ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪರಿಶ್ರಮ ಜೀವಿಗಳಾದ ಬಂಜಾರಾ ಸಮಾಜ ಬಾಂಧವರದಲ್ಲಿ ದೈವ ಭಕ್ತಿಗೆ ಕೊರತೆ ಇಲ್ಲ. ಆದರೆ ಉಕ್ಕಲಿ ತಾಂಡಾದ ಬಂಜಾರಾ ಜನರು ದೇವರ ಮೇಲಿನ ಭಕ್ತಿಯ ಜೊತೆಗೆ ಯುಕ್ತಿಗೂ ಆದ್ಯತೆ ನೀಡಬೇಕಿದೆ. ದೇವಸ್ಥಾನ ಕಟ್ಟಲು ತೋರುವ ಆಸಕ್ತಿ ಜೊತೆಗೆ ನಿಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕೆಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವರು ಕಿವಿಮಾತು ಹೇಳಿದರು.
ತಾಲೂಕಿನ ಉಕ್ಕಲಿ ತಾಂಡಾದಲ್ಲಿ ಸೋಮವಾರ ಸಂತ ಸೇವಾಲಾಲ ಮೂರ್ತಿ ಅನಾವರಣ ಹಾಗೂ ಅಂಗನವಾಡಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ನಂತರ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಆದ್ಯತೆ ನೀಡಿದರೆ ನಿಮ್ಮ ಮಕ್ಕಳು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಮಾಜದಲ್ಲಿ ವಿವಿಧ ಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.
ಬಂಜಾರಾ ಸಮಾಜದವರು ದುರ್ಗಾದೇವಿ ಹಾಗೂ ಸಂತ ಸೇವಾಲಾಲ ಅವರ ದೇವಸ್ಥಾನ ಕಟ್ಟುವಲ್ಲಿ ವಿಶೇಷ ಆದ್ಯತೆ ನೀಡುತ್ತೀರಿ. ಈ ಎರಡು ದೇವಸ್ಥಾನಗಳ ಹೊರತಾಗಿ ಅನ್ಯ ದೇವಸ್ಥಾನಗಳನ್ನು ಕಟ್ಟಲು ಮುಂದಾಗಬೇಡಿ. ಬದಲಾಗಿ ಮಕ್ಕಳ ಉನ್ನತ ಶಿಕ್ಷಣ ಕೊಡಿಸಿ, ಶೈಕ್ಷಣಿಕ ಪ್ರಗತಿಗೆ ಆಸಕ್ತಿ ತೋರಬೇಕಿದೆ. ಇದರಿಂದ ನಿಮ್ಮ ಮಕ್ಕಳು ವಿವಿಧ ಹುದ್ದೆಗಳನ್ನು ಪಡೆಯುವ ಮೂಲಕ ನಿಮ್ಮ ಕುಟುಂಬಕ್ಕೆ ಅರ್ಥಿಕ ಪ್ರಗತಿಗೆ ಹಾಗೂ ಸಾಮಾಜಿಕವಾಗಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಬಂಜಾರಾ ಸಮಾಜ ಬಾಂಧವರು ಶೈಕ್ಷಣಿಕವಾಗಿ ಹಿಂದೆ ಇದ್ದೀರಿ ಎಂದಲ್ಲ. ಈಗಾಗಲೇ ನಿಮ್ಮ ಸಮುದಾಯದ ಜನರು ಉನ್ನತ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಕೆಎಎಸ್, ಎಂಜಿನಿಯರ್ ಸೇರಿದಂತೆ ವಿವಿಧ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗಾಗಿ ನಿಮ್ಮ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಹಾಗೂ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದಕ್ಕೂ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಉಕ್ಕಲಿ ಗ್ರಾ.ಪಂ. ಅಧ್ಯಕ್ಷ ನಿಂಗೊಂಡ ಸಿಂದಗಿ, ಉಪಾಧ್ಯಕ್ಷ ಅಪ್ಪಣ್ಣ ಬ್ಯಾಕೋಡ, ಮಾಜಿ ಉಪಾಧ್ಯಕ್ಷ ಅಶೋಕ ಇಂಡಿ, ಗ್ರಾಮದ ಹಿರಿಯ ಮುಖಂಡ ಎ.ಎಂ.ಪಾಟೀಲ, ಬಸಪ್ಪ ಹನುಮಶೆಟ್ಟಿ, ಬಾಳಾಸಾಹೇಬ ಮಸಳಿ, ಬಸವರಾಜ ದೊಡಮನಿ, ರೇವು ರಾಠೋಡ, ಸಂತೋಷ ರಾಠೋಡ, ದಾಮು ನಾಯಕ, ಗಣಪತಿ ನಾಯಕ, ವಿಲಾಸ ರಾಠೋಡ, ಪಾಂಡು ನಾಯಕ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ತಾ.ಪಂ. ಇಒ ಪ್ರಕಾಶ ದೇಸಾಯಿ, ಬಿಇಒ ವಸಂತ ರಾಠೋಡ, ಸಿಡಿಪಿಓ ಶಿಲ್ಪಾ ಹಿರೇಮಠ ಇತರರು ಇದ್ದರು.

