ಸಿಂದಗಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯ ಸರ್ಕಾರ ೫ಗ್ಯಾರಂಟಿಗಳ ನಡುವೆ ರಾಜ್ಯವನ್ನು ಅತ್ಯಂತ ಸಮಗ್ರವಾಗಿ ಮುಂದುವರೆಸಿಕೊಂಡು ಹೋಗುತ್ತಿದೆ. ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಗೆ ರೂ.೫೦ಕೋಟಿ ಅನುದಾನವನ್ನು ನೀಡುತ್ತಿದ್ದಾರೆ. ಮತ್ತು ಅರಣ್ಯ ಇಲಾಖೆಯಿಂದ ಪ್ರತಿ ಶಾಸಕರಿಗೆ ರೂ.೦೧ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಿಂದಗಿ ಪಟ್ಟಣದ ಹೊನ್ನಪ್ಪಗೌಡ ಲೇಔಟ್ನಲ್ಲಿ ನಿರ್ಮಾಣಗೊಂಡ ಕರ್ನಾಟಕ ಅರಣ್ಯ ಇಲಾಖೆ, ವಿಜಯಪುರ ಹಾಗೂ ಸಿಂದಗಿ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ಹಮ್ಮಿಕೊಂಡ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪ, ಹವಾಮಾನ ವೈಪರಿತ್ಯ ಜಗತ್ತಿನ ಜನರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ. ಬದುಕು ಅಸ್ಥಿರವಾಗುತ್ತಿದೆ. ಬೀಗಿದೆ ಬರುವಂತಹ ಸ್ಥಿತಿಗೆ ಬರುವ ನಿರ್ಮಾಣವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಪ್ರಕೃತಿ ನಾಶವೇ ವಿನಃ ಬೇರೆ ಯಾವುದು ಅಲ್ಲ ಎಂದು ವಿಷಾದವ್ಯಕ್ತಪಡಿಸಿದರು.
ಕರೋನ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ದೇಶದಲ್ಲಿ ತಾಂಡವಾಡುತ್ತಿತ್ತು. ಇದಕ್ಕೆಲ್ಲ ಕಾರಣ ಪರಿಸರದ ನಾಶ. ಈ ದೇಶದಲ್ಲಿ ಸ್ವಚ್ಛಂದವಾಗಿ ಅರಣ್ಯ ಪ್ರದೇಶಗಳು ತಲೆ ಎತ್ತಿ ನಿಂತಿದ್ದರೇ ಕರೋನ ನಮ್ಮಿಂದ ದೂರವಾಗುತ್ತಿತ್ತು. ರಾಜ್ಯದಲ್ಲಿ ಶೇ.೨೧ರಷ್ಟು ಪ್ರದೇಶ ಪರಿಸರ ಮತ್ತು ಅರಣ್ಯಕ್ಕೆ ಮೀಸಲಾಗಬೇಕು. ಆದರೆ ಇಂದು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಪರಿಸರ ಸಂಪತ್ತನ್ನು ಹಾಳು ಮಾಡುತ್ತಿದ್ದೇವೆ. ಕರ್ನಾಟಕದ ಪಶ್ಚಿಮ ಘಟ್ಟದಿಂದ ಅನೇಕ ಅನುಕೂಲಗಳಿವೆ. ಪ್ರಕೃತಿ ಪರಿಸರ ಸಂರಕ್ಷಣೆ ಮಾಡದಿದ್ದರೆ ಮತ್ತು ಪರಿಸರ ಸಮತೋಲನ ಕಾಪಾಡದಿದ್ದರೆ ನಮ್ಮ ಬದುಕು ಅತ್ಯಂತ ದುಸ್ತರವಾಗುತ್ತದೆ. ಇಲ್ಲಿಯವರೆಗೆ ಅರಣ್ಯ ಇಲಾಖೆಯಿಂದ ೧೧.೫ಕೋಟಿ ಸಸಿಗಳನ್ನು ರಾಜ್ಯದಲ್ಲಿ ನೆಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ೫ಲಕ್ಷ ಸಸಿ ನೆಡಲು ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಪರಿಸರ ಉಳಿಯಬೇಕು ನಾವೆಲ್ಲ ಭೌತಿಕ ಸುಖವನ್ನು ನೋಡದೆ ಆರೋಗ್ಯಕರ ಬದುಕಿನ ಕಡೆಗೆ ಹೆಜ್ಜೆ ಹಾಕಬೇಕು ಎಂದರು.
