಟಗೆ, ನರಸಿಂಹ ಕಲ್ಲೋಳ್ಳಿ, ಪೌರಾಯುಕ್ತ ಜ್ಯೋತಿ ಗಿರೀಶ ಎಸ್., ಕಾಡು ಮಾಳಿ, ಶಾಮರಾವ ಘಾಟಗೆ, ಡಾ.ಎಚ್.ಜಿ. ದಡ್ಡಿ, ಸಂತೋಷ ತಳಕೇರಿ ಇತರರು ಇದ್ದರು.
ಗದ್ದುಗೆ ಮತ್ತು ಮಂಟಪ ನಿರ್ಮಾಣ ಸೇವೆಗೆ ರೂ.10 ಲಕ್ಷ ದೇಣಿಗೆ ನೀಡಿದ ರಾಜು ಗಸ್ತಿ, ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳ ಮೂರ್ತಿ ಸೇವೆ ಸಲ್ಲಿಸಿದ ವೀರಭದ್ರಯ್ಯಾ ಗಾರವಾಡಮಠ, ಓಲೆಮಠದ ಕಾರ್ಯಕಾರಿ ಸಮಿತಿ ಸದಸ್ಯರನ್ನು, ಓಣಿ ಓಣಿಯಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಮಂದಾಕಿಣಿ ಬಡಚಿ(106), ಅಡವೆವ್ವ ಅತ್ತೆಪ್ಪನವರ(104), ನಿಂಗಪ್ಪ ಪಡೆನ್ನವರ(104), ಚನ್ನಮ್ಮತಾಯಿ ಹಿಟ್ಟಿನಮಠ(95), ಸಂಗಪ್ಪ ನಾಂದ್ರೇಕರ, ತಂಗೆವ್ವ ಬಾಬಾನಗರ(97), ಎಂ.ಸಿ. ಗೊಂದಿ(93) ಹಿರಿಯರನ್ನು ಸನ್ಮಾನಿಸಲಾಯಿತು. ಡಾ.ಎನ್.ವಿ. ಅಸ್ಕಿ ನಿರೂಪಿಸಿದರು. ಓಲೆಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.