ವಿಜಯಪುರದಲ್ಲಿ ನಡೆದ “ಡಿಜಿ ಇಮೇಜ್” ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶದಲ್ಲಿ ಸಚಿವದ್ವಯರ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ, ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಐತಿಹಾಸಿಕ ವಿಜಯಪುರ ನಗರದಲ್ಲಿ ಎರಡು ದಿನಗಳ ಕಾಲ “ಡಿಜಿ ಇಮೇಜ್” ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ ಮತ್ತು ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಬೃಹತ್ ಡಿಜಿ ಇಮೇಜ್ ಪ್ರದರ್ಶನದ ಉದ್ಘಾಟನೆಯನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ್ ಉದ್ಘಾಟಿಸಿ ಮಾತನಾಡುತ್ತ, ಸರ್ಕಾರದ ಮಟ್ಟದಲ್ಲಿ ಈಗಾಗಲೇ ರಾಜ್ಯದ ಛಾಯಾಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸೇರಿಸಿ ಎಲ್ಲ ಸೌಲಭ್ಯಗಳನ್ನು ದೊರಕಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಸಂಘಟನೆ ಬಹುದಿನಗಳ ಬೇಡಿಕೆಯಂತೆ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸುವಲ್ಲಿ ಸದನದಲ್ಲಿ ದ್ವನಿಯೆತ್ತಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಮುಂದಾಗುವೆ ಎಂದು ತಿಳಿಸಿದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜ್ಯೋತಿ ಬೆಳಗಿಸಿ ಮಾತನಾಡುತ್ತ, ನಿಮ್ಮ ಬೇಡಿಕೆಯಂತೆ ಜಿಲ್ಲಾ ಸಂಘಕ್ಕೆ ಛಾಯಾ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಮಂಜೂರಾತಿ ಮಾಡಿಸಿ ಶಾಸಕರ ನಿಧಿಯಿಂದ ೧೦ಲಕ್ಷ ರೂಪಾಯಿ ಈ ಕೂಡಲೇ ಮಂಜೂರಾತಿ ಮಾಡುವುದಾಗಿ ಆಶ್ವಾಸನೆ ನೀಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿದರು.
ಅತಿಥಿಗಳಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ, ಹರ್ಷಗೌಡ ಪಾಟೀಲ್, ಪ್ರಕಾಶ ಚವ್ಹಾಣ, ಎ. ಎಂ. ಮುರಳಿ, ಕಿರಣ ಅಕ್ಕಿ, ಗಿರಿರಾಜ ಕಾರವಾ, ಉಮೇಶ ಹಿರೇದೇಸಾಯಿ, ಓಂ ಪ್ರಕಾಶ ಇನ್ನಿತರರು ಉಪಸ್ಥಿತರಿದ್ದರು
ದಿನಾಂಕ ೨೭ ರಂದು ಬೆಳಿಗ್ಗೆ ಛಾಯಾಗ್ರಾಹಕರ ರಾಜ್ಯಮಟ್ಟದ ಬೃಹತ್ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿದ ಜವಳಿ, ಕಬ್ಬು ಅಬ್ಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಮಾತನಾಡುತ್ತಾ, ನಿಮ್ಮ ಸಂಘಟನೆಯ ಬಹುದಿನಗಳ ಬೇಡಿಕೆಯಂತೆ ಅಕಾಡೆಮಿ ಸ್ಥಾಪಿಸುವಲ್ಲಿ ಶಕ್ತಿಮೀರಿ ಶ್ರಮಿಸುವೆ. ವಿಜಯಪುರ ನಗರದಲ್ಲಿ ಛಾಯಾಚಿತ್ರಗಾರರಿಗೆ ಸರ್ಕಾರದಿಂದ ನಿವೇಶನ ನೀಡುವ ವ್ಯವಸ್ಥೆ ಮಾಡುವುದರ ಜೊತೆಗೆ ನನ್ನ ಅನುದಾನದಲ್ಲಿ ಭವನಕ್ಕೆ ಸೂಕ್ತ ಹಣಕಾಸು ನೆರವು ನೀಡುವದಾಗಿ ಘೋಷಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷ ಹೆಚ್ ಎಸ್ ನಾಗೇಶ್ ವಹಿಸಿ, ಸಂಘಟನೆಯ ಬಲವರ್ಧನೆಯ ಬಗ್ಗೆ ಮಾಹಿತಿ ನೀಡಿದರು ಡಿಜಿಟಲ್ ಯುಗದಲ್ಲಿ ನಮ್ಮ ಜೀವನ ಅತಂತ್ರವಾಗಿದೆ ಸರ್ಕಾರ ನಮ್ಮ ನೆರವಿಗೆ ಬರಬೇಕು. ನಾವೆಲ್ಲರೂ ನಿರುದ್ಯೋಗಿಗಳಾಗಿದ್ದೇವೆ. ನಮಗೆ ಆದಷ್ಟು ಬೇಗನೆ ಅಕಾಡೆಮಿ ಸ್ಥಾಪಿಸಿ ನಮ್ಮನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಚವ್ಹಾಣ ಮಾತನಾಡಿ, ರಾಜ್ಯದ ನಾನಾ ಭಾಗಗಳಿಂದ ೧೫ ಸಾವಿರಕ್ಕೂ ಹೆಚ್ಚು ವೃತ್ತಿ ಬಾಂದವರು ಬಂದು ಬೃಹತ್ ಡಿಜಿ ಇಮೇಜ್ ಹಾಗೂ ಸಮಾವೇಶ ಯಶಸ್ವಿಮಾಡಿದ್ದು ಐತಿಹಾಸಿಕ ಮತ್ತು ನಮಗೆ ಸರ್ಕಾರ ಅಕಾಡೆಮಿ ಸ್ಥಾಪಿಸಿ ನೆರವು ನೀಡುವಂತೆ ವಿಷಯ ಮಂಡಿಸಿದರು.
