ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವಣ್ಣನವರ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಡಾ.ಮಹಾಂತ ಶಿವಯೋಗಿ ಶ್ರೀಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜೋಳಿಗೆ ಹಾಕಿಕೊಂಡು ಊರುರು ಸುತ್ತಿ ನಿಮ್ಮ ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ವ್ಯಸನಿಗಳ ಮನ ಪರಿವರ್ತನೆ ಮಾಡುವುದುಕ್ಕೆ ತಮ್ಮ ಜೀವನವನ್ನು ಉತ್ತಮ ಸಮಾಜದ ನಿರ್ಮಾಣಕ್ಕೆ ಮೀಸಲಿರಿಸಿದ್ದು ನಮಗೆ ಮಾದರಿ ಮತ್ತು ಮತ್ತು ಸಮಾಜಕ್ಕೆ ಶ್ರೇಷ್ಠ ಕೊಡುಗೆ ಎಂದು ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಹೇಳಿದರು.
ತಾಲೂಕು ಆಡಳಿತದಿಂದ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1. ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆದೇಶಿಸಿದ್ದು, ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ರಾಜ್ಯ ಯುವ ಪಶಸ್ತಿ ಪುರಸ್ಕೃತ, ಚಿಂತಕ ಅರವಿಂದ ಕೊಪ್ಪ ಮಾತನಾಡಿ ಆಕಾರದಲ್ಲಿ ಇರುವ ಮನುಷ್ಯನ ಒಳಗೆ ಮತ್ತು ಹೊರಗೆ ನಿಜ ಸ್ವರೂಪದ ಮನುಷ್ಯನನ್ನಾಗಿ ಮಾಡುವಲ್ಲಿ ಮಹಾಂತ ಶ್ರೀಗಳ ಕೊಡುಗೆ ಅನನ್ಯ ಅಂಥವರನ್ನ ಸ್ಮರಿಸುವ ಈ ಕಾರ್ಯಕ್ರಮ ಮಾಡಿದ್ದು ಬಹಳಷ್ಟು ಶ್ಲಾಘನೀಯ.
ಶ್ರೀ ಮಹಾಂತ ಶಿವಯೋಗಿಗಳು ಮನುಷ್ಯನ ಬಾಹ್ಯ, ಆಂತರಿಕ ಮನಃ ಪರಿವರ್ತನೆಗೆ ಆ ಕಾಲವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಜೀವನದಲ್ಲಿ ಸದಾಚಾರ, ಉತ್ತಮ ನಡತೆ, ಮಾತು ಮತ್ತು ಜ್ಞಾನದ ಮಹತ್ವವನ್ನು ಸಾರುವ ನುಡಿ. ಒಳ್ಳೆಯದು ಕೆಟ್ಟದ್ದು ಎರಡು ಕೂಡ ನಮ್ಮ ಹತ್ತಿರವೇ ಇವೆ ಇದರಲ್ಲಿ ಒಳ್ಳೆಯದನ್ನ ಆಯ್ಕೆ ಮಾಡಿಕೊಂಡು ದುಶ್ಚಟಗಳ ದಾಸನಾಗದೆ ಹೆತ್ತ ತಂದೆ ತಾಯಿ ಸೇರಿದಂತೆ ವಿದ್ಯೆ ಕಲಿಸಿದ ಗುರುಗಳು ಮತ್ತು ಶಾಲೆಗೆ ಕೀರ್ತಿ ತರುವಂತಾಗಬೇಕು. ನಾವು ಇಂದು ಯುವ ಜನತೆಯನ್ನು ಉತ್ತಮ ಮಾರ್ಗಕ್ಕೆ ತರಲು, ಶಿಕ್ಷಕರು ಪೋಷಕರು ಸಮಾಜದ ಹಿರಿಯರು ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ, ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಮುಖ್ಯಾಧಿಕಾರಿ ವೀರೇಶ ಹಟ್ಟಿ, ಪ್ರಾಚಾರ್ಯ ಎಂ.ಎಸ್. ಗರಸಂಗಿ, ಪಿಎಸ್ಐ ಎಂ.ಬಿ. ಬಿರಾದಾರ, ವೈದ್ಯಾಧಿಕಾರಿ ಡಾ.ಲಕ್ಷ್ಮೀ ತೆಲ್ಲೂರು ಸಮಾಜ ಕಲ್ಯಾಣ ಅಧಿಕಾರಿ ಮನು ಪತ್ತಾರ, ರವಿ ಗೊಳಸಂಗಿ, ಮಹೇಶ್ ತುಂಬರಮಟ್ಟಿ, ಶ್ರೀಕಾಂತ ಗಣಿ, ಪ್ರದೀಪಗೌಡ ಪಾಟೀಲ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

