ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶ್ರಾವಣ ಮಾಸದ ಪ್ರಯುಕ್ತ, ತಮ್ಮ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಸಾಧ್ಯವಾಗದ ಬಡವರಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಹಮ್ಮಿಕೊಂಡಿದ್ದೇನೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಮಾಜ ಸೇವಕ ಅಯೂಬ ಮನಿಯಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಂದೆ ತಾಯಿಗಳ ಸ್ಮರಣಾರ್ಥ ನಾನು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಕಳೆದ ೧೦ ವರ್ಷಗಳಿಂದ ಬಡವರ ಸೇವೆ ಮಾಡುತ್ತ ಬಂದಿದ್ದೇನೆ. ಪ್ರತೀ ವರ್ಷ ರಂಜಾನ ಹಬ್ಬದಲ್ಲಿ ಈ ಸೇವೆಯನ್ನು ಹಮ್ಮಿಕೊಳ್ಳುತ್ತಿದ್ದೆ, ಈ ಬಾರಿ ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳುವ ಇಚ್ಛೆಯಾಗಿದ್ದರಿಂದ ಈ ಸೇವೆಯನ್ನು ಅ೯ ರಿಂದ ಆಯೋಜಿಸಿದ್ದೇನೆ. ಅ೯ ರಂದು ತಾಳಿಕೋಟೆ ಪಟ್ಟಣದ ಅನುಗ್ರಹ ಆಸ್ಪತ್ರೆಯಲ್ಲಿ ತಪಾಸಣೆ ಹಮ್ಮಿಕೊಂಡಿದ್ದು ತಾಳಿಕೋಟೆ ಭಾಗದ ಜನತೆ ಅಲ್ಲಿ ತಪಾಸಣೆ ಮಾಡಿಸಬಹುದು. ಅ೧೦ ರಂದು ಮುದ್ದೇಬಿಹಾಳ ಪಟ್ಟಣದಲ್ಲಿ ತಪಾಸಣೆ ಕಾರ್ಯ ನಡೆಯಲಿದ್ದು, ನಾಲತವಾಡ ಮತ್ತು ಮುದ್ದೇಬಿಹಾಳ ಭಾಗದವರು ಇಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ತಪಾಸಣೆಯ ಬಳಿಕ ಶಸ್ತç ಚಿಕಿತ್ಸೆ ಅವಶ್ಯವಿದ್ದವರಿಗೆ ನಾವೇ ವಾಹನದ ಮೂಲಕ ವಿಜಯಪುರದವರೆಗೆ ಕರೆದೊಯ್ದು ಶಸ್ತç ಚಿಕಿತ್ಸೆ ಮಾಡಿಸುತ್ತೇವೆ. ಕನ್ನಡಕದ ಅವಶ್ಯಕತೆ ಇರುವವರಿಗೆ ಕನ್ನಡಕಗಳನ್ನೂ ಸಹ ನೀಡಿ, ನನಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರ ಆಶೀರ್ವಾದವನ್ನು ಪಡೆಯುತ್ತೇನೆ. ಆಸಕ್ತರು ಇಲ್ಲಿನ ದಾನೇಶ್ವರಿ ಪೆಟ್ರೋಲ್ ಪಂಪ್ ಎದುರಿಗಿರುವ ಮನಿಯಾರ್ ಕಾಂಪೆಕ್ಸ್ ನ ನಮ್ಮ ಕಚೇರಿಯಲ್ಲಿ ಹೆಸರು ನೊಂದಾಯಿಸಬಹುದು ಎಂದರು.
ಈ ವೇಳೆ ವಿಜಯಪುರದ ಗಣ್ಯ ಉದ್ಯಮಿ ರೂಪ್ಸಿಂಗ್ ಲುನಾರಿ ಅವರು ಮಾತನಾಡಿ, ಮನಿಯಾರ್ ಅವರ ಸೇವೆ ಶ್ಲಾಘನೀಯ. ಅವರಿಗೆ ಬಡವರ ಸೇವೆ ಮಾಡುವದೆಂದರೆ ಎಲ್ಲಿಲ್ಲದ ಖುಷಿ. ಪ್ರತೀ ವರ್ಷ ರಂಜಾನ್ ಹಬ್ಬದಲ್ಲಿ ಬಡ ಮುಸ್ಲಿಂ ಕುಟುಂಬಕ್ಕೆ ಕಿಟ್ ಕೊಡುವದು, ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಮಾಡಿಸುವದು ಸೇರಿದಂತೆ ಹಲವಾರು ಮಾದರಿಯ ಕಾರ್ಯಕ್ರಮಗಳನ್ನು ಜಾತ್ಯಾತೀತವಾಗಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಶ್ರಾವಣ ಮಾಸದಲ್ಲಿ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಹಮ್ಮಿಕೊಂಡಿದ್ದು ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಯೂಬ ಅವರ ಪುತ್ರ ಅಫ್ತಾಬ್ ಮನಿಯಾರ ಮಾತನಾಡಿ, ನಮ್ಮ ತಂದೆ ಬಡವರ ಸೇವೆಯಲ್ಲಿ ತಮ್ಮ ತಂದೆ ತಾಯಿಯರನ್ನು ಕಾಣುತ್ತಾರೆ. ಅವರ ಆದರ್ಶಗಳನ್ನು ನಾನೂ ಸಹ ಮೈಗೂಡಿಸಿಕೊಂಡು ಅವರಂತೆ ಸಾಗುವೆ ಎಂದರು.
ಈ ವೇಳೆ ಗಣ್ಯ ಉದ್ದಿಮೆದಾರ ಫಯಾಜ ಸಾಸನೂರ, ಹಾಜಿಮಹೆಬೂಬ್ ಗೋಲಂದಾಜ, ದಾದಾ ಎತ್ತಿನಮನಿ, ನಿವೃತ್ತ ಉಪನ್ಯಾಸಕ ಐ.ಎಲ್.ಮಮದಾಪೂರ, ಯುಸೂಫ್ ಸಾತಿಹಾಳ, ಮಹೆಬೂಬ ಹಡಲಗೇರಿ, ಬಾಬಾಯಕೀನ (ಮುಂಬೈ) ಸೇರಿದಂತೆ ಹಲವರು ಇದ್ದರು.

