ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಸದಸ್ಯರು, ಠೇವುದಾರರು, ನಿರ್ದೇಶಕ ಮಂಡಳಿ ಸೇರಿದಂತೆ ಗ್ರಾಹಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ್ ಹೇಳಿದರು.
ಪಟ್ಟಣದ ಕಲ್ಮೇಶ್ವರ ಮಂಗಲ ಭವನದಲ್ಲಿ ಗುರುವಾರ ಜರುಗಿದ ಸಮೃದ್ಧಿ ಸಹಕಾರ ಸಂಘದ ೪ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಪ್ರಗತಿಗೆ ಕಳೆದ ೩ ವರ್ಷಗಳಿಂದ ನೀಡುತ್ತಿರುವ ಸದಸ್ಯರ ಸಹಕಾರ ಶ್ಲಾಘನೀಯ ಎಂದರು.
ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಒಟ್ಟು ೯೦೨ ಸದಸ್ಯ ಬಲದ ಸಂಘವು ೧೦.೨೪ ಲಕ್ಷ ಶೇರು ಬಂಡವಾಳದೊಂದಿಗೆ ಕಾರ್ಯಾರಂಭ ಮಾಡಿ ಈಗ ೯೩.೪೬ ಲಕ್ಷ ಶೇರು ಬಂಡವಾಳದೊಂದಿಗೆ ಸುಮಾರು ೭.೮೦ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ೨೦೨೪-೨೫ನೇ ಸಾಲಿನಲ್ಲಿ ೩೬.೧೬ ಕೋಟಿ ವ್ಯವಹಾರ ನಡೆಸಿ ೩೦.೧೭ ಲಕ್ಷ ರೂ.ಗಳ ನಿವ್ವಳ ಆದಾಯ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಠೇವುಗಳನ್ನು ರೂ. ೧೦ ಕೋಟಿಗೆ ಹೆಚ್ಚಿಸಿಕೊಳ್ಳುವುದು. ಶೇರು ಬಂಡವಾಳವನ್ನು ರೂ. ೧.೫೦ ಕೋಟಿಗಳಿಗೆ ಹೆಚ್ಚಿಸಿಕೊಳ್ಳುವುದು. ಹಾಗೂ ದುಡಿಯುವ ಬಂಡವಾಳವನ್ನು ರೂ.೧೪ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಸಂಘದ ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆಯ ಹಿಂದೆ ಸದಸ್ಯರ, ಗ್ರಾಹಕರ ಸದ್ಭಾವನೆ ಸಹಕಾರ, ಆಡಳಿತ ಮಂಡಳಿ ಸದಸ್ಯರ ಕಳಕಳಿ ಪ್ರಾಮಾಣಿಕ ಸೇವೆ ಹಾಗೂ ಮಾರ್ಗದರ್ಶನ, ಸಿಬ್ಬಂದಿಗಳ ಅವಿರತ ಪರಿಶ್ರಮ ಹಾಗೂ ಸೇವಾ ಮನೋಭಾವನೆಗಳೇ ಮುಖ್ಯ ಕಾರಣಗಳಾಗಿವೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ, ಚೈತನ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ಹಾಗೂ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ.ಎಮ್. ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಎಸ್.ಕೋರಿ, ಡಾ: ಸಂದೀಪ ನಾಯಿಕ್, ವ್ಹಿ.ಕೆ.ಪಾಟೀಲ, ಲತೀಫ್ ನಧಾಫ್, ವಿಜಯಲಕ್ಷ್ಮಿ ಮೆಟಗಾರ, ಗಂಗು ಬೇವನೂರ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಪ್ರಭುದೇವ ಹಿರೇಮಠ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಎ.ಕೆ.ಹಿರೇಮಠ, ವೆಂಕಟೇಶ ಕುಲಕರ್ಣಿ, ಉಮೇಶ ಹಳಪಾಣಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ್, ಸುಭಾಸ್ ಜಾಧವ, ಶಕುಂತಲಾ ಬಿರಾದಾರ ಸೇರಿದಂತೆ ವ್ಹಿ.ಜಿ.ಚಾವರ, ಬಸಪ್ಪ ಕೋರಿ, ಸಿ.ಬಿ.ಬುದ್ನಿ, ಬಿ.ಆರ್.ಬಿರಾದಾರ, ಅಯ್ಯನಗೌಡ ಬಿರಾದಾರ, ಶಾಂತಪ್ಪ ಪಡನೂರ ಸಹಿತ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.

