ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಅವುಗಳ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸಿದ್ಧೇಶ್ವರ ಶಾಲೆಯ ಆವರಣದಲ್ಲಿ ಶನಿವಾರ ಕರ್ನಾಟಕ ಸೇನೆಯ ಸದಸ್ಯರು ಶಾಸಕರನ್ನು ಕಂಡು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಹಸನ್ ನದಾಫ್ ಮಾತನಾಡಿ, ಅನಧಿಕೃತ ಶಾಲೆಗಳು, ಕೋಚಿಂಗ ಸೆಂಟರಗಳ ಹಾವಳಿ ತಾಲ್ಲೂಕಿನಾದ್ಯಂತ ಮಿತಿಮೀರಿದೆ.ಇಂತಹ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದೆ. ಈ ಅನಧಿಕೃತ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂತಹ ವಿದ್ಯಾರ್ಹತೆಗಳನ್ನು ಪಡೆದವರು ಮಾತ್ರ ಶಿಕ್ಷಕರಾಗಿದ್ದಾರೆ. ಇದೊಂದು ವ್ಯಾಪಕ ದಂಧೆಯಾಗಿದ್ದು ಈ ಕೂಡಲೇ ಇಂತಹ ಶಾಲೆಗಳನ್ನು ಬಂದ್ ಮಾಡಿ, ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಬಾರಿ ನಾವು ಈಗಾಗಲೇ ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿದ ಶಾಸಕ ರಾಜುಗೌಡ ಇಂಥ ಶಾಲೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಸೇನೆಯ ಇಬ್ರಾಹಿಂ ಮಸಳಿ, ಇಮಾಮ್ ಮುಲ್ಲಾ, ಹಮೀದ್ ಮುಲ್ಲಾ, ಅಬುಬಕರ್ ತಾಂಬೋಳಿ, ಬೀರು ಹಳ್ಳಿ, ಮಲ್ಲು ಉತ್ನಾಳ, ಕಲ್ಲು ದೇವರಮನಿ, ಅಸ್ತಕಫಿರುಲ್ಲಾ, ದರವೇಶಿ ಇದ್ದರು.

