ಲೇಖನ- ಧನರಾಜ ಮುಜಗೊಂಡ ( ಲಚ್ಯಾಣ)ಹವ್ಯಾಸಿ ಬರಹಗಾರರು ಅರಣ್ಯಾಧಿಕಾರಿ, ಇಂಡಿ
ಉದಯರಶ್ಮಿ ದಿನಪತ್ರಿಕೆ
ಇಡೀ ಜಗತ್ತಿನ ಧಾರ್ಮಿಕ, ಆಧ್ಯಾತ್ಮಿಕ, ಸನಾತನ ಪರಂಪರೆಯ ಗುರವಾಗಿರುವ ನಮ್ಮ ಭಾರತದಲ್ಲಿ ಜಾತ್ರೆಗಳಿಗೆ, ಉತ್ಸವಗಳಿಗೆ, ಹಬ್ಬಗಳಿಗೆ ಕೊರತೆಯಿಲ್ಲ. ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಿನ್ನೆಲೆಯಲ್ಲಿ ಅನೇಕ ಸಂತರು, ಮಹಾಂತರು ತಪಸ್ಸುಗೈದ ಬಲದಿಂದ ಸಮಾಜಕ್ಕೆ, ಭಕ್ತ ಗಣಕ್ಕೆ ಬೆಳಕಾದ ನಿದರ್ಶನಗಳು ಸಾವಿರಾರು. ಈ ಪರಂಪರೆಯ ಮುಕುಟವೆಂಬoತೆ ನಮ್ಮ ಜಿಲ್ಲೆಯ ಇಂಡಿ ತಾಲ್ಲೂಕಿನ ರಾಷ್ಟ್ರೀಯ ಮಹಾ ಮಾರ್ಗದ ಪಕ್ಕದಲ್ಲಿರುವ ರೈತ ಚಳುವಳಿಯ ಗಟ್ಟಿನೆಲ ನಮ್ಮ ಜೇವೂರ ಗ್ರಾಮ.
ಈ ಪುಣ್ಯ ಭೂಮಿಯಲ್ಲಿ ನೆಲೆನಿಂತ ಹಠಯೋಗಿ ಶ್ರೀ ಶ್ರೀ ಶ್ರೀ ರೇವಣಸಿದ್ಧೇಶ್ವರರು ದೀರ್ಘ ತಪಸ್ಸುಗೈದ ಸಾಧಕ ತಪೋನಿಧಿಗಳು. ತಮ್ಮ ತಪಸ್ಸಿನ ಫಲದಿಂದ ದೊರೆತ ಅದಮ್ಯ ಅಗೋಚರ ಆಧ್ಯಾತ್ಮಿಕ ಶಕ್ತಿಯಿಂದ ಸಾಕ್ಷಾತ್ ಶಿವದರ್ಶನಗೈದ ಶಿವಯೋಗಿಗಳು. ಈ ಅಲೌಕಿಕ ಶಕ್ತಿಯಿಂದ ತಮ್ಮ ಹತ್ತಿರ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಹೊತ್ತುಬಂದ ಭಕ್ತರಿಗೆ ಬೆಳಕು ನೀಡಿ ಜೀವನದ ದಾರಿ ತೋರಿದ ಮಹಾನ್ ದಾರ್ಶನಿಕ ಶಿವಯೋಗಿಗಳು.
ಈ ಮಹಾಮಹಿಮರ 39 ನೇ ಪುಣ್ಯಾರಾಧನೆಯ ನಿಮಿತ್ತ್ಯ ಅನೇಕ ಕಾರ್ಯಕ್ರಮಗಳು ಇದೇ ಮಾರ್ಚ 18ರ ಮಂಗಳವಾರದಿoದ ಮಾರ್ಚ 22ರ ಶನಿವಾರದ ವರೆಗೆ ನೆರವೇರಲಿವೆ. ವಿಶೇಷವೆಂದರೆ ಕೃಷಿ ಪ್ರಧಾನವಾದ ಈ ಊರಿನಲ್ಲಿ ಜನರು ವರ್ಷವಿಡೀ ತಮ್ಮ ಕೃಷಿಕಾಯಕದಲ್ಲಿ, ತಮ್ಮ ತಮ್ಮ ದೈನಂದಿನ ಕಾರ್ಯಗಳಲ್ಲಿ, ಗ್ರಾಮ ರಾಜಕಾರಣದಲ್ಲಿ ಮುಳುಗಿರುತ್ತಾರೆ. ಆದರೆ ಊರ ಜಾತ್ರೆ ಬಂದಾಗ ಇಡೀ ಊರಿಗೆ ಊರೇ ತಮ್ಮ ವೈಯಕ್ತಿಕ ಕಾರ್ಯಗಳನ್ನು ನಾಲ್ಕಾರು ದಿನ ಬದಿಗಿಟ್ಟು ಮನೆ ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ.
ಎಲ್ಲಾ ಜಾತ್ರೆಗಳಲ್ಲಿ ಬಂದ ಯಾತ್ರಿಕರ ಹಸಿವು ನೀಗಿಸಲು ದಾಸೋಹ ವ್ಯವಸ್ಥೆ ಕಲ್ಪಿಸುವುದು ಈಗ ಸರ್ವೇಸಾಮಾನ್ಯ. ಆದರೆ ಜೇವೂರ ಜಾತ್ರೆಯ ದಾಸೋಹದ ಪ್ರಸಾದವನ್ನು ಸವಿದೇ ಅನುಭವಿಸಬೇಕು. ಊರಿನ ಭಕ್ತರಲ್ಲಿಯೇ ಒಬ್ಬರಾದ ಶಾಮಿಯಾನದ ಮಾಲೀಕರೂ ಆಗಿರುವುದರಿಂದ ಇಡೀ ಊರಿಗೇ ಊರೇ ವೈಭವೋಪೇರಿತ ಶಾಮಿಯಾನ ಹಾಕಿರುತ್ತಾರೆ. ಶೃಂಗಾರದ ಹೊಂಗೆ ಮರ ಹೂಬಿಟ್ಟಂತೆ ಇಡೀ ಗ್ರಾಮವನ್ನು ಹೂವಿನ ರೀತಿ ಅಲಂಕೃತಗೊಳಿಸಿರುತ್ತಾರೆ. ಹಠಯೋಗಿ ರೇವಣಸಿದ್ಧೇಶ್ವರರ ದರ್ಶನಗೈದು ಮನರಂಜನೆಯ, ಧಾರ್ಮಿಕ ಕಾರ್ಯಕ್ರಮಗಳನ್ನು ನೋಡಿಕೊಂಡು ಜೇವೂರ ಜಾತ್ರೆಯ ದಾಸೋಹದ ಮನೆಯಲ್ಲಿ ಪ್ರಸಾದ ಸವಿಯದೇ ಮರೆತರೆ ಯಾತ್ರೆ ಅಪೂರ್ಣವಾದೀತು!
ಊರಿನವರೆಲ್ಲರೂ ಬಡವ ಬಲ್ಲಿದನೆನ್ನದೇ, ಹಿರಿ ಕಿರಿಯನೆನ್ನದೇ, ಜಾತಿ ಭೇದವಿಲ್ಲದೇ ನಾಲ್ಕಾರು ದಿನ ಟೊಂಕಕಟ್ಟಿ ನಿಂತು, ಜವಾಬ್ದಾರಿಗಳನ್ನು ಹಂಚಿಕೊಂಡು ಊರ ಜಾತ್ರೆ ಮಾಡುತ್ತಾರೆ. ಜಾತ್ರೆಗೆ ಆಗಮಿಸಿದ ಭಕ್ತರು ದೇವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದರೆ, ಊರಿನ ಸ್ವಯಂ ಸೇವಕರು, ಹಿರಿಯರು ಭಕ್ತರಿಗೆ ಭೂರಿ ಭೋಜನ ಬಡಿಸಿ ಕೃತಾರ್ಥರಾಗಬೇಕೆನ್ನುವ ಧಾವಂತದಲ್ಲಿರುತ್ತಾರೆ. ಹೇಗೆಂದರೆ ಭಕ್ತರು ದೇವರಿಗಾಗಿ, ಊರಿನವರು ಭಕ್ತರ ಸೇವೆಗಾಗಿ ಸನ್ನದ್ದರಾಗಿರುತ್ತಾರೆ.
