ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೃಷಿ ಪ್ರಧಾನ ಭಾರತ ದೇಶದಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮೀಣ ಮೂಲದ ಜನರೇ ಹೆಚ್ಚಾಗಿರುವ ಗ್ರಾಮ ಬದುಕಿನ ಸೊಗಡಿನ ಜನರಿಗೆ ಪ್ರಕೃತಿ ಹಸಿರು ಸಂಪ್ರದಾಯಗಳೆಲ್ಲವೂ ಅವರ ಕೃಷಿ ಬದುಕಿನಲ್ಲಿಯೇ ಕಾಣುತ್ತದೆ.
ಅವರ ಭಾಷೆಯಲ್ಲಿ ಯುಗಾದಿ ಎಂಬ ಪದವು ಉಗಾದಿ ಎಂದಾಗಿದೆ ಉಳಿದವರು ವ್ಯಾಪಾರಸ್ಥರಿಗೆ ದೀಪಾವಳಿ ಮುಖ್ಯ ಹಬ್ಬವಾದರೆ ರೈತಾಪಿ ಜನರಿಗೆ ಯುಗಾದಿಯೇ ಮುಖ್ಯ ಹಬ್ಬ.
ಚೈತ್ರ ಮಾಸದ ಆರಂಭವನ್ನು ಸೂಚಿಸುವ ಈ ಸಮಯದಲ್ಲಿ ಪ್ರಕೃತಿ ಅತ್ಯಂತ ಸುಂದರವಾಗಿ ಹಸಿರಿನಿಂದ ತುಂಬಿ ಪಲ್ಲವಿಸುತ್ತದೆ. ವಿಶೇಷವಾಗಿ ಮಾವು ಬೇವುಗಳು ಹೂವನ್ನು ಕಾಯಿಗಳನ್ನು ತಮ್ಮಲ್ಲಿ ತುಂಬಿಕೊಂಡು ನೋಡುವವರ ಕಣ್ಣಿಗೆ ಆನಂದವನ್ನು ಉಂಟು ಮಾಡುತ್ತವೆ. ಆಗ ತಾನೆ
ಬಿಟ್ಟ ಎಳೆಯ ಹುಣಸೆ, ಮಾವು ಭತ್ತದ ತೆನೆಗಳು ಹಬ್ಬದ ದಿನ ವಿಶೇಷವಾಗಿ ಪೂಜಿಸಲ್ಪಟ್ಟು ನಂತರ ಬಳಸಲ್ಪಡುತ್ತವೆ.
ಭಾರತ ದೇಶದ ಪ್ರತಿ ಹಳ್ಳಿಗಳಲ್ಲೂ ವರ್ಷದ ಮೊದಲ ಹಬ್ಬ ಯುಗಾದಿ ಅತ್ಯಂತ ವೈವಿಧ್ಯಮಯವಾಗಿ ಆಚರಿಸಲ್ಪಡುತ್ತದೆ. ಸರಿಸುಮಾರು ಯುಗಾದಿ ಹಬ್ಬಕ್ಕೆ ಒಂಬತ್ತು ದಿನಗಳ ಮುಂಚೆಯೇ ನವಧಾನ್ಯಗಳನ್ನು ಒಯ್ದು ಹೊಲದ ಒಂದು ಮೂಲೆಯಲ್ಲಿ ಬಿತ್ತುತ್ತಾರೆ. ಹೀಗೆ ಬಿತ್ತಿದ ಧಾನ್ಯಗಳು 9 ದಿನಗಳ ನಂತರ ಯುಗಾದಿ ಪಾಡ್ಯದ ದಿನ ಮೊಳಕೆಯೊಡೆದು ಬೆಳೆದ ರೀತಿಯನ್ನು ನೋಡಿ ಆ ವರ್ಷ ಬೆಳೆ ಯಾವ ರೀತಿ ಬರಬಹುದು ಎಂಬುದನ್ನು ಅಂದಾಜು ಮಾಡಲಾಗುತ್ತದೆ.

