ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕ. ನಮ್ಮೆಲ್ಲರ ಜೀವನಾಡಿಯಾಗಿರುವ ಜಾನಪದ ಸಾಹಿತ್ಯ ಇಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇಯಾದ ವಿಶಿಷ್ಟ ಛಾಪನ್ನು ಮೂಡಿಸುವ ಮೂಲಕ ಮಾತೃ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಕೀರ್ತಿ ಜನಪದ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟರು. ವಿಜಯಪುರ ನಗರದ ಬಸವನ ಬಾಗೇವಾಡಿ ರಸ್ತೆಯಲ್ಲಿರುವ ರೇಣುಕಾ ನಗರ ಹಾಗೂ ಕೃಷಿ ನಗರದ ಬಡಾವಣೆಯಲ್ಲಿ ಮಂಗಳವಾರ ಸಂಜೆ ಶ್ರೀ ಮಲ್ಲಿಕಾರ್ಜುನ ದೇವಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾಂಸ್ಕೃತಿಕ ಸಂಜೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಲ್ಲಿಕಾರ್ಜುನ ಸೇವಾ ಸಮಿತಿ ಇವರ ಸಹಯೋಗದಲ್ಲಿ ಜರುಗಿದ “ಜನಪದ ವೈಭವ” ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಸಾಹಿತ್ಯ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಇಂತಹ ಸಾಹಿತ್ಯದ ಮೂಲಕ ಮಕ್ಕಳಲ್ಲಿ ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿಯ ಹಿರಿಯ ಜಾನಪದ ವಿದ್ವಾಂಸ ಪ್ರೊ.ಬಿ.ಎನ್.ಪಾಟೀಲ ಮಾತನಾಡಿ, ಜಾನಪದ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಇಂದು ವಿಶ್ವಮಾನ್ಯ ಸಾಹಿತ್ಯವಾಗಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ ಎನ್ನುತ್ತ ಜಾನಪದ ಸಾಹಿತ್ಯದ ವಿವಿಧ ಪ್ರಕಾರದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ವೇದಿಕೆಗೆ ಮೆರುಗು ತಂದು ಕೊಟ್ಟರು.
“ಜನಪದ ಸಾಹಿತ್ಯದಲ್ಲಿ ಮಹಿಳೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ತಾಳಿಕೋಟೆಯ ಜಾನಪದ ವಿದ್ವಾಂಸರಾದ ಶಿವಲೀಲಾ ಮುರಾಳ ಮಾತನಾಡಿ, ನಮ್ಮ ಜನಪದ ತಾಯಿ ತನ್ನ ಮಗಳಿಗೆ ಒಳ್ಳೆಯ ಸಂಸ್ಕಾರ, ಆಚಾರ-ವಿಚಾರ, ನಡೆ-ನುಡಿ, ವೇಷ-ಭೂಷಣ, ಬದುಕುವ ರೀತಿ-ನೀತಿ, ಮುಂತಾದ ವಿಚಾರಗಳನ್ನು ಕಲಿಸಿ ಸನಾತನ ಪರಂಪರೆಯನ್ನು ಕಲಿಸಿಕೊಟ್ಟಿದ್ದಾಳೆ. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಟ್ಟು ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದರು. “ಜಾನಪದ ಸಾಹಿತ್ಯದಲ್ಲಿ ಜೀವನ ಕಲೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಾಗ್ಮಿ ಅಶೋಕ ಹಂಚಲಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಬರುವ ಸಮಗ್ರ ಕಲೆಗಳನ್ನು ತಮ್ಮ ಮಾತಿನ ಮೂಲಕ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಡಾ.ಮಾಧವ ಗುಡಿ, ಕಮಲಾ ಮುರಾಳ, ಬಸವನ ಬಾಗೇವಾಡಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಶಿವಾನಂದ ಹಿರೇಮಠ ಉಪಸ್ಥಿತರಿದ್ದು ಮಾತನಾಡಿದರು.
ವೀರಭದ್ರಪ್ಪ ಕಲ್ಯಾಣಿ, ಯಲಗೂರೇಶ್ವರ ದೇಶಪಾಂಡೆ, ಸಂಗಪ್ಪ ಬೆಂಕಿ, ಬಸಯ್ಯ ವಸ್ತ್ರದ, ಮಾಮಲ್ಲಪ್ಪ ಕೋಲಾರ, ಅಡಿವೆಪ್ಪ ಮನಗೂಳಿ, ಜಿ ಎಸ್ ಬಳ್ಳೂರ. ಬಸವರಾಜ ಪೂಜಾರಿ, ಶ್ರೀಶೈಲ ಕನಮಡಿ, ಮಲ್ಲಿಕಾರ್ಜುನ ಪವಾರ, ಮಾನಪ್ಪ ವಾಲಿಕಾರ, ಪ್ರಕಾಶ ಪೂಜಾರಿ, ಪವಾಡೆಪ್ಪ ಮಸಬಿನಾಳ, ಪ್ರಮೋದಕುಮಾರ ಭಾವಿಕಟ್ಟಿ, ರಾಕೇಶ ಬಗಲಿ, ಅಭಿಷೇಕ ಹನಗಂಡಿ ವಿಜಯಕುಮಾರ ತಾಂದಳೆ, ರಾಧಾ ಬಡಿಗೇರ, ಗೋವಿಂದ ರಾಘಾ, ಬಾಳುಗೌಡ ಕಲಾದಗಿ, ಪ್ರಕಾಶ ಕುಲಕರ್ಣಿ. ದಾನಪ್ಪ ಬೆಳ್ಳಿಬಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಕ್ಷಾ ಉಪಾಧ್ಯಾಯ.ಸೃಷ್ಟಿ ನಾಗರಾಳ. ಪೂಜಾ ಬಗಲಿ ಇವರಿಂದ. ಜಾನಪದ ನೃತ್ಯಗಳು ಜರುಗಿದವು.
ಇಂಗಳೇಶ್ವರ ಗ್ರಾಮದ ಶರಣಮ್ಮ ಮಂಗಳೂರು ಜೊಗತಿಯವರಿಂದ ನೃತ್ಯ ಹಾಗು ಚೌಡಕಿ ಪದ ಕಾಯ೯ಕ್ರಮ ಜರುಗಿದವು
ಕವಿತಾ ಕಲ್ಯಾಣಪ್ಪಗೋಳ ಕಾಯ೯ಕ್ರಮ ನಿರೂಪಿಸಿದರು. ಡಾ. ಶೈಲಾ ಬಳಗಾನೂರ ಸ್ವಾಗತಿಸಿ ಗೌರವಿಸಿದರು. ರಶ್ಮಿ ಬದ್ನೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯಶ್ರೀ ಹಿರೇಮಠ ವಂದಿಸಿದರು.

