ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾದದು. ಶಿಕ್ಷಕ, ರೈತ, ಸೈನಿಕ ಈ ದೇಶದ ಬೆನ್ನೆಲುಬಗಳು. ತಂದೆ, ತಾಯಿ ಮಾತುಗಳನ್ನು ಕೇಳದ ಕೆಲವೊಂದಿಷ್ಟು ಮಕ್ಕಳು ಶಿಕ್ಷಕರ ಮಾತುಗಳಿಗೆ ಗೌರವ ಕೊಡುತ್ತಾರೆಂದು ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಪ್ರಕಾಶ ನರಗುಂದ ಹೇಳಿದರು.
ಬಿದರಕುಂದಿ ಗ್ರಾಮದ ಶಿವಕುಮಾರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಎಡ್ ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ಪೂರ್ವ ತರಬೇತಿ ಮುಕ್ತಾಯ ಹಾಗೂ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ಗುರುತರ ನಾಗರಿಕ ಸಮಾಜದ ಕರ್ತವ್ಯ. ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಲಿಂಗೈಕ್ಯ ಮಹಾಂತ ಶಿವಯೋಗಿಗಳು ಬಸವ ತತ್ವದ ಪರಿಪಾಲಕರಾಗಿ ಸಮಾಜದಲ್ಲಿ ಅಡಗಿರುವ ವಿವಿಧ ಮೌಡ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ನೆಲೆಯೂರಿದವರು. ಪೂಜ್ಯರು ಉತ್ತಮ ಪ್ರವಚನಕಾರರಾಗಿ, ಸಂಗೀತಗಾರರಾಗಿ, ಕಲಾವಿದರ ಆಶ್ರಯದಾತರಾಗಿ, ಬಸವ ಜಂಗಮ ಜ್ಯೋತಿಯಾಗಿ ನುಡಿದಂತೆ ನಡೆದ ನಿಜ ಶರಣರು. ತಂದೆ ನೀನು ತಾಯಿ ನೀನು ಎಂದು ಬಸವೇಶ್ವರನನ್ನು ತಮ್ಮೊಳಗೆ ತುಂಬಿಕೊಂಡು, ದೀನ ದಲಿತರ ಜನಾಂಗಗಳ ಮನೆಗೆ ಹೋಗಿ ಅಪ್ಪ ಬೊಪ್ಪ ಎಂದು ಎಲ್ಲರನ್ನು ಅಪ್ಪಿಕೊಂಡವರು. ವಿದ್ಯಾರ್ಥಿಗಳು ಗುರು, ಲಿಂಗ, ಜಂಗಮ ಇವುಗಳ ಬಗ್ಗೆ ಅರಿತುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಶರಣರು ಬರೆದ ವಚನಗಳನ್ನು ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಯ ಆರ್.ಬಿ.ಗುಗ್ಗುರಿ ಮಾತನಾಡಿ, ಈ ನಾಡಿಗೆ ಶಿಕ್ಷಕರ ಕೊಡುಗೆ ಅಪಾರವಾದದ್ದು. ವಿನಯ, ಪ್ರೀತಿ, ಮಮತೆ, ತ್ಯಾಗ ಮುಂತಾದ ಮಾನವೀಯ ಗುಣಗಳನ್ನು ಶಿಕ್ಷಕರು ಹೊಂದಿರುತ್ತಾರೆ. ಎರಡು ತಿಂಗಳವರೆಗೆ ಎಂ.ಜಿ.ವ್ಹಿ.ಸಿ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಬಂದು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರಿಯರಾದವರು. ಇವರ ಬದುಕು ಬಂಗಾರವಾಗಲಿ ಎಂದು ಹಾರೈಸಿದರು.
ಈ ವೇಳೆ ಎಚ್.ಡಿ.ನದಾಫ್, ಬಿ.ಎಸ್.ಓದಿಸೋಮಠ, ಎಂ.ಎಸ್.ಮೇಟಿ, ಕೆ.ಪಿ.ಬಿರಾದಾರ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿರಿದ್ದರು. ಪ್ರಶಿಕ್ಷಣಾರ್ಥಿಗಳ ಪಾಠ ಬೋಧನೆಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆರ್. ಡಿ. ಗುಡಿಮನಿ ಸ್ವಾಗತಿಸಿದರು, ಎಂ.ಪಿ ದೇಶಪಾಂಡೆ ನಿರೂಪಿಸಿದರು, ಎಂ.ಎಚ್.ಹಂಡಿ ವಂದಿಸಿದರು.