ಭಾರತ ದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಯುಗಾದಿ ಹಬ್ಬದ ಪಾಡ್ಯದ ದಿನವೇ ಅತ್ಯಂತ ಶ್ರೇಷ್ಠ. ಆ ದಿನವಿಡೀ ಶುಭದಿನ. ಯಾವುದೇ ಮುಹೂರ್ತ ಹಾಗೂ ಗಳಿಗೆಗಳನ್ನು ನೋಡದೆ ಯಾವುದೇ ಸಮಯದಲ್ಲಾದರೂ ನಮ್ಮ ರೈತರು ಭೂಮಿತಾಯಿಯನ್ನು ಪೂಜಿಸಿ ಕೆಲಸವನ್ನು ಆರಂಭಿಸುತ್ತಾರೆ. ಕೆಲವರು ಬೆಳ್ಳಿತಟ್ಟೆಯಲ್ಲಿ ಭೂಮಿಯ ಮಣ್ಣನ್ನು ಇಟ್ಟು, ರೈತಾಪಿ ಸಾಮಾನುಗಳಾದ ನೇಗಿಲು ಕುಂಟೆ ಕೂರಿಗೆ ಗುದ್ದಲಿ ಸಲಿಕೆ ಕೆಮ್ಮಣ್ಣು ಸವರಿ ನಂತರ ಅವುಗಳನ್ನು ಹೂವಿನಿಂದ ಅಲಂಕರಿಸಿ ಪೂಜಿಸಿ ಒಕ್ಕಲುತನದ ಕಾರ್ಯವನ್ನು ಆರಂಭಿಸುತ್ತಾರೆ. ಕೆಲ ಭಾಗಗಳಲ್ಲಿ ಇದನ್ನು ಗಾಳಿ ಹೊಡೆಯುವುದು ಎಂದು ಕರೆಯುತ್ತಾರೆ.
ಇನ್ನು ಊರಿನ ಮಧ್ಯ ಭಾಗದಲ್ಲಿ ಇರುವ ಅಗಸಿ ಬಾಗಿಲ ಬಳಿ ಇರುವ ಕಪ್ಪು ಬಣ್ಣದ ಊರನ್ನು ಕಾಯುವ ಭರಮ ದೇವರ ( ಭರಮಪ್ಪ )ಗುಂಡು ಕಲ್ಲಿನ ಬಳಿ ಒಂದು ತಗ್ಗು ತೋಡಿ ಅದರಲ್ಲಿ ಒಂದು ಮಣ್ಣಿನ ಕೊಡವನ್ನು ಇಟ್ಟಿರುತ್ತಾರೆ. ಅದರ ಮೇಲೆ ಎತ್ತು ಚಕ್ಕಡಿ ಟ್ರ್ಯಾಕ್ಟರ್ ಗಳು ಓಡಾಡಿದರೂ ಹಾಳಾಗದಂತೆ ದೊಡ್ಡದಾದ ಪಾಟೀಕಲ್ಲು ಇಲ್ಲವೇ ಚಪ್ಪಡಿ ಕಲ್ಲನ್ನು ಹಾಕಿರುತ್ತಾರೆ. ಇದೀಗ ಆ ಗಡಿಗೆಯನ್ನು ತೆಗೆದು ಗ್ರಾಮದ ಜನರೆಲ್ಲ ತಂದು ಹಾಕಿದ ( ಅದರಲ್ಲಿ ಹಾಲು ತುಪ್ಪ ಗೋಮೂತ್ರ ನೀರು ಸೇರಿದಂತೆ) ಪಂಚಗವ್ಯಗಳನ್ನು ಹಾಕಿ ಅದನ್ನು ಒಂದು ದೊಡ್ಡ ಕೋಲಿಗೆ ಮಧ್ಯಭಾಗದಲ್ಲಿ ಹಗ್ಗದ ಸಹಾಯದಿಂದ ಕಟ್ಟಿ ಗಡಿಗೆಗೆ ಪುಟ್ಟ ತೂತನ್ನು ಮಾಡಿ ಅದನ್ನು ಇಬ್ಬರು ಯುವಕರು ಹೊತ್ತು ಊರಿನ ಗಡಿ ಭಾಗದ ಎಲ್ಲೆಡೆ ಹನಿ ಹನಿಯಾಗಿ ಬೀಳುವಂತೆ ಸುರಿಸುತ್ತಾ ಇಡೀ ಗ್ರಾಮದ ಸುತ್ತಲೂ ಗ್ರಾಮವನ್ನು ರಕ್ಷಿಸುತ್ತಿರುವ ಎಲ್ಲಾ ದೇವರ ( ಸಾಮಾನ್ಯವಾಗಿ ವೀರಭದ್ರ ದೇವರು, ಹನುಮ ದೇವರು ದ್ಯಾಮವ್ವ ದುರ್ಗವ್ವ ರುದ್ರದೇವರು ಮಸೀದಿ, ಗುಡಿ) ಗಳನ್ನು ಸುತ್ತುವರೆದು ತರುತ್ತಾರೆ. ನಂತರ ಹೊಸ ಮಣ್ಣಿನ ಗಡಿಗೆಯನ್ನು ಹಾಗೂ ಕಳೆದ ವರ್ಷದ ಮಣ್ಣಿನ ಗಡಿಗೆಯನ್ನು ಇಟ್ಟು ಜಾಗವನ್ನು ಅಗೆಯಲು ಬಳಸಿದ ಗುದ್ದಲಿ ಹಾಗೂ ಸಲಿಕೆಗಳನ್ನು ತೊಳೆದು ಅಲ್ಲಿ ಇಟ್ಟು ಅದಕ್ಕೆ ವಿಭೂತಿ ಹಚ್ಚಿ ಅರಿಶಿನ ಕುಂಕುಮ ಇರಿಸಿ ಹೂವು ಪತ್ರಿ ಜೋಳದ ತೆನೆಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಕುಂಬಳಕಾಯಿಯನ್ನು ಒಡೆದು ಯಾವುದೇ ರೀತಿಯ ತೊಂದರೆಗಳು, ಜಡ್ಡು ಜಾಪತ್ರೆಗಳು ಗ್ರಾಮವನ್ನು ಕಾಡದಿರಲಿ ಊರಿಗೆ ಬರ ಬಾರದಿರಲಿ ಎಂದು ಗ್ರಾಮದ ಜನರು ಬೇಡಿಕೊಳ್ಳುತ್ತಾರೆ.
ಇತ್ತ ಹನುಮ ದೇವರ ಗುಡಿಯಲ್ಲಿ ಪೂಜೆಯನ್ನು ಸಲ್ಲಿಸಿ ತೇರಿನ ಗಾಲಿಗಳನ್ನು ಹೊರಹಾಕಿ ಅವುಗಳಿಗೂ ಪೂಜೆ ಸಲ್ಲಿಸುತ್ತಾರೆ. ಸಾಯಂಕಾಲದ ಸಮಯದಲ್ಲಿ ಹನುಮದೇವರ ಹುಚ್ಚಾಯವನ್ನು ಕೇವಲ ಯುವಕರು ಹಾಗೂ ಮಕ್ಕಳು ನಡೆಸುತ್ತಾರೆ.

ಯುಗಾದಿ ಅಮಾವಾಸ್ಯೆಯ ದಿನ ಮುಂಜಾನೆ ಮತ್ತೊಮ್ಮೆ ಪೂಜಿಸಿ ಹಳೇ ಗಡಿಗೆಯನ್ನು ತೆಗೆದು ಹೊಸ ಗಡಿಗೆಯನ್ನು ಅಗಸೆ ಬಾಗಿಲಿನ ತಗ್ಗಿನಲ್ಲಿ ಇಟ್ಟು ಮುಚ್ಚಲಾಗುತ್ತದೆ.