ಈ ಜಾತ್ರೆಗೆ ಆಗಮಿಸಿದ ಒಂದೊಮ್ಮೆ ದಾಸೋಹದ ಮನೆ ಪ್ರವೇಶಿಸಿದರೆ, ಸಿಹಿ ತಿಂಡಿಗಳಿಗೆ ಇರುವೆ ಮುತ್ತುವ ಹಾಗೆ, ಯಾತ್ರಿಕರ ಸುತ್ತೆಲ್ಲ ಅವರ ಸೇವೆಗಾಗಿ ಸ್ವಯಂ ಸೇವಕರು ಸುತ್ತುವರೆಯುತ್ತಾರೆ. ನಮ್ಮ ಅವ್ವ, ಆಯಿ ನಮ್ಮ ಮನೆಯಲ್ಲಿ ತಯಾರಿಸುತ್ತಿದ್ದ, ಪಕ್ಕಾ ಈ ನೆಲದ ಪದಾರ್ಥಗಳಾದ ಸಜ್ಜಕಾ, ಹುಗ್ಗಿ, ಶಿರಾ, ಹೋಳಿಗೆ, ಸಜ್ಜಿ, ಜೋಳದ ರೊಟ್ಟಿ, ಹುಳುಬಾನ, ಹುಳಾನುಚ್ಚು, ಶೇಂಗಾದ ಹಿಂಡಿ, ಅಗಸಿ ಹಿಂಡಿ, ಕಸಬೆಂಡಿ, ತಂಪಾದ ಅಂಬಲಿ, ಮೆಕ್ಕೆಕಾಯಿ ಉಪ್ಪಿನಕಾಯಿ, ಹಪ್ಪಳ, ಭಜಿ, ಜಿಲೇಬಿ, ಬೂಂದೆ, ಊಟದ ಜೊತೆಗೆ ಸ್ಥಳೀಯ ರೈತರು ಬೆಳೆದ ನೀಡಿದ ಸವತೆಕಾಯಿ, ಮೂಲಂಗಿ, ಗಜ್ಜರಿ, ಮೇಂತೆ ಪಲ್ಯೆ ಮುಂತಾದ ತರಕಾರಿಗಳೊಂದಿಗೆ ತರಹೇವಾರಿ ಭೋಜನ ನೋಡಿದಾಗಲೇ ಬಾಯಿಯಲ್ಲಿ ನೀರೂರಿಸುತ್ತದೆ. ಇವೆಲ್ಲವುಗಳನ್ನು ತಾಯಿಯ ಮಮತೆಯನ್ನು ಬೆರೆಸಿ ಜೇವೂರಿನ ಜನರು ಅತಿಥಿಗಳಿಗೆ ಬಡಿಸುತ್ತಿದ್ದರೆ, ಸ್ವಂತ ಅಡಿಗೆ ಮನೆಯಲ್ಲಿ ತಾಯಿಯ ಪಕ್ಕದಲ್ಲಿ ಕುಳಿತು ಊಟ ಮಾಡಿದ ಅನುಭವವಾಗುತ್ತದೆ.
ಅತಿಥಿ ಸತ್ಕಾರವನ್ನು ಜೇವೂರದವರನ್ನು ನೋಡಿ ಕಲಿಯಬೇಕು. ಒಟ್ಟಾರೆ ಜೇವೂರ ಜಾತ್ರೆಗೆ ಹೋಗಿ ದಾಸೋಹದಲ್ಲಿ ಪ್ರಸಾದ ಸ್ವೀಕರಿಸದೇ ಬಂದರೆ ಜೀವನದ ಯಾತ್ರೆಯೂ ಅಪೂರ್ಣವಾದೀತು. ಮಸ್ತಾಗಿ ಪ್ರಸಾದ ಸವಿದು ಪಕ್ಕದಲ್ಲೇ ಕರ್ನಾಟಕ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸುತ್ತಾಡಿ, ಬಣ್ಣ ಬಣ್ಣದ ವ್ಯಕ್ತಿತ್ವದ ಜನರ ಮಧ್ಯೆ ಬೆರೆತು, ರೇವಣಸಿದ್ಧೇಶ್ವರರ ಕೃಪೆಗೆ ಪಾತ್ರರಾಗಿ ಬಂದರೆ ಮಾತ್ರ ಬದುಕೊಂದು ಯಾತ್ರೆಯಾಗುವದರಲ್ಲಿ ಸಂಶಯವೇ ಇಲ್ಲ. ಜೀವನದಲ್ಲಿ ಉಕ್ಕಿ ಬರುವ ಖುಷಿ, ಕೇಳದೇ ಕಾಡುವ ದುಃಖಗಳ ಕಾದಾಟಗಳೆಲ್ಲವನ್ನೂ ಮರೆತು ಜೇವೂರ ಜಾತ್ರೆಯಲ್ಲಿ ಭಾಗವಹಿಸಿ, ಸಂಭ್ರಮಿಸಿ ದಾಸೋಹದ ಪ್ರಸಾದವನ್ನು ಸವಿದು ಬರೋಣ ಬನ್ನಿ. ತಾವು ಬನ್ನಿ ತಮ್ಮವರನ್ನೂ ಕರೆತನ್ನಿ. ಜೀವನದ ಜಂಜಡ ಕಳೆಯುವ ಜೇವೂರದ ಜಾತ್ರೆಯಲ್ಲಿ ಹಾಯಾಗಿ ಸಂಚರಿಸಿ ಜೀವನದ ಯಾತ್ರೆಗೆ ಸೊಗಸು ತುಂಬೋಣ.