ಇಂದಿನ ಯುವ ಜನಾಂಗ ಮೊಬೈಲ್ ಬಳಕೆಯಿಂದ ದಾರಿತಪ್ಪುತ್ತಿದ್ದಾರೆ. ಅಂತವರಿಗೆ ಉದ್ಯಾನವನದ ಬಳಕೆ ಹೆಚ್ಚು ಪರಿಚಿತಗೊಳ್ಳುವಂತೆ ಮಾಡಬೇಕು. ಆರೋಗ್ಯಕರವಾದ ಭೂಮಿಯನ್ನು ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸಬೇಕು. ಪರಿಸರ ಸ್ನೇಹಿ ಗಣಪತಿಗಳನ್ನು ಕಡ್ಡಾಯವಾಗಿ ನಾವು ಬಳಕೆ ಮಾಡಬೇಕು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಉದ್ಯಾನವನ್ನು ಸಾರ್ವಜನಿಕರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆಯು ವಾಯು ವಿಹಾರ್ಕಕೆ ಸಮಯ ನಿಗದಿಪಡಿಸಬೇಕು. ಸಿಂದಗಿ ನಗರದ ಉದ್ಯಾನವನಗಳ ಅಭಿವೃದ್ಧಿಗೆ ಸಚಿವರು ರೂ.೫-೧೦ಕೋಟಿ ಅನುದಾನ ನೀಡಬೇಕು ಎಂದು ಬೇಡಿಕೆಯಿಟ್ಟರು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿದ್ದರು. ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಇರ್ಷಾದ ನೇವಾರ, ರಾಜೀವ ಬಿರಾದಾರ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಗರದ ಜನತೆ ಇದ್ದರು. ಈ ವೇಳೆ ವಿಜಯಪುರ ಉಪ ಅರಣ್ಯ ವಲಯಾಧಿಕಾರಿ ಮಲ್ಲಿನಾಥ ಕುಸನಾಳ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು.
ಕಾರ್ಯಕ್ರಮಕ್ಕು ಮುನ್ನ ಸಿಂದಗಿ ನಗರದ ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತ, ವಿವೇಕಾನಂದ ವೃತ್ತದಿಂದ ಗೋಲಗೇರಿ ರಸ್ತೆಯವರೆಗೆ ಪಟ್ಟಣದ ಬೀದಿ ದ್ವೀಪಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಡು ಬೆಳೆಸುವ ನಿಟ್ಟಿನಲ್ಲಿ ಸಹಕರಿಸಿ ತಮ್ಮ ತೋಟದಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸಿದ ರೇಣುಕಾ ಎಸ್, ಹಿಕ್ಕನಗುತ್ತಿ ಮಹಾದೇವ ಬಿರಾದಾರ, ಶಿವಪ್ಪ ಹಳ್ಳಿ ಹಚ್ಯಾಳ ಅವರಿಗೆ ಸರಕಾರದಿಂದ ನೀಡುವ ಹಣದ ಚೆಕ್ನ್ನು ವಿತರಣೆ ಮಾಡಿದರು. ಚಿರತೆ ರಕ್ಷಿಸುವಲ್ಲಿ ಸಹಕಾರ ನೀಡಿದ ಆಸಂಗಿಹಾಳ ಗೋವಿಂದ ರಾಠೋಡ, ಸಚಿನ ಪ್ಯಾಟಿ, ನಿವೃತ್ತಿಯಾಗುತ್ತಿರುವ ಎಸ್.ಎಸ್.ಬಿರಾದಾರ, ಸಿಬ್ಬಂದಿಗಳಾದ ವಿಠ್ಠಲ ಚನ್ನೂರ, ಮಹಾದೇವ ಯಂಕಂಚಿ, ಶಿವಪ್ಪಗೌಡ, ಚನ್ನಪ್ಪ ಪೂಜಾರಿ, ರಮೇಶ ಹೇಳವರ ಅವರಿಗೆ ಉತ್ತಮ ಕೆಲಸಗಾರರು ಎಂದು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕೋಟ್
“ಸಿಂದಗಿ ಶಾಸಕ ಅಶೋಕ ಮನಗೂಳಿ ನಮ್ಮ ಮೇಲೆ ಒತ್ತಡ ಹೇರಿ ಉದ್ಯಾನದ ನಿರ್ಮಾಣಕ್ಕೆ ರೂ.೨ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅವರ ಈ ಕಾರ್ಯವನ್ನು ಕಂಡು ಮುಂದಿನ ದಿನಮಾನಗಳಲ್ಲಿ ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸಚಿವರಿಗೆ ಖುದ್ದಾಗಿ ನಾನೇ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲು ಮುಂದಾಗುತ್ತೇನೆ.”
– ಈಶ್ವರ ಖಂಡ್ರೆ
ಅರಣ್ರ ಸಚಿವರು