ಇತ್ತ ಹನುಮ ದೇವರ ಗುಡಿಯಲ್ಲಿ ಪಾಡ್ಯದ ದಿನ ಮುಂಜಾನೆಯೇ ಪ್ರತಿ ವರ್ಷವೂ ತರುವ ನಿಯಮಿತ ಜಾಗದಿಂದ ಬೇವಿನ ಸೊಪ್ಪು, ಇಂಗಳಾರ ಗಿಡದ ಸೊಪ್ಪು ಕಾಯಿಗಳು ಹಾಗೂ ಮುಳ್ಳಿನ ಒಂದು ಬಗೆಯ ಗಿಡವನ್ನು ತರುತ್ತಾರೆ ಮತ್ತು ಆ ದಿನ ಸಾಯಂಕಾಲ ಹನುಮ ದೇವರ ಉತ್ಸವ ಮೂರ್ತಿಯ ರಥೋತ್ಸವ ಜರುಗುತ್ತದೆ.
ಮರುದಿನ ಪಾಡ್ಯವಾಗಿದ್ದು ಆ ದಿನ ಮುಂಜಾನೆಯಿಂದಲೇ ಊರಿನ ಹೆಂಗಳೆಯರು ತಮ್ಮ ಮನೆಯನ್ನು ಗುಡಿಸಿ ಸಾರಿಸಿ ಮಿಂದು ಮಡಿಯುಟ್ಟು
ಹನುಮ ದೇವರ ಗುಡಿಗೆ ತಂಬಿಗೆಯಲ್ಲಿ ಬೇವಿನ ಸೊಪ್ಪನ್ನು ಹಾಕಿದ ಕಡ್ಡಿಗಳನ್ನು ಇಟ್ಟುಕೊಂಡು ಬಂದು ದೇವಸ್ಥಾನದ ಮುಂದಿನ ಕಲ್ಲುಗಳಿಗೆ ನೀರನ್ನು ಎರೆದು ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯವನ್ನು ಮಾಡುತ್ತಾರೆ.
ಬದುಕಿನಲ್ಲಿ ಬರುವ ಎಲ್ಲಾ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ನಿಟ್ಟಿನಲ್ಲಿ ಬೇವಿನ ಹೂವು ಬೆಲ್ಲ ಹಾಕಿದ ಬೇವಿನ ಪುಡಿಯನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ.
ತಮ್ಮ ಹೊಲವನ್ನು ಬೇರೆಯವರಿಗೆ ಗೇಣಿಗೆ ಕೊಡುವವರು ಆ ದಿನದಿಂದಲೇ ಆ ಕಾರ್ಯವನ್ನು ಅವರಿಗೆ ವಹಿಸಿ ಕೊಡುತ್ತಾರೆ. ಯುಗಾದಿಯ ದಿನದಂದು ಹೊಸ ಬಟ್ಟೆಗಳನ್ನು ಧರಿಸಿ ಸಂತಸ ಪಡುತ್ತಾರೆ.
ಹಬ್ಬಕ್ಕೆ ಒಂದೆರಡು ದಿನಗಳ ಮೊದಲು ಬೇವು ಬೆಲ್ಲದ ಪುಡಿಯನ್ನು ತಯಾರಿ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಈ ಬೇವಿನ ಪುಡಿಗೆ ಬೇಕಾಗುವುದು ಪುಟಾಣಿ, ಬೆಲ್ಲ ಇಲ್ಲವೇ ಸಕ್ಕರೆ. ಗೋಡಂಬಿ, ಕೇರಬೀಜ, ದ್ರಾಕ್ಷಿ, ಬಾದಾಮಿ, ಉತ್ತತ್ತಿ, ಚಾರವಾಳ, ಪಿಸ್ತಾ, ಅಕ್ರೂಟ್ ಕಸಕಸೆ ಮತ್ತು ಕೊಬ್ಬರಿಯ ಪುಡಿಗಳನ್ನೂ ಮಂದ ಉರಿಯಲ್ಲಿ ಹುರಿದು ತಣ್ಣಗಾದ ನಂತರ ಪುಡಿ ಮಾಡಿಕೊಂಡು ಇಲ್ಲವೇ ಸಣ್ಣಗೆ ಹೆಚ್ಚಿಕೊಂಡು ಪುಟಾಣಿಹಿಟ್ಟು ಸಕ್ಕರೆ ಇಲ್ಲವೇ ಪುಟಾಣಿ ಹಿಟ್ಟು ಬೆಲ್ಲದ ಮಿಶ್ರಣಕ್ಕೆ ಸೇರಿಸುತ್ತಾರೆ. ಈ ಎಲ್ಲ ಮಿಶ್ರಣಕ್ಕೆ ಏಲಕ್ಕಿ ಪುಡಿ ಹಾಕಿದರೆ ಬೇವಿನ ಪುಡಿ/ಹುಡಿ ತಯಾರು. ಹಬ್ಬದ ದಿನ ಮುಂಜಾನೆ ಬೇವಿನ ಮರದಲ್ಲಿಯ ಹೂಗಳನ್ನು ಹರಿದು ತಂದು ಅವುಗಳನ್ನು ಮರದಲ್ಲಿ ಹಾಕಿ ಚೆನ್ನಾಗಿ ಒತ್ತಿ ಚಪ್ಪರಿಸಿ ಹೂವಿನ ಎಸಳುಗಳನ್ನು ಮಾತ್ರ ಬೇರ್ಪಡಿಸಿ ಈ ಪುಡಿಯ ಮಿಶ್ರಣಕ್ಕೆ ಕಲಸಿದರೆ ಸಂಪೂರ್ಣವಾಗಿ ಬೇವು ತಯಾರಾಗುತ್ತದೆ.