ಈ ಎರಡು ದಿನ ನಡೆದ ಡಿಜೆ ಇಮೇಜ್ ವಸ್ತು ಪ್ರದರ್ಶನದಲ್ಲಿ ಅಂತರ್ ರಾಷ್ಟ್ರೀಯ ಗುಣಮಟ್ಟದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕ್ಯಾಮೆರಾಗಳು, ಎಲ್.ಇ.ಡಿ. ವಾಲ್ಗಳು, ಪ್ರಿಂಟರಗಳು, ಡಿಜಿಟಲ್ ಸಾಮಗ್ರಿಗಳು ಸೇರಿದಂತೆ ಹಲವು ಸರಕು ಸಾಧನಗಳ ಸುಮಾರು ೨೦೦ ಕ್ಕೂ ಹೆಚ್ಚು ಮಳಿಗೆಗಳು ತಮ್ಮ ವ್ಯಾಪಾರ ವಹಿವಾಟು ನಡೆಸಿದವು.
ಸಮಾವೇಶದಲ್ಲಿ ಬಾಗಲಕೋಟ, ಬೆಳಗಾವಿ, ಧಾರವಾಡ ಗ್ರಾಮೀಣ ಜಿಲ್ಲೆ, ಬಳ್ಳಾರಿ, ಬೀದರ್, ಯಾದಗಿರಿ, ಗುಲ್ಬರ್ಗ, ಉತ್ತರ ಕನ್ನಡ, ಸೇರಿದಂತೆ ಸೋಲಾಪುರ, ಅಕ್ಕಲಕೋಟ, ಜತ್ತ, ಸಹಿತ ವಿಜಯಪುದ ಜಿಲ್ಲೆಯ ಎಲ್ಲ ತಾಲೂಕಿನ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಸಂಘದ ಸತೀಶ ಕಲಾಲ, ಸುರೇಶ ರಾಠೋಡ, ಪ್ರಶಾಂತ ಪಟ್ಟಣಶೆಟ್ಟಿ, ರಾಜು ರಜಪುತ, ಗುರುಬಾಳಪ್ಪಾ ಗಲಗಲಿ, ನಾಗರಾಜ ಟಿ.ಸಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಮಹೇಶ ಕುಂಬಾರ, ಶಶಿ ಕುಂಬಾರ, ಸುರೇಶ ಗಲ್ಪಿ, ಸುಭಾಸ ಪವರ, ಕಿಶೋರ, ವಿನೋದ ಮಣೂರ, ಸಂತೋಷ ಹಂಜಗಿ, ಚಂದ್ರು ವಡ್ಡರ್, ಸಹಿತ ಎಲ್ಲ ಛಾಯಾಗ್ರಾಹಕರು ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಡಿಜಿ ಇಮೇಜ್ ಅಂಗವಾಗಿ ಹಮ್ಮಿಕೊಂಡ ಕ್ರಿಕೆಟ್ ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಹಾಗೂ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಿತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಸುರೇಶ ಬಿಜಾಪುರ ಮಾಡಿದರು. ವಂದನಾರ್ಪಣೆಯನ್ನು ರಮೇಶ ಚವ್ಹಾಣ ನೆರವೇರಿಸಿದರು.

