ಇಂದು ಬಸವನಬಾಗೇವಾಡಿಯಲ್ಲಿ ಬಸವ ಸಂಸ್ಕ್ರತಿಯ ಪೂರ್ವಭಾವಿ ಸಭೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಲಿಂಗಾಯತ ಮಠಾಧೀಶರರ ಒಕ್ಕೂಟದ ಮುಂದಾಳತ್ವ ಹಾಗೂ ನಾಡಿನ ಎಲ್ಲ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಸೆ. ೧ ರಿಂದ ಅ.೩೧ ರವರೆಗೆ ರಾಜ್ಯದಾದ್ಯಂತ ಬಸವ ಸಂಸ್ಕ್ರತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸೆ.೧ ರಂದು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಈ ಅಭಿಯಾನ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಆ.೩ ರಂದು ಸಂಜೆ ೪ ಗಂಟೆಗೆ ಬಸವೇಶ್ವರ ದೇವಾಲಯದ ಸಿಬಿಎಸ್ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ನಾಡಿನ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಅಭಿಯಾನದ ಯಶಸ್ವಿಗೆ ಸಮಾಲೋಚನೆ ಮಾಡುವ ಸಲುವಾಗಿ ವಿವಿಧ ಬಸವಪರ ಸಂಘಟನೆಗಳ, ಕನ್ನಡಪರ ಸಂಘಟನೆಗಳ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ, ಸದಸ್ಯರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪೂರ್ವಭಾವಿ ಸಭೆಗೆ ನಾಗನೂರಿನ ಅಲ್ಲಮಪ್ರಭು ಸ್ವಾಮೀಜಿ, ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಯರನಾಳದ ಗುರುಸಂಗನಬಸವ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಐತಿಹಾಸಿಕವಾಗಿ ಜರುಗಲಿರುವ ಬಸವ ಸಂಸ್ಕ್ರತಿಯ ಅಭಿಯಾನದ ಬಸವ ರಥಯಾತ್ರೆಗೆ ಭವ್ಯವಾಗಿ ಚಾಲನೆ ನೀಡುವದು ಈ ಭಾಗದ ಜನತೆ ಜವಾಬ್ದಾರಿಯಾಗಿದೆ. ಈ ಭವ್ಯ ಕಾರ್ಯಕ್ರಮವನ್ನು ನಾಡಿನ ಜನರು ಕಣ್ಣುತುಂಬಿಕೊಳ್ಳುವಂತೆ ಮಾಡಬೇಕಿದೆ. ಈ ಸಂಸ್ಕ್ರತಿಯ ಅಭಿಯಾನದ ಜಾಗೃತಿಯನ್ನು ನಿತ್ಯವೂ ಪಟ್ಟಣದ ಪ್ರತಿಯೊಂದು ಗಲ್ಲಿ ಗಲ್ಲಿಯಲ್ಲಿ ಬೆಳಗ್ಗೆ ಪಾದಯಾತ್ರೆ ಮಾಡುವ ಮೂಲಕ ಮಾಡಲಾಗುತ್ತಿದೆ. ಈ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತಾಗಬೇಕು. ಜನತೆಯ ಸಹಕಾರದೊಂದಿಗೆ ಬಸವ ಸಂಸ್ಕ್ರತಿಯ ಅಭಿಯಾನ ಖಂಡಿತ ಯಶಸ್ವಿಯಾಗಲಿದೆ ಎಂದರು.
ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ ಬಸವೇಶ್ವರರನ್ನು ರಾಜ್ಯದ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿದೆ. ಲಿಂಗಾಯತ ಮಠಾಧೀಶರರ ಒಕ್ಕೂಟವು ಇದು ಕೇವಲ ಘೋಷಣೆಯಾಗಿ ಉಳಿಯಬಾರದು. ಬಸವ ಸಂಸ್ಕ್ರತಿ ನಾಡಿನ ಜನಮಾನಸಕ್ಕೆ ಮುಟ್ಟಿಸಬೇಕೆಂಬ ಒಕ್ಕೂಟದ ಸದುದ್ದೇಶದ ಫಲಶ್ರುತಿಯೇ ಬಸವ ಸಂಸ್ಕ್ರತಿ ಅಭಿಯಾನ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನದ ರಥಯಾತ್ರೆ ಸಂಚರಿಸಲಿದೆ. ಬಸವೇಶ್ವರರು ಜನಿಸಿದ ಈ ನೆಲದಿಂದ ಈ ಅಭಿಯಾನ ಆರಂಭವಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವೇಶ್ವರ ಸೇವಾ ಸಮಿತಿಯ ಬಸವರಾಜ ಹಾರಿವಾಳ, ಎಂ.ಜಿ.ಆದಿಗೊಂಡ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ಶೇಖರಗೌಡ ಪಾಟೀಲ, ಉಮೇಶ ಹಾರಿವಾಳ, ಸಂಕನಗೌಡ ಪಾಟೀಲ, ಸಂಗಪ್ಪ ವಾಡೇದ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮಹೇಶ ಹಿರೇಕುರಬರ, ಲಾಳೇಸಾ ಕೊರಬು ಇತರರು ಇದ್ದರು.