ಮನೆಯಲ್ಲಿ ಮುಂಜಾನೆ ಶಾವಿಗೆ ಬಸಿದು ಅದಕ್ಕೆ ಒಣ ಬೇವಿನ ಪುಡಿಯನ್ನು ಹಾಕಿ ತುಪ್ಪವನ್ನು ಕಲಸಿ ದೇವರಿಗೆ ನೈವೇದ್ಯ ಮಾಡಿ ಅದನ್ನು ಸೇವಿಸಿದರೆ ಮಧ್ಯಾಹ್ನ ಹೋಳಿಗೆ ಮಾಡಿ ಬೇವಿನ ನೀರು( ಬೇವಿನ ಪುಡಿ ಹುಣಸೆರಸ ಮಾವಿನ ಕಾಯಿಯ ತುರಿ ಉಪ್ಪು ಬೆಲ್ಲ ವನ್ನು ಸೇರಿಸಿದ ಹುಳಿ ಸಿಹಿ ರುಚಿಯನ್ನು ಕೊಡುವ ಬೇವಿನ ನೀರು ) ಕೋಸಂಬರಿ, ಪಲ್ಯ, ಅನ್ನ ಸಾರು ಹಪ್ಪಳ ಸಂಡಿಗೆಗಳ ನೈವೇದ್ಯವನ್ನು ದೇವರಿಗೆ ಅರ್ಪಿಸಿ ಭೂರಿ ಭೋಜನವನ್ನು ಮಾಡಿ ಎಲ್ಲರೊಂದಿಗೆ ಕೂಡಿ ಸಂತಸದಿಂದ ಉಂಡುಟ್ಟು ನಲಿಯುತ್ತಾರೆ.
ಆ ದಿನ ಸಾಯಂಕಾಲದ ಹೊತ್ತಿಗೆ ಈಗಾಗಲೇ ಕಡಿದು ತಂದಿರುವ ಜಾಲಿಯ ಮುಳ್ಳಿನ ದೊಡ್ಡ ಗಿಡದ ಮೇಲೆ ಇಂಗಳಾರ ಗಿಡದ ಕಟ್ಟಿಗೆ ಹಾಗೂ ಮತ್ತಿತರ ವಸ್ತುಗಳನ್ನು ಇಟ್ಟು ಅದರ ಮೇಲೆ ಗುಡಿಯ ಪೂಜಾರಿಯನ್ನು ಕೂಡಿಸಿ ದೇಗುಲದ ಸುತ್ತ ಸುತ್ತುತ್ತಾರೆ… ಇದನ್ನು ಮುಳ್ಳಿನ ಮೆರವಣಿಗೆ ಎಂದೇ ಹೇಳಬಹುದು.
