ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಅದ್ದೂರಿ ಬಸವ ಜಯಂತಿ ಕಾರ್ಯಕ್ರಮ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸೇರಿದಂತೆ ಬಸವಾದಿ ಶರಣರ ವಚನಗಳನ್ನು ಡಾ. ಫ.ಗು ಹಳಕಟ್ಟಿಯಂತವರು ಶರಣರ ವಚನಗಳನ್ನು ಬೆಳಕಿಗೆ ತಂದರು. ಈ ಸಮಾಜಕ್ಕೆ ಶರಣರ ಕೊಡುಗೆ ಅಪಾರ. ಬಸವ ನೆಲದಲ್ಲಿ ಬಸವಣ್ಣನವರ ಚಿಂತನೆಗಳು ಈಗಲೂ, ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಅಸಮಾನತೆ, ಮೇಲು-ಕೀಳು ಅನಿಷ್ಟ ಪದ್ಧತಿ ಮೂಢನಂಬಿಕೆ ತಾಂಡವವಾಡುತ್ತಿತ್ತು. ನಮ್ಮ ನೆಲದಲ್ಲಿ ಜನಿಸಿದ ಬಸವಣ್ಣ ವಚನಗಳ ಮೂಲಕ ಬಸವಾದಿ ಶರಣರ ಕಾಯಕ ದಾಸೋಹ ಕಲ್ಪನೆಯೊಂದಿಗೆ ಸಾಮಾಜಿಕ ಚಳುವಳಿ ಮಾಡುವ ಮೂಲಕ ಸಮಸಮಾಜದ ಕನಸು ಕಂಡು ಆ ನಿಟ್ಟಿನಲ್ಲಿ ನಡೆದಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ
ಅವರು ಬಸವಣ್ಣನವರ ವಚನಗಳನ್ನು ಬಹು ಸೊಗಸಾಗಿ ಹಾಡಿದರು.
ಹಿರಿಯ ಸಾಹಿತಿ ಎಚ್.ಟಿ. ಪೋತೆ ಅವರು ಬಸವಣ್ಣನವರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಮಾಜಿ ಶಾಸಕ ರಾಜು ಆಲಗೂರ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಘನಶ್ಯಾಮ ತೊಶ್ನಿವಾಲ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.
ಶ್ರೀದೇವಿ ಭಂಡಾರಿಕರ ವಿವಿಧ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮ ಬಳಿಕ ಭಗವಂತನ ಮರಣ ನಾಟಕ ಪ್ರದರ್ಶನ ಕಂಡಿತು.

“ಕಾರ್ಲಮಾಕ್ಸ್ ಅಂದು ಕಾಯಕಕ್ಕೆ ಗೌರವ ನೀಡಿದರು. ಅದಕ್ಕಿಂತ ಮುಂಚಿತವಾಗಿ ಬಸವಣ್ಣನವರು ಕಾಯಕ ಹಾಗೂ ದಾಸೋಹಕ್ಕೆ ಗೌರವ ಘನತೆ ನೀಡಿದವರು. ಯಾವುದೇ ಕಾಯಕ ಸಣ್ಣದಲ್ಲ. ಬಸವಣ್ಣ ದಾಸೋಹ ಪರಿಕಲ್ಪನೆ, ಅನುಭವ ಮಂಟಪ ಎಲ್ಲ ವರ್ಗದ ಜನರು ಇದ್ದರು. ಅಲ್ಲಿ ಕಾಯಕವೇ ಮಹತ್ವ ಪಡೆದಿತ್ತು.”
– ಡಾ. ಎಂ.ಬಿ. ಪಾಟೀಲ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

“ಬಸವಣ್ಣನವರು ದಾಸೋಹ ಸಂಸ್ಕೃತಿ ಜಾರಿಗೊಳಿಸಿದರು. ಹಸಿವಿನಿಂದ ಯಾರೂ ಬಳಲಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ತಂದಿದ್ದು, ಆ ಯೋಜನೆಯಡಿ ಬಸವಾದಿ ಶರಣರ ಆಶಯವಿದೆ. ಮೌಢ್ಯತೆ ತೊಡೆದು ಹಾಕಲು ಕೆಲಸ ಮಾಡಿದರು. ಹನ್ನೇರಡನೇ ಶತಮಾನದ ಬಸವಣ್ಣ ರಾಜ ತಂತ್ರಜ್ಞ, ವಿಜ್ಞಾನಿಯಾಗಿದ್ದ, ಸಕಲರಿಗೆ ಲೇಸ ಬಯಸುವ ಗುಣಗಳನ್ನು ಬಸವಣ್ಣನವರು ಹೊಂದಿದ್ದರು. ಶಿವಭಕ್ತರಲ್ಲಿ ವ್ಯತ್ಯಾಸ ಕಾಣಲಿಲ್ಲ. ಬಸವಣ್ಣನವರ ವಚನ ಚಳುವಳಿಯಲ್ಲಿ ಕಾಯಕ ದಾಸೋಹ ಮೊದಲ ಆದ್ಯತೆಯಾಗಿತ್ತು. ಅವರೆಲ್ಲರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅರಿವೇ ಗುರು ಎಂದು ಸಾರಿದವರು ಬಸವಣ್ಣನವರು.”
– ಎಚ್.ಟಿ. ಪೋತೆ
ಹಿರಿಯ ಸಾಹಿತಿ

