ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಯಾರಾದರೂ ದುಶ್ಚಟಗಳಿಗೆ ಬಲಿಯಾದರೆ ಅವರ ವೈಯಕ್ತಿಕ ಬದುಕು, ಅವರ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹಂಗರಗಿ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಪಟ್ಟಣದ ಲಕ್ಷ್ಮೀ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕ್ರತಿ ಆಭಿಯಾನ ಪಾದಯಾತ್ರೆಯಲ್ಲಿ ಜರುಗಿದ
ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲಕಲ್ಲದ ಮಹಾಂತ ಸ್ವಾಮಿಗಳು ಸಮಾಜ ಮುಖಿಯಾಗಿ ಕೆಲಸ ಮಾಡುವದರ ಜೊತೆಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆನ್ನುವುದು ಉದ್ದೇಶವಾಗಿತ್ತು. ಅವರ ಮಹಾಂತ ಜೋಳಿಗೆ ಕಾರ್ಯಕ್ರಮ ರಾಜ್ಯದಲ್ಲಿ ವಿನೂತನವಾದ ಕಾರ್ಯಕ್ರಮವಾಗಿತ್ತು. ತಂಬಾಕು, ಮಧ್ಯವ್ಯಸನ ಜೂಜಾಟದಂಥ ಚಟಗಳು ಅದೆಷ್ಟೋ ಕುಟುಂಬಗಳನ್ನು ನಾಶ ಮಾಡಿದ ಉದಾಹರಣೆ ನಮ್ಮ ಮುಂದೆ ಇರುವುದರಿಂದ ಹಿರಿಯರು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚನೆ ಮಾಡುವ ಮೂಲಕ ನೈತಿಕ ಸಮಾಜವನ್ನು ನಿರ್ಮಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜವನ್ನು ನಿರ್ಮಿಸಬಹುದು. ಬಸವ ಜನಿಸಿದ ಪುಣ್ಯಭೂಮಿಯಿಂದ ಇಡೀ ನಾಡಿಗೆ ಹೊಸ ಸಂದೇಶ ಹೋಗಬೇಕಾಗಿದೆ.ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ಪರಶುರಾಮ ಅಡುಗಿಮನಿ ಮಾತನಾಡಿದರು. ಯಮನಪ್ಪ ಮಿಣಜಗಿ ಸ್ವಾಗತಿಸಿದರು. ಚಂದ್ರು ಬೂದಿಹಾಳ ಸ್ವಾಗತ ಗೀತೆ ಹಾಡಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಈರಣ್ಣ ಕಾರಕೂನ ವಂದಿಸಿದರು.
ಪಾದಯಾತ್ರೆ
ಲಕ್ಷ್ಮೀನಗರ ಬಡಾವಣೆಯಲ್ಲಿ ಬಸವ ಸಂಸ್ಕೃತಿ ಯಾತ್ರೆಯ ಜಾಗೃತಿ ಪ್ರಚಾರ ಸಲುವಾಗಿ ಪಾದಯಾತ್ರೆ ಶ್ರೀಗಳ ಸಾನಿಧ್ಯದಲ್ಲಿ ಜರುಗಿತು. ಪಾದಯಾತ್ರೆಯಲ್ಲಿ ಚಂದ್ರು ಹದಿಮೂರ, ಪ್ರಕಾಶ ಕೊಂಡಿಕೊಪ್ಪ, ರಾಜು ಪಟ್ಟಣಶೆಟ್ಟಿ, ಶ್ರೀಶೈಲ ಕುಂಬಾರ, ಗಣಪತಿ ಬಡಿಗೇರ, ಜಕ್ಕವ್ವ ಮಟ್ಯಾಳ, ರೇಖಾ ಮಿಣಜಗಿ, ಅಂಬುತಾಯಿ ಮಿಣಜಗಿ, ಶ್ರೀದೇವಿ ಬಿದರಕುಂದಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

