ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿಗಳ ಕಾರ್ಯಾಲಯ ಹಾಗೂ ಪುನರ್ವಸತಿ ಅಧಿಕಾರಿಗಳ ಕಚೇರಿಗಳ ಮೇಲೆ ವಿಜಯಪುರ ಲೋಕಾಯುಕ್ತ ಪೊಲೀಸರ ತಂಡ ಸೋಮವಾರ ದಾಳಿ ನಡೆಸಿದರು.
ಈ ಎರಡೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸುಮಾರು ೨೫ ಜನ ಲೋಕಾಯುಕ್ತ ಪೊಲೀಸ್ ರ ತಂಡ ದಾಖಲೆ ಪರಿಶೀಲನೆ ನಡೆಸುತ್ತಿದೆ.
ಬೆಳಿಗ್ಗೆಯಿಂದಲೇ ಆರಂಭಗೊಂಡ ತಪಾಸಣೆ ಸಂಜೆಯವರೆಗೂ ಮುಂದುವರೆದಿದೆ.
ಇದು ಮುಂದಿನ ಎರಡು ಮೂರು ದಿನಗಳ ಕಾಲ ದಾಖಲೆ ಪರಿಶೀಲನೆ ನಡೆಯುವ ಸಾಧ್ಯತೆ ಇದೆ.
ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಛೇರಿ ಹಾಗೂ ಪುನರ್ವಸತಿ ಅಧಿಕಾರಿಗಳು ಕಛೇರಿಗಳಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿತರಣೆ, ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಕೊಳ್ಳಬೇಕಾದ ಸಂದರ್ಭದಲ್ಲಿ, ಮುಳುಗಡೆಯಾಗಿರುವ ಹಳ್ಳಿಗಳ ಜನರಿಗೆ ಪುನರ್ವಸತಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸಿಗಬೇಕಾದ ಮೂಲ ಪರಿಹಾರಕ್ಕಿಂತ ನ್ಯಾಯಾಲಯದ ಮೂಲಕ ಹೆಚ್ಚಿನ ಹಣ ಕೊಡಿಸುವುದಾಗಿ ಸಂತ್ರಸ್ತರಿಗೆ ನಂಬಿಸಿ ಮಧ್ಯವರ್ತಿಗಳ ಮೂಲಕ ಲಂಚದ ಹಣದ ಬೇಡಿಕೆ, ಭೂಮಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಮತ್ತು ಮರುಸ್ಥಾಪನೆ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಇರುವುದು, ಭೂ ಬೆಲೆ ಮೌಲ್ಯ ನಿಗದಿಯಲ್ಲಿ ಅಕ್ರಮ, ಪುನರ್ವಸತಿ ಯೋಜನೆಗಳ ನಿಷ್ಕ್ರಿಯತೆ, ಅಕ್ರಮ ಭೂ ಸ್ವಾಧೀನ, ಮಧ್ಯವರ್ತಿಗಳ ಲಾಭಾರ್ಜನೆ, ಅಧಿಕಾರ ದುರ್ಬಳಕೆ ಮತ್ತು ಕರ್ತವ್ಯದಲ್ಲಿನ ನಿರ್ಲಕ್ಷತನ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಎರಡು ಕಚೇರಿಗಳ ಪರಿಶೀಲನೆ, ಶೋಧನೆ ನಡೆಸಲು ವಾರಂಟ್ ಹೊರಡಿಸಿದ್ದಾರೆ.
ಅದರಂತೆ ಗೌರವಾನ್ವಿತ ಲೋಕಾಯುಕ್ತರವರು ಹೊರಡಿಸಿದ ಶೋಧನಾ ವಾರಂಟ್ ಮೇರೆಗೆ ಲೋಕಾಯುಕ್ತ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಆನಂದ ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ ಹಾಗೂ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮೇಲ್ಕಂಡ ಕಛೇರಿಗಳ ಶೋಧನೆ ಕೈಗೊಂಡಿದ್ದು, ದಾಖಲಾತಿಗಳ ಶೋಧನೆ ಕಾರ್ಯ ಮುಂದುವರೆದಿರುತ್ತದೆ ಎಂದು ಲೋಕಾಯುಕ್ತ ಕಚೇರಿಯ ಪ್ರಕಟಣೆ ತಿಳಿಸಿದೆ.

