ಭೀಮೆಯ ಒಡಲಿಗೆ ಮತ್ತೆ ಒಂದು ಲಕ್ಷ ಕ್ಯೂಸೆಕ್ಸ್ ನೀರು
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ರೇವತಗಾಂವ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಜಲಾಶಯದಿಂದ ಮಂಗಳವಾರದಂದು ಮಧ್ಯಾಹ್ನ ಒಂದು ಲಕ್ಷ ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ನೀರು ಹರಿಬಿಟ್ಟಿರುವುದರಿಂದ ಚಡಚಣ ತಾಲೂಕಿನಲ್ಲಿ ಭೀಮಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಇದರಿಂದಾಗಿ ಉಮರಜ, ಉಮರಾಣಿ, ಶಿರನಾಳ, ಹಿಂಗಣಿ, ಧೂಳಖೇಡ ಮುಂತಾದ ಗ್ರಾಮಗಳ ಬಳಿ ಇರುವ ಬ್ರಿಜ್ ಕಮ್ ಬಾಂದಾರಗಳು ಜಲಾವೃತಗೊಂಡಿವೆ. ಇದರಿಂದಾಗಿ ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಉಮರಜ, ಉಮರಾಣಿ, ಹಿಂಗಣಿ, ಶಿರನಾಳ ಕೆಲವು ಹಳ್ಳಿಗಳ ಸಂಪರ್ಕ ಕಳೆದುಕೊಂಡಿವೆ.
ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ಭೀಮಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿ, ಸುರಕ್ಷಿತ ತಾಣಗಳಿಗೆ ಜನರು ತಮ್ಮ ಸಾಮಾನು ಹಾಗೂ ಜಾನುವಾರಗಳೊಂದಿಗೆ ತೆರಳಲು ಸೂಚಿಸಲಾಗಿದೆ ಎಂದು ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದ್ದಾರೆ.
ಪಂಪ್ಸೆಟ್ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ರೈತರು
ಈ ಮಧ್ಯ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದಾಗಿ ಎಂಟೂ ಬ್ಯಾರೇಜುಗಳ ಮೇಲೆ ಸುಮಾರು ಮೂರ್ನಾಲ್ಕು ಅಡಿಗಿಂತಲೂ ಹೆಚ್ಚು ನೀರು ಹರಿಯುತ್ತಿದೆ. ಇದರಿಂದಾಗಿ ಈ ಬಾಂದಾರುಗಳ ಮೂಲಕ ಕರ್ನಾಟಕದಿಂದ ಮಹಾರಾಷ್ಟç ಮತ್ತು ಮಹಾರಾಷ್ಟ್ರದಿಂದ ಕರ್ನಾಟಕದ ಗ್ರಾಮಗಳಿಗೆ ದಿನ ನಿತ್ಯದ ಕೃಷಿ ಮತ್ತು ವ್ಯವಹಾರಗಳಿಗಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಿಗದಿತ ಗ್ರಾಮಗಳಿಗೆ ತೆರಳಲು ರೈತರು ಮತ್ತು ಸಾರ್ವಜನಿಕರು ಹಲವಾರು ಕಿ.ಮೀ ಸುತ್ತು ಹಾಕಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹಲವಾರು ಕಡೆಗಳಲ್ಲಿ ರೈತರ ಪಂಪಸೆಟ್ಗಳು ನೀರು ಏರಿಕೆಯಾದ ಕಾರಣ ನದಿಯಲ್ಲಿ ಮುಳುಗಡೆಯಾಗಿವೆ. ಕೆಲವು ಕಡೆ ಪಂಪಸೆಟ್ಗಳು ಕೊಚ್ಚಿಕೊಂಡು ಹೋಗಿವೆ. ಭೀಮಾ ನದಿಯಲ್ಲಿ ಮಹಾಪುರ ಉಂಟಾಗುವ ಮಾಹಿತಿ ತಿಳಿದ ಇನ್ನುಳಿದ ಗ್ರಾಮಗಳ ರೈತರು ನದಿ ಪಾತ್ರದಲ್ಲಿ ಅಳವಡಿಸಲಾಗಿದ್ದ ಪಂಪ್ಸೆಟ್ಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ನೀರು ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆಗಳು ನೀರು ಪಾಲಾಗುವ ಆತಂಕ ಎದುರಾಗಿದೆ.