ತದನಂತರ ಓಕುಳಿಯಾಟವನ್ನು ಆಡಲಾಗುತ್ತದೆ. ಗ್ರಾಮದ ಗಂಡು ಮಕ್ಕಳೆಲ್ಲ ಪರಸ್ಪರ ಬಣ್ಣ ಎರಚಿ ಸಂತಸ ಪಡುತ್ತಾರೆ. ಒಂದಷ್ಟು ಸಮಯ ಓಕುಳಿ ಆಡಿದ ನಂತರ ಊರಿನ ಜನರೆಲ್ಲ ಸೇರಿ ಮತ್ತೆ ಗುಡಿಯತ್ತ ಬಂದು ಕುಳಿತಾಗ ಊರಿನ ಜಂಗಮರು ಇಲ್ಲವೇ ಬ್ರಾಹ್ಮಣರು ಬಂದು ಹೊಸ ಪಂಚಾಂಗವನ್ನು ಪೂಜಿಸಿ ಆ ವರ್ಷದ ವಿಶೇಷ ದಿನಗಳು ಮಳೆ ಬೆಳೆ ಕುರಿತು ಪಂಚಾಂಗದ ಮಾಹಿತಿಯನ್ನು ಜನರಿಗೆ ನೀಡುತ್ತಾರೆ.
ಇದೀಗ ದಿನದ ಕೊನೆಯ ಘಟ್ಟದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿದ ತೊಟ್ಟಲಿನಲ್ಲಿ ಹಾಕಿ ಹನುಮ ಜನನವಾಯಿತು ಎಂದು ಹೇಳಿ, ತೊಟ್ಟಿಲನ್ನು ಪೂಜಿಸಿ ನಂತರ ಹನುಮ ದೇವರಿಗೆ ಪೂಜೆ ಮಂಗಳಾರತಿಯನ್ನು ಮಾಡುತ್ತಾರೆ.
ಮರುದಿನ ಸಾಯಂಕಾಲ ಊರಿನ ಮುಖ್ಯಸ್ಥರ ಮನೆಯ ಆವರಣದಲ್ಲಿ ಇಲ್ಲವೇ ಗುಡಿಯ ಆವರಣದಲ್ಲಿ ಇಟ್ಟಿರುವ ದೊಡ್ಡದಾದ ಹಳಿಬಂಡಿಯನ್ನು ತಂದು ತೊಳೆದು ಪೂಜಿಸಿ ಅದಕ್ಕೆ ಆಂಜನೇಯನ ಪಟವನ್ನು ಕಟ್ಟಿ ಅದನ್ನು ಊರೆಲ್ಲಾ ಸುತ್ತಾಡಿಸಿ ಮೆರವಣಿಗೆ ಮಾಡಲು ಕೊಂಡೊಯ್ದರೆ ಎಲ್ಲ ರೈತರು ಆ ದಿನ ಮುಂಜಾನೆಯೇ ತಮ್ಮ ಮನೆಯ ದನಗಳನ್ನು ಚೆನ್ನಾಗಿ ಮೈ ತೊಳೆದು ಸಿಂಗರಿಸಿ ಅವುಗಳ ಕೋಡಿಗೆ ಬಣ್ಣ ಹಚ್ಚಿ ರಿಬ್ಬನ್ ಗಳನ್ನು ಕೋಡಣಸುಗಳನ್ನು ಕಟ್ಟಿ ಹಳಿ ಬಂಡಿಯ ಹಿಂದೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ.
ಹೀಗೆ ತಮ್ಮ ಕೃಷಿ ಪ್ರಧಾನವಾದ ಬದುಕು ಮತ್ತು ಸಂಭ್ರಮದ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಗ್ರಾಮೀಣ ಭಾಗದ ಯುಗಾದಿ ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಪ್ರತಿಯೊಂದು ಊರಿನಲ್ಲಿಯೂ ಈ ರೀತಿ ಗ್ರಾಮೀಣ ಭಾಗದ ಯುಗಾದಿ ಹಬ್ಬವನ್ನು ಆಚರಿಸಬಹುದು ಪದ್ಧತಿಗಳು ತುಸು ಬೇರೆಯಾದರು ಆಚರಣೆಯ ಮಹತ್ವ ಅದೇ ಆಗಿರುತ್ತದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..


